ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರವಾಹ, ಭೂಕುಸಿತಗಳು ಸಂಭವಿಸುತ್ತಿವೆ. ಇಡೀ ರಾಜ್ಯ ಮಳೆ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಈವರೆಗೆ ಸುಮಾರು 55 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ, ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ 67 ಮಂದಿ ಪಾರಾಗಿದ್ದಾರೆ. ಅವರು ಬದುಕುಳಿಯಲು ನಾಯಿಯೇ ಕಾರಣವೆಂದು ಹೇಳಲಾಗುತ್ತಿದೆ.
ಮಂಡಿ ಜಿಲ್ಲೆಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ರಾತ್ರಿ ವೇಳೆ ಭೂಕುಸಿತ ಸಂಭವಿಸಿದೆ. ಈ ಭೂಕುಸಿತಕ್ಕೂ ಮುನ್ನ ನಾಯಿ ಜೋರಾಗಿ ಬೊಗಳಿದೆ. ನಾಯಿಯ ಬೊಗಳುವಿಕೆಯಿಂದ ಎಚ್ಚೆತ್ತ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡುರಾತ್ರಿಯಲ್ಲಿ ಇದ್ದಕ್ಕಿದ್ದಂತೆ ನಾಯಿ ಬೊಗಳಲು ಶುರು ಮಾಡಿದೆ. ನಾಯಿ ಜೋರು ಬೊಗಳುವಿಕೆಯಿಂದಾಗಿ ನಿದ್ರೆಯಲ್ಲಿದ್ದ ನರೇಂದ್ರ ಎಂಬವರು ಎಚ್ಚರಗೊಂಡು, ನಾಯಿಯ ಬಳಿ ಹೋಗಿದ್ದಾರೆ. ಆ ವೇಳೆ, ಮನೆಯ ಗೋಡೆ ಬಿರುಕುಬಿಟ್ಟು, ನೀರು ನುಗ್ಗುತ್ತಿರುವುದನ್ನು ಗಮನಿಸಿದ್ದಾರೆ.
ಕೂಡಲೇ, ಸುತ್ತಮುತ್ತಲ 20 ಕುಟುಂಬವರನ್ನು ಎಬ್ಬಿಸಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಎತ್ತರದ ಪ್ರದೇಶದಲ್ಲಿದ್ದ ನೈನಾ ದೇವಿ ದೇವಾಲಯದ ಬಳಿಗೆ ತೆರಳಿದ್ದಾರೆ. ಅದಾದ ಕೆಲವೇ ಸಮಯದಲ್ಲಿ,ಭೂಕುಸಿತ ಸಂಭವಿಸಿದೆ. ಆ 20 ಕುಟುಂಬಗಳ 67 ಮಂದಿ ಅಪಾಯದಿಂದ ಪಾರಾಗಿದ್ದಾರೆ.




