ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ IPAC ಕಚೇರಿ ಮತ್ತು ಟಿಎಂಸಿ ಐಟಿ ವಿಭಾಗದ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸ ಸೇರಿದಂತೆ ಹಲವೆಡೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ.
ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅವರು 2014 ರ ಲೋಕಸಭೆ ಚುನಾವಣೆಗೆ ಮುನ್ನ IPAC ಸಂಸ್ಥೆಯನ್ನು ಸ್ಥಾಪಿಸಿದ್ದರು. 2019 ರ ನಂತರ ಈ ಸಂಸ್ಥೆಯು ತೃಣಮೂಲ ಕಾಂಗ್ರೆಸ್ ಜೊತೆ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಸಾಲ್ಟ್ ಲೇಕ್ನ ‘ಗೋದ್ರೇಜ್ ವಾಟರ್ಸೈಡ್’ ಕಟ್ಟಡದಲ್ಲಿರುವ IPAC ಕಚೇರಿಯಲ್ಲಿ ಶೋಧ ಕಾರ್ಯ ಆರಂಭಿಸಿದರು. ಪ್ರತೀಕ್ ಜೈನ್ ಅವರು ಮಮತಾ ಬ್ಯಾನರ್ಜಿ ಅವರ ಚುನಾವಣಾ ಕಾರ್ಯತಂತ್ರದ ಪ್ರಮುಖ ಸದಸ್ಯರು ಹೌದು. ಇದು ಕೇಂದ್ರ ಸರ್ಕಾರದ ರಾಜಕೀಯ ದ್ವೇಷದ ಕ್ರಮ. ಕೇಂದ್ರದ ಏಜೆನ್ಸಿಗಳು ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಮತ್ತು ರಹಸ್ಯ ತಂತ್ರಗಾರಿಕೆಯ ದಾಖಲೆ ಕಳ್ಳತನ ಮಾಡಲು ಯತ್ನಿಸುತ್ತಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ʻIPAC ಕಚೇರಿ ಬಳಿ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಅವರು ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಂಗಾಳ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಸರ್ಕಾರ ತನ್ನ ರಾಜಕೀಯ ಕುತಂತ್ರ ಬುದ್ಧಿ ಶುರು ಮಾಡಿಕೊಂಡಿದೆ. ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ, ಪಕ್ಷದ ಕಾರ್ಯತಂತ್ರದ ಬಗ್ಗೆ ಹಾಗೂ ಪಕ್ಷದ ಗೌಪ್ಯ ದಾಖಲೆಗಳಿಗಾಗಿ ದಾಳಿ ಮಾಡಲಾಗಿದೆ. ಜಾರಿ ನಿರ್ದೇಶನಲಾಯದ ಅಧಿಕಾರಿಗಳ ಈ ತಂತ್ರ ಅತ್ಯಂತ ದುರದೃಷ್ಟಕರ. ದೇಶವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಗೃಹ ಸಚಿವರು ಈ ಸಂಚಿನ ಹಿಂದೆ ಇದ್ದಾರೆ. ಅಮಿತ್ ಶಾಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬೇಕಾಗಿದೆʼ ಎಂದು ಗುಡುಗಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಾಲುಗಲ್ಲದ ಹುಡುಗ ವೈಭವ್ ಮತ್ತು ಕ್ರಿಕೆಟ್ ಕಲಾತ್ಮಕತೆ
ರಾಜಕೀಯ ತಂತ್ರಗಾರಿಕೆ ಮತ್ತು ಅಭ್ಯರ್ಥಿಗಳ ಪಟ್ಟಿ ಸಂಗ್ರಹ ಮಾಡಿಕೊಳ್ಳೋದು ಜಾರಿ ನಿರ್ದೇಶನಾಲಯ ಅಥವಾ ಗೃಹ ಸಚಿವರ ಕೆಲಸವಾ? ನಾನು ಬಿಜೆಪಿಯ ದಾಖಲೆಗಳನ್ನು ಪಡೆದರೆ ಅದರ ಪರಿಣಾಮ ಏನಾಗಬಹುದು ಯೋಚಿಸಿ, ಯಾವುದೇ ರಕ್ಷಣೆ ಇಲ್ಲದೆ ತನ್ನ ಪಕ್ಷದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಏಜೆನ್ಸಿಗಳ ಕೆಲಸಕ್ಕೆ ಅಡ್ಡಿಪಡಿಸುವ ಇತಿಹಾಸ ಮಮತಾ ಅವರಿಗಿದೆ. ಇ.ಡಿ ತನ್ನ ಕೆಲಸ ಮಾಡುತ್ತಿದೆ. ತನಿಖೆಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಇ.ಡಿ ಮುಖ್ಯಮಂತ್ರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಸುವೇಂದು ಹೇಳಿದರು.





