ಬಡ ಮತ್ತು ಅಸಹಾಯಕ ಮಹಿಳೆಯರನ್ನು ಪದೇ ಪದೇ ಶೋಷಿಸಿ ಅಂಡಾಣು ದಾನ ದಂಧೆ ನಡೆಸುತ್ತಿದ್ದ ಜಾಲವನ್ನು ಮಹಾರಾಷ್ಟ್ರದ ಥಾಣೆಯಲ್ಲಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬದ್ಲಾಪುರ ಪೂರ್ವದ ಜೋವೇಲಿಯಲ್ಲಿರುವ ವಸತಿ ಅಪಾರ್ಟ್ಮೆಂಟ್ ಮತ್ತು ಸೋನೋಗ್ರಫಿ ಕೇಂದ್ರದಗಳಲ್ಲಿ ಈ ಅಕ್ರಮ ದಂಧನೆಯನ್ನು ನಡೆಸಲಾಗುತ್ತಿತ್ತು. ಜಾಲವು ಸಂತ್ರಸ್ತ ಮಹಿಳೆಯರಿಗೆ ಪ್ರತಿ ಋತುಚಕ್ರದಲ್ಲಿ 25,000 ದಿಂದ 30,000 ರೂಪಾಯಿ ನೀಡುವ ಆಮಿಷವೊಡ್ಡಿ, ಅವರನ್ನು ಪದೇ ಪದೇ ಅಂಡಾಣು ದಾನಿಗಳನ್ನಾಗಿ ಬಳಸಿಕೊಳ್ಳುತ್ತಿತ್ತು. ದೈಹಿಕವಾಗಿ ಶೋಷಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಸುಲಕ್ಷಣಾ ಗಾಡೇಕರ್ (44), ಅಶ್ವಿನಿ ಚಾಬುಕ್ಸ್ವರ್ (29) ಹಾಗೂ ಮಂಜುಷಾ ವಾಂಖೇಡೆ (46) ಎಂಬವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಸಂತ್ರಸ್ತೆಯರನ್ನು ಐವಿಎಫ್ (IVF) ಕೇಂದ್ರಗಳಿಗೆ ಕರೆದೊಯ್ದು, ಅಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಂಡಾಣುಗಳನ್ನು ಹೊರತೆಗೆದು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ಈವರೆಗೆ ಸುಮಾರು 20 ಮಹಿಳೆಯರು ಈ ದಂಧೆಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ಅಂಡಾಣು ದಾನ ದಂಧೆಗೆ ಬಲಿಯಾಗಿದ್ದ ಮಹಿಳೆಯೊಬ್ಬರು ಥಾಣೆ ಉಪ-ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಜ್ಯೋತ್ಸ್ನಾ ಸಾವಂತ್ ಅವರಿಗೆ ದೂರು ನೀಡಿದ್ದರು. ಅವರ ದೂರು ಆಧರಿಸಿ ಪೊಲೀಸರು ಆರೋಪಿ ಗಾಡೇಕರ್ ನಿವಾದ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಿ, ಮೊಬೈಲ್ ಫೋನ್ ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
“ಆರೋಪಿಗಳ ಮೊಬೈಲ್ ಫೋನ್ಗಳಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಚುಚ್ಚುಮದ್ದುಗಳ ಫೋಟೋಗಳು, ಸೋನೋಗ್ರಫಿ ವರದಿಗಳು, ಸುಳ್ಳು ಹೆಸರುಗಳಿರುವ ಅಫಿಡವಿಟ್ಗಳು, ನಕಲಿ ದಾಖಲೆಗಳು ಹಾಗೂ ಹಣಕಾಸಿನ ವಹಿವಾಟಿನ ಪುರಾವೆಗಳನ್ನು ನಾವು ವಶಪಡಿಸಿಕೊಂಡಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಅಂಡಾಣು ದಾನ ಎಂಬುದು ಒಂದು ಸಂತಾನೋತ್ಪತ್ತಿ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಒಬ್ಬ ಮಹಿಳೆಯು ಮತ್ತೊಬ್ಬ ಮಹಿಳೆ ಮಗು ಪಡೆಯಲು ತನ್ನ ಅಂಡಾಣುವನ್ನು ಐವಿಎಫ್ ಮೂಲಕ ನೀಡುತ್ತಾರೆ. ಇದರಲ್ಲಿ ದಾನಿಗಳು ತಪಾಸಣೆ ಮತ್ತು ಹಾರ್ಮೋನ್ ಚಿಕಿತ್ಸೆಗೆ ಒಳಗಾಗುತ್ತಾರೆ. ನಂತರ ಅಂಡಾಣುಗಳನ್ನು ಹೊರತೆಗೆದು, ಫಲೀಕರಿಸಿದ ಬಳಿಕ ಸ್ವೀಕರಿಸುವವರ ಗರ್ಭಕ್ಕೆ ವರ್ಗಾಯಿಸಲಾಗುತ್ತದೆ. ಇದನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಮಾಡಬೇಕಿರುತ್ತದೆ.
ಆದರೆ, ಆರೋಪಿಗಳು ಈ ಅಂಡಾಣು ದಾನವನ್ನು ದಂಧೆಯಾಗಿ ಮಾಡಿಕೊಂಡಿದ್ದರು. ಆರ್ಥಿಕ ನೆರವಿನ ಅಗತ್ಯವಿರುವ ಬಡ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಅವರಿಗೆ ಪ್ರತಿ ಋತುಚಕ್ರದಲ್ಲಿ 25,000 ದಿಂದ 30,000 ರೂಪಾಯಿಗಳನ್ನು ನೀಡುತ್ತಿದ್ದರು. ಅಂಡಾಣು ಉತ್ಪಾದನೆಯನ್ನು ಹೆಚ್ಚಿಸಲು ಸಂತ್ರಸ್ತ ಮಹಿಳೆಯರಿಗೆ ಹಾರ್ಮೋನ್ ಚಿಕಿತ್ಸೆಯ ಚುಚ್ಚುಮದ್ದುಗಳನ್ನು ಕೂಡ ನೀಡಲಾಗುತ್ತಿತ್ತು. ಅವರನ್ನು ಪದೇ ಪದೇ ದಾನಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಇದು ಅವರ ದೈಹಿಕ ಶೋಷಣೆಗೆ ಕಾರಣವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಆರ್ಎಸ್ಎಸ್ ಬಲ, ಮಾಧ್ಯಮಗಳ ಬೆಂಬಲದಿಂದ ಬಿಜೆಪಿ ಬದುಕಿದೆಯೇ?
“ಈ ಪ್ರಕ್ರಿಯೆಯಲ್ಲಿ, ಅಂಡಾಣು ಉತ್ಪಾದನೆಯನ್ನು ಹೆಚ್ಚಿಸಲು ಮಹಿಳೆಯರಿಗೆ ಆರೋಪಿಗಳು ಇಂಜೆಕ್ಷನ್ ಕೊಡುತ್ತಿದ್ದರು. ಬಳಿಕ, ಅವರನ್ನು ಸೋನೋಗ್ರಫಿಗಾಗಿ ಕರೆದೊಯ್ಯುತ್ತಿದ್ದರು. ಅಂಡಾಣುಗಳು ಸಿದ್ಧವಾದ ನಂತರ, ಸಂತ್ರಸ್ತೆಯರನ್ನು ಐವಿಎಫ್ ಕೇಂದ್ರಗಳಿಗೆ ಕರೆದೊಯ್ದು, ಅಲ್ಲಿ ಅಂಡಾಣುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು” ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿರುವ ಉಲ್ಲಾಸನಗರದ ಉಪ ಪೊಲೀಸ್ ಕಮಿಷನರ್ ಸಚಿನ್ ಗೋರೆ, “ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರು ಈ ದಂಧೆಗೆ ಬಲಿಯಾಗಿರುವ ಸಾಧ್ಯತೆಯಿದೆ. ದಂಧೆಯು ಇತ್ತೀಚೆಗೆ ಬದ್ಲಾಪುರಕ್ಕೆ ಸ್ಥಳಾಂತರಗೊಳ್ಳುವ ಮೊದಲು ವಂಗಾನಿಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಮಾಹಿತಿ ಇದೆ. ನಾವು ದಂಧೆಯಲ್ಲಿ ಐವಿಎಫ್ ಕೇಂದ್ರಗಳು, ವೈದ್ಯರು ಹಾಗೂ ಆಸ್ಪತ್ರೆಗಳ ಪಾಲುದಾರಿಕೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಅಕ್ರಮ ದಂಧೆಯ ವಹಿವಾಟು ಕೋಟ್ಯಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ದೊಡ್ಡ ವ್ಯಕ್ತಿಗಳ ಹೆಸರುಗಳು ಹೊರಬರುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.




