ಅಜಿತ್ ಪವಾರ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆದಿರುವ ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಅವರು ಹಾಲಿ ಡಿಸಿಎಂ ಏಕನಾಥ್ ಶಿಂಧೆ ಕುರಿತಂತೆ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವೊಂದನ್ನು ಹೊಡೆದುರುಳಿಸುವ ಬೆದರಿಕೆ ಎದುರಾಗಿತ್ತು ಎಂಬ ಗಂಭೀರವಾದ ಆರೋಪವೊಂದನ್ನು ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಮಾಡಿದ್ದಾರೆ. ಅಗತ್ಯ ದಾಖಲೆಗಳು ಹಾಗೂ ಪೂರ್ವಾನುಮತಿ ಇಲ್ಲದೆ ಇರಾನ್ ಮತ್ತು ಇರಾಕ್ ದೇಶಗಳ ವಾಯುಪ್ರದೇಶವನ್ನು ಪ್ರವೇಶಿಸಿದ್ದೇ ಈ ದೊಡ್ಡ ಪ್ರಮಾದಕ್ಕೆ ಕಾರಣವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಯು ಜನವರಿ 16-20, 2023ರ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಆ ಸಮಯದಲ್ಲಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು ಮತ್ತು ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ಪ್ರತಿಷ್ಠಿತ ‘ವಿಶ್ವ ಆರ್ಥಿಕ ವೇದಿಕೆ’ (WEF) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ನಿಯೋಗವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ (ಜನವರಿ 28, 2026) ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನ ಅಪಘಾತಕ್ಕೀಡಾದ ಕುರಿತು ಮಾತನಾಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಪವಾರ್ ಈ ಹಳೆಯ ಘಟನೆಯನ್ನು ವಿವರಿಸಿದ್ದಾರೆ.
“ಸ್ವಿಟ್ಜರ್ಲೆಂಡ್ನ ದಾವೋಸ್ಗೆ ತೆರಳಲು ಶಿಂಧೆ ಅವರು ‘ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಸೇರಿದ ‘ಎಂಬ್ರೇರ್ ಲೆಗಸಿ’ ಎಂಬ ಖಾಸಗಿ ವಿಮಾನವನ್ನು ಬಳಸಿದ್ದರು. ನಿಯಮಗಳ ಪ್ರಕಾರ, ಯಾವುದೇ ಅಂತಾರಾಷ್ಟ್ರೀಯ ಹಾರಾಟಕ್ಕೂ ಮುನ್ನ ‘ಫ್ಲೈಟ್ ಪ್ಲಾನ್’ ಸಲ್ಲಿಸಿ, ಮಾರ್ಗಮಧ್ಯೆ ಬರುವ ಎಲ್ಲ ದೇಶಗಳ ವಾಯುಪ್ರದೇಶ ಪ್ರವೇಶಿಸಲು ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಶಿಂಧೆ ಅವರಿದ್ದ ವಿಮಾನವು ಇಂಧನ ತುಂಬಿಸಿಕೊಂಡು ಜ್ಯೂರಿಚ್ ಕಡೆಗೆ ಹೋಗುವಾಗ ಅನುಮತಿ ಇಲ್ಲದೆಯೇ ಇರಾನ್ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಈ ವೇಳೆ ಎಚ್ಚೆತ್ತ ಇರಾನ್ ಅಧಿಕಾರಿಗಳು, ವಿಮಾನ ಕೂಡಲೇ ಹಿಂದಿರುಗದಿದ್ದರೆ ಅದನ್ನು ಹೊಡೆದುರುಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಬಳಿಕ ವಿಮಾನ ಇರಾಕ್ ಪ್ರದೇಶದ ಮೇಲೆ ಹೋದಾಗಲೂ ಇದೇ ರೀತಿಯ ಬೆದರಿಕೆ ಎದುರಾಗಿತ್ತು” ಎಂದು ರೋಹಿತ್ ಪವಾರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಇರಾನ್ ಮತ್ತು ಇರಾಕ್ನಿಂದ ಎಚ್ಚರಿಕೆಗಳು ಬಂದ ಬೆನ್ನಲ್ಲೇ ವಿಮಾನದಲ್ಲಿ ಇಂಧನವೂ ಕಡಿಮೆಯಾಗತೊಡಗಿತ್ತು. ಇದರಿಂದ ಗಾಬರಿಗೊಂಡ ಪೈಲಟ್ಗಳು ವಿಮಾನವನ್ನು ಮರಳಿ ಬಹ್ರೇನ್ಗೆ ತಂದು ಇಳಿಸಿದರು. ಅಲ್ಲಿ ಬರೋಬ್ಬರಿ ಮೂರು ಗಂಟೆಗಳ ಕಾಲ ಕಾಯ್ದು, ಎಲ್ಲ ದೇಶಗಳ ಅನುಮತಿಯನ್ನು ಅಧಿಕೃತವಾಗಿ ಪಡೆದ ನಂತರವೇ ವಿಮಾನವು ಮತ್ತೆ ಜ್ಯೂರಿಚ್ಗೆ ಪ್ರಯಾಣ ಬೆಳೆಸಿತು. ಈ ಎಲ್ಲ ವಿಚಾರಗಳನ್ನು ಬಹ್ರೇನ್ ವಿಮಾನ ನಿಲ್ದಾಣದಲ್ಲಿರುವ ದಾಖಲೆಗಳು ಹಾಗೂ ಡೇಟಾ ಮೂಲಕ ಸಾಬೀತುಪಡಿಸಬಹುದು ಎಂದು ಪವಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಅಪಘಾತಕ್ಕೀಡಾದ ಅಜಿತ್ ಪವಾರ್ ಅವರ ವಿಮಾನ ಹಾಗೂ ಹಿಂದೆ ಶಿಂಧೆ ಅವರಿಗೆ ಗಂಡಾಂತರ ತಂದೊಡ್ಡಿದ್ದ ವಿಮಾನಗಳೆರಡೂ ಇದೇ ವಿಎಸ್ಆರ್ ಕಂಪನಿಗೆ ಸೇರಿವೆ. ಹೀಗಾಗಿ, ಇಂತಹ ಬೇಜವಾಬ್ದಾರಿ ಕಂಪನಿಯನ್ನು ನಾವು ನಂಬುವುದಿಲ್ಲ ಎಂದು ರೋಹಿತ್ ಪವಾರ್ ಕಿಡಿಕಾರಿದ್ದಾರೆ.
ಇಷ್ಟೊಂದು ಗಂಭೀರ ಆರೋಪಗಳು ಕೇಳಿಬಂದಿದ್ದರೂ, ಏಕನಾಥ್ ಶಿಂಧೆ ಅವರಾಗಲಿ ಅಥವಾ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆಗಲಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟನೆಯನ್ನು ನೀಡಿಲ್ಲ.





