ಜಾತಿ ದಬ್ಬಾಳಿಕೆಯ ಆಘಾತಕಾರಿ ಘಟನೆಯೊಂದರಲ್ಲಿ, 19 ವರ್ಷದ ದಲಿತ ಮಹಿಳೆಯೊಬ್ಬರು ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಪ್ರವೇಶ ನಿರ್ಬಂಧಿಸಲಾದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಪ್ರಬಲ ಜಾತಿಗ ಜಾತಿ ತಾರತಮ್ಯದಿಂದ ಬೇಸತ್ತ ಕುಟುಂಬವು ಅಜ್ಜಿಯ ಅಂತ್ಯಕ್ರಿಯೆಯನ್ನು ರಸ್ತೆ ಮಧ್ಯೆಯೇ ನಡೆಸಿದೆ.
ಗುರುವಾರ ತಡರಾತ್ರಿ, ವೈಶಾಲಿ ಜಿಲ್ಲೆಯ ಗೊರೌಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಧೋ ಅಂಧಾರಿ ಗಚ್ಚಿ ಚೌಕ್ನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಸೊಂಧೋ ವಾಸುದೇವ್ ಗ್ರಾಮದ ನಿವಾಸಿ ಝಾಪಿ ದೇವಿ ಎಂದು ಗುರುತಿಸಲಾಗಿದೆ.
ಕುಟುಂಬಸ್ಥರು ಮತ್ತು ಬಂಧುಗಳು ಮಹಿಳೆಯ ಮೃತದೇಹ ಹೊತ್ತು ಸ್ಮಶಾನದೆಡೆಗೆ ಹೊರಟಿದ್ದರು. ಆದರೆ, ಪ್ರಬಲ ಜಾತಿಯ ಕೆಲವು ಜಾತಿವಾದಿಗಳು ರಸ್ತೆಯನ್ನು ಗಡ್ಡಗಟ್ಟಿ, ಅವರು ಸ್ಮಶಾನಕ್ಕೆ ಹೋಗದಂತೆ ತಡೆದಿದ್ದಾರೆ. ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸದಂತೆ ತಾಕೀತು ಮಾಡಿದ್ದಾರೆ. ಪರಿಣಾಮ, ಅಂತ್ಯಕ್ರಿಯೆಗೆ ಬೇರಾವುದೇ ಸ್ಥಳವಿಲ್ಲದ ಕಾರಣ, ರಸ್ತೆ ನಡುವೆಯೇ ಅಂತ್ಯಕ್ರಿಯೆ ನಡೆಸಲಾಗಿದೆ.
“ಝಾಪಿ ದೇವಿ ಅವರ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ, ಕೆಲವರು ದಾರಿಯಲ್ಲಿ ಅಡ್ಡಗಟ್ಟಿದರು. ಮುಂದೆ ಸಾಗಲು ಸಾಧ್ಯವಾಗದಂತೆ ಮಾಡಿದರು. ನಿರಂತರ ಮಾತಕತೆ-ಪ್ರಯತ್ನಗಳು ನಡೆದವು. ಮಾಹಿತಿ ಪಡೆದ ಗೊರೌಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಆದರೂ, ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ದಾರಿಯಲ್ಲಿಯೇ ಚಿತೆಯನ್ನು ಸಿದ್ದಪಡಿಸಿ, ಅಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ಮೇಲೆ ಮರುದಾಳಿಗೆ ಸಜ್ಜಾಗಿದೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ
ಸ್ಮಶಾನಕ್ಕೆ ಹೋಗುವ ಮಾರ್ಗವನ್ನು ದೀರ್ಘಕಾಲದವರೆಗೆ ನಿರ್ಬಂಧಿಸಲಾಗಿದೆ. ಇದರಿಂದಾಗಿ ಗ್ರಾಮಸ್ಥರಿಗೆ ನಿರಂತರ ತೊಂದರೆ ಉಂಟಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಪದೇ ಪದೇ ದೂರು ನೀಡಿದ್ದರೂ, ಆಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿರುವ ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವರ್ಷಾ ಸಿಂಗ್, ಘಟನೆಯ ತನಿಖೆಗಾಗಿ ಮಹುವಾ ಉಪವಿಭಾಗಾಧಿಕಾರಿ, ಪೊಲೀಸ್ ಉಪ ವರಿಷ್ಠಾಧಿಕಾರಿ ಮತ್ತು ಗೋರೌಲ್ ಪಿಡಿಒ ಒಳಗೊಂಡ ಸಮಿತಿ ರಚಿಸಿದ್ದಾರೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.




