ತನ್ನ ಹೆತ್ತವರಿಗೆ ಮಾದಕ ದ್ರವ್ಯ ನೀಡಿ ಆಳು ಮನೆ ದೋಚಿಸಿರುವುದಾಗಿ ಅಮಾನತುಗೊಂಡ ಮಾಜಿ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಆರೋಪಿಸಿದ್ದಾರೆ. ಫೊನ್ಗಳನ್ನು, ಇತರೆ ಕೆಲವು ವಸ್ತುಗಳನ್ನು ಕದಿಯಲಾಗಿದ್ದು, ಪುಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಖೇಡ್ಕರ್ ಕುಟುಂಬವು ವಾಸಿಸುತ್ತಿರುವ ಬನೇರ್ ರಸ್ತೆಯ ಬಂಗಲೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕೇವಲ ಎಂಟು ದಿನಗಳ ಹಿಂದೆ ನೇಪಾಳದಿಂದ ಆಗಮಿಸಿದ್ದ ಆಳು ಓರ್ವ ಈ ಅಪರಾಧ ಎಸಗಿರುವುದಾಗಿ ಶಂಕಿಸಲಾಗಿದೆ. ಆಳು ತನ್ನ ಪೋಷಕರಾದ ದಿಲೀಪ್ ಮತ್ತು ಮನೋರಮಾ ಖೇಡ್ಕರ್ಗೆ ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿದ್ದಾರೆ ಎಂದು ಖೇಡ್ಕರ್ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ತನ್ನನ್ನು ಕಟ್ಟಿಹಾಕಿ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ಫೋನ್ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ನಕಲಿ ಪ್ರಮಾಣ ಪತ್ರ ಪ್ರಕರಣ: ಮಾಜಿ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ತನ್ನನ್ನು ತಾನು ಬಿಡಿಸಿಕೊಂಡ ಪೂಜಾ ಖೇಡ್ಕರ್ ನಂತರ ಮತ್ತೊಂದು ಫೋನ್ ಬಳಸಿ ಪೊಲೀಸರನ್ನು ಸಂಪರ್ಕಿಸಿದ್ದು, ಚತುರ್ಶೃಂಗಿ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಈ ವೇಳೆ ದಿಲೀಪ್ ಮತ್ತು ಮನೋರಮಾ ಖೇಡ್ಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ತಕ್ಷಣ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಖೇಡ್ಕರ್ ಇನ್ನೂ ಲಿಖಿತ ದೂರು ನೀಡಿಲ್ಲ, ಮಾನಸಿಕವಾಗಿ ಉಂಟಾದ ಆಘಾತದಿಂದ ಸುಧಾರಿಸಿಕೊಂಡು ಲಿಖಿತ ದೂರು ನೀಡುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಮೊಬೈಲ್ ಫೋನ್ಗಳನ್ನು ಹೊರತುಪಡಿಸಿ ಮನೆಯಿಂದ ಬೇರೆ ಯಾವುದೇ ವಸ್ತುಗಳು ಕಳುವಾಗಿವೆಯೇ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.
ಪೂಜಾ ಖೇಡ್ಕರ್ ಯಾರು?
ಮಹಾರಾಷ್ಟ್ರ ಕೇಡರ್ನ 2023ರ ಬ್ಯಾಚ್ನ ಐಎಎಸ್ ಟ್ರೈನಿ ಪೂಜಾ ಖೇಡ್ಕರ್, ಅಧಿಕಾರ ದುರುಪಯೋಗ ಮತ್ತು ವಂಚನೆಯ ಆರೋಪಗಳಲ್ಲಿ ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ವಂಚನೆ ಮತ್ತು ಅರ್ಹತಾ ನಿಯಮಗಳ ಉಲ್ಲಂಘನೆಯ ಆರೋಪದಲ್ಲಿ ಕೇಂದ್ರ ಸರ್ಕಾರವು 2024ರ ಸೆಪ್ಟೆಂಬರ್ನಲ್ಲಿ ಪೂಜಾ ಖೇಡ್ಕರ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಹಾಗೆಯೇ ಸುಳ್ಳು ಮಾಹಿತಿ ನೀಡಿ ನಿಗದಿತ ಮಿತಿಗಿಂತ ಅಧಿಕ ಬಾರಿ ಪರೀಕ್ಷೆ ಬರೆದ ಆರೋಪದಲ್ಲಿ ಯುಪಿಎಸ್ಸಿ ಪೂಜಾ ಅಭ್ಯರ್ಥಿತನವನ್ನು ರದ್ದುಗೊಳಿಸಿದೆ. ಹಾಗೆಯೇ ಭವಿಷ್ಯದಲ್ಲಿ ಯಾವುದೇ ಪರೀಕ್ಷೆ ಬರೆಯದಂತೆ ಶಾಶ್ವತವಾಗಿ ನಿರ್ಬಂಧಿಸಿದೆ. ಜತೆಗೆ ಒಬಿಸಿ (OBC) ಮೀಸಲಾತಿ ಮತ್ತು ಅಂಗವೈಕಲ್ಯ ಕೋಟಾವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಮಾಣಪತ್ರಗಳ ಮೂಲಕ ಐಎಎಸ್ ಹುದ್ದೆಗಿಟ್ಟಿಸಿಕೊಂಡಿರುವ ಗಂಭೀರ ಆರೋಪವೂ ಇದೆ.





