ಪಂಜಾಬ್ನ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರ ಪುತ್ರ ಅಕೀಲ್ ಅಖ್ತರ್ (35) ಅವರ ಸಾವಿನ ಪ್ರಕರಣದಲ್ಲಿ ಆಘಾತಕಾರಿ ತಿರುವು ದೊರಕಿದೆ. ಮುಸ್ತಫಾ ಅವರ ಪುತ್ರ ಅಖೀಲ್ ಅಖ್ತರ್ (35) ಆಗಸ್ಟ್ ತಿಂಗಳಲ್ಲಿ ಪಂಚಕುಲಾದ ತಮ್ಮ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಕುಟುಂಬದವರು ಡ್ರಗ್ ಅತಿಯಾದ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದರು. ಆದರೆ, ಸಾವಿಗೆ ಕೆಲ ದಿನಗಳ ಮುಂಚೆ ಅಕೀಲ್ ಮಾಡಿದ್ದ 16 ನಿಮಿಷಗಳ ವಿಡಿಯೋದಲ್ಲಿ ತಂದೆಯು ತಮ್ಮ ಖಾಸಗಿ ಜೀವನದಲ್ಲಿ ಪ್ರವೇಶಿಸಿದ್ದು, ಕುಟುಂಬದವರು ತನ್ನನ್ನು ಕೊಲ್ಲುವ ಅಥವಾ ತಪ್ಪುದಾರಿಗೆಳೆಯುವ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕೀಲ್ ಅವರ ನೆರೆಯವರಾದ ಶಮ್ಶುದ್ದೀನ್ ಚೌಧರಿ ಅವರು ಪೊಲೀಸರಿಗೆ ಈ ವೀಡಿಯೋವನ್ನು ಸಲ್ಲಿಸಿ, ದೂರು ದಾಖಲಿಸಿದ್ದು, ವಿವರವಾದ ತನಿಖೆಗೆ ಒತ್ತಾಯಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಹರಿಯಾಣ ಪೊಲೀಸರು ಮೊಹಮ್ಮದ್ ಮುಸ್ತಫಾ, ಅವರ ಪತ್ನಿ ಮತ್ತು ಮಾಜಿ ಸಚಿವೆ ರಜಿಯಾ ಸುಲ್ತಾನಾ, ಅವರ ಮಗಳು ಹಾಗೂ ಅಕೀಲ್ ಅವರ ಪತ್ನಿ (ಸೊಸೆ) ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆಗೆ ಶಿಕ್ಷೆ) ಮತ್ತು 61 (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 27ರಂದು ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ಅಕೀಲ್ ಅವರು ತಮ್ಮ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ತಂದೆ ಮೊಹಮ್ಮದ್ ಮುಸ್ತಫಾ ಅವರು ತಮ್ಮ ಪತ್ನಿಯೊಂದಿಗೆ ಸಲುಗೆಯಿಂದಿದ್ದರು ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು 2018ರಲ್ಲಿ ಕಂಡುಹಿಡಿದ ನಂತರ ತಾನು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ತಾಯಿ ಮತ್ತು ಅಕ್ಕ ತನ್ನನ್ನು ಕೊಲ್ಲುವ ಅಥವಾ ತಪ್ಪು ಕೇಸುಗಳಲ್ಲಿ ಸಿಲುಕಿಸುವ ಪಿತೂರಿ ಮಾಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ಅಕೀಲ್ ಅವರು ತಮ್ಮ ವ್ಯವಹಾರದ ಆದಾಯದಿಂದ ವಂಚಿತರಾಗಿದ್ದು, ತಪ್ಪುದಾರಿಗೆಳೆದು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ತಮ್ಮ ವೈಯಕ್ತಿಕ ವಿಷಯಗಳಲ್ಲಿ ಕುಟುಂಬದ ಹಸ್ತಕ್ಷೇಪದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದೇನೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ. ಅಕೀಲ್ ಅವರ ಸಾವಿನಲ್ಲಿ ಅನುಮಾನಾಸ್ಪದ ಅಂಶಗಳಿವೆ ಎಂದು ದೂರುದಾರರು ಹೇಳಿದ್ದಾರೆ.
ಪಂಚಕುಲಾದ ಮಾನ್ಸಾ ದೇವಿ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 20ರಂದು ಎಫ್ಐಆರ್ ದಾಖಲಾಗಿದ್ದು, ಡಿಸಿಪಿ ಶ್ರೀಷ್ಟಿ ಗುಪ್ತಾ ಅವರು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದಾರೆ. ಎಸಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅಕೀಲ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು, ಡಿಜಿಟಲ್ ಸಾಕ್ಷ್ಯಗಳು, ಕಾಲ್ ರೆಕಾರ್ಡ್ಗಳು, ಮರಣೋತ್ತರ ಪರೀಕ್ಷೆ ವರದಿ ಮತ್ತು ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಪರಿಶೀಲಿಸಲಾಗುತ್ತದೆ.
ಮೊದಲು ಸಾವಿನಲ್ಲಿ ಅನುಮಾನಾಸ್ಪದ ಅಂಶಗಳಿಲ್ಲ ಎಂದು ಭಾವಿಸಿ ಮರಣೋತ್ತರ ಪರೀಕ್ಷೆ ವರದಿ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ವಿಡಿಯೋ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಬೆಳಕಿಗೆ ಬಂದ ನಂತರ ತನಿಖೆ ಆರಂಭವಾಗಿದೆ.
ಅಕೀಲ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ವಕೀಲರಾಗಿದ್ದರು. ಕುಟುಂಬದಲ್ಲಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯಗಳಿದ್ದವು ಎಂದು ದೂರುದಾರ ಶಮ್ಶುದ್ದೀನ್ ಹೇಳಿದ್ದಾರೆ. ಈ ಪ್ರಕರಣ ಹೈಪ್ರೊಫೈಲ್ ಆಗಿದ್ದು, ಮಾಜಿ ಡಿಜಿಪಿ ಮತ್ತು ಸಚಿವೆಯ ಕುಟುಂಬಕ್ಕೆ ಸಂಬಂಧಿಸಿದ್ದರಿಂದ ಸಾರ್ವಜನಿಕ ಗಮನ ಸೆಳೆದಿದೆ. ನ್ಯಾಯಾಂಗದಲ್ಲಿ ಸಂತ್ರಸ್ತನಿಗೆ ನ್ಯಾಯ ದೊರೆಯಬೇಕು ಎಂದು ಒತ್ತಾಯಿಸಲಾಗಿದೆ.





