ಆಧುನಿಕ ಭಾರತದ ಪ್ರಸಿದ್ಧ ಇತಿಹಾಸಕಾರ, ಶಿಕ್ಷಣತಜ್ಞ ಹಾಗೂ ಜಾತ್ಯತೀತ ಇತಿಹಾಸ ರಚನೆಯ ಪ್ರತಿಪಾದಕ ಕೆ ಎನ್ ಪಣಿಕ್ಕರ್ (89) ಅವರು ಇಂದು (ಮಾರ್ಚ್ 9) ಕೇರಳದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ಇತಿಹಾಸದ ಕೋಮುವಾದಿ ವ್ಯಾಖ್ಯಾನಗಳನ್ನು ನಿರಂತರವಾಗಿ ಖಂಡಿಸುತ್ತಿದ್ದ ಪಣಿಕ್ಕರ್ ಅವರು, ಆಧಾರಸಹಿತ ಹಾಗೂ ಬೌದ್ಧಿಕ ಪ್ರಾಮಾಣಿಕತೆಯಿಂದ ಇತಿಹಾಸ ರಚನೆಯಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು. ಇವರ ಬರಹಗಳು ಮತ್ತು ಅಧ್ಯಯನಗಳು ಅನೇಕ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ರಾಜಕೀಯ-ಸಾಂಸ್ಕೃತಿಕ ಕ್ಷೇತ್ರದ ಮೇಲೆ ಆಳವಾದ ಪ್ರಭಾವ ಬೀರಿವೆ.
ತಮ್ಮ ಶೈಕ್ಷಣಿಕ ವೃತ್ತಿಜೀವನದಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (IIPA) ನಲ್ಲಿ ಬೋಧಕರಾಗಿದ್ದ ಅವರು 1972ರಲ್ಲಿ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) ಸೇರಿದರು. ಜೆಎನ್ಯುನಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ, ‘ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್’ ಮುಖ್ಯಸ್ಥರಾಗಿ ಹಾಗೂ ‘ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್’ನ ಡೀನ್ ಆಗಿ ಸೇವೆ ಸಲ್ಲಿಸಿದ್ದರು. ಕೇವಲ ಬೋಧನೆಯಲ್ಲದೆ, ಅವರು ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹಾಗೂ ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.
ಇದರ ಜೊತೆಗೆ, ಕೇರಳ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (KCHR) ನ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. 2008ರಲ್ಲಿ ದೇಶದ ವೃತ್ತಿಪರ ಇತಿಹಾಸಕಾರರ ಅತಿದೊಡ್ಡ ಸಂಸ್ಥೆಯಾದ ‘ಇಂಡಿಯನ್ ಹಿಸ್ಟರಿ ಕಾಂಗ್ರೆಸ್’ ನ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು ಮತ್ತು ‘ಕೇರಳ ಹಿಸ್ಟರಿ ಕಾಂಗ್ರೆಸ್’ ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ಮುಂದಿನ ತಿಂಗಳು (ಏಪ್ರಿಲ್ 26 ರಂದು) ಪಣಿಕ್ಕರ್ ಅವರ 90ನೇ ಜನ್ಮದಿನವನ್ನು ಆಚರಿಸಲು ಕೆಸಿಎಚ್ಆರ್ (KCHR) ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ ಸಂದರ್ಭದಲ್ಲಿಯೇ ಈ ದುಃಖದ ಘಟನೆ ನಡೆದಿದೆ.





