ಹರಿಯಾಣದ ಫರಿದಾಬಾದ್ ಜಿಲ್ಲೆಯ ಫತೇಪುರ್ ಬಿಲ್ಲೋಚ್ ಗ್ರಾಮದಲ್ಲಿ ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 25 ವರ್ಷದ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲ್ಲಭಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೇವೇಂದ್ರ ಮೃತನು. ಫತೇಪುರ್ ಬಿಲ್ಲೋಚ್ ಗ್ರಾಮದ ನಿವಾಸಿ ಸುಂದರ್ ಲಾಲ್ ನೀಡಿದ ದೂರಿನ ಪ್ರಕಾರ, ಜೂ.26ರ ರಾತ್ರಿ ಗ್ರಾಮದಲ್ಲಿ ತನ್ನ ಸಂಬಂಧಿ ದೇವೇಂದ್ರ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದಾಗ ಮೇಲ್ಜಾತಿ ಸಮುದಾಯವರು ದೇವೇಂದ್ರ ಅವರನ್ನು ಜಾತಿ ನಿಂದನೆ ಮಾಡಿದ್ದಾರೆ. ಇದನ್ನು ಪ್ರತಿಭಟಿಸಿದಾಗ ಹಲ್ಲೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಮುದಾಯವಾರು ಡಿಸಿಎಂ ಬೇಡಿಕೆಯೂ, ಮುಖ್ಯಮಂತ್ರಿಗಳ ಮೌನವೂ
ಜಗಳ ವಿಕೋಪಕ್ಕೆ ಹೋಗಿದ್ದು, ಎರಡೂ ಕಡೆಯ ಸದಸ್ಯರು ಸ್ಥಳಕ್ಕಾಗಮಿಸಿದಾಗ ಆರೋಪಿಗಳು ದೇವೇಂದ್ರನ ಮೇಲೆ ಗುಂಡು ಹಾರಿಸಿದ್ದು, ಅವರು ಸ್ಥಳದಲ್ಲೇ ಮೇತಪಟ್ಟಿದ್ದಾರೆ. ಇದರ ನಂತರ ಮೇಲ್ಜಾತಿ ಸಮುದಾಯದವರು ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ದಲಿತ ಸಮುದಾಯದ ಇತರರ ಮೇಲೂ ಗುಂಡು ಹಾರಿಸಿದರು. ಗಲಭೆಯಲ್ಲಿ ಇನ್ನೂ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ಯೆಯ ನಂತರ ದಲಿತ ಸಮುದಾಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಸುಂದರ್ ಲಾಲ್ ತಿಳಿಸಿದ್ದಾರೆ
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೊಲೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆ ಸೇರಿದಂತೆ ಬಲ್ಲಭಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





