ಜಮೀನು ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕನೊಬ್ಬ ರೈತರೊಬ್ಬರನ್ನು ಹತ್ಯೆ ಮಾಡಿದ್ದು, ಕೊಲೆಯನ್ನು ತಡೆಯಲು ಬಂದ ರೈತನ ಪುತ್ರಿಯರ ಮೇಲೆ ಹಲ್ಲೆಯ ಜೊತೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಧ್ಯ ಪ್ರದೇಶದ ಗುಣಾ ಜಿಲ್ಲೆಯ ಗಣೇಶ್ಪುರ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ನಾಯಕ ಮಹೇಂದ್ರ ನಾಗರ್ ಮತ್ತು ಆತನ ಸಹಚರರು ರಾಮಸ್ವರೂಪ ಧಾಕಡ್ ಎಂಬ ರೈತನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆ ಫತೇಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೈತ ರಾಮಸ್ವರೂಪ ಧಾಕಡ್ ಅವರು ಪತ್ನಿಯೊಂದಿಗೆ ಹೊಲಕ್ಕೆ ತೆರಳುತ್ತಿದ್ದ ವೇಳೆ ಮಹೇಂದ್ರ ನಾಗರ್ ಮತ್ತು ಅವರ ಗುಂಪು ಅವರನ್ನು ಮಾರ್ಗಮಧ್ಯೆ ತಡೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳು ರೈತನ ಮೇಲೆ ಜೀಪನ್ನು ಹರಿಸಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯಲ್ಲಿ ಆರೋಪಿಗಳು ಮಧ್ಯಪ್ರವೇಶಿಸಲು ಬಂದ ರೈತನ ಇಬ್ಬರು ಪುತ್ರಿಯರ ಮೇಲೂ ಹಲ್ಲೆ ನಡೆಸಿದ್ದಾರೆ. “ನಾನು ತಂದೆಯನ್ನು ರಕ್ಷಿಸಲು ಹೋದಾಗ ಅವರು ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿದರು. ಬಂದೂಕಿನಿಂದ ಗುಂಡು ಹಾರಿಸಿ ಬೆದರಿಸಿದರು” ಎಂದು ಸಂತ್ರಸ್ತ ರೈತರ ಪುತ್ರಿಯರು ತಿಳಿಸಿದ್ದಾರೆ.
“ಸುಮಾರು ಒಂದು ಗಂಟೆಯವರೆಗೆ ದಾಳಿ ಮುಂದುವರಿದಿತ್ತು. ಆ ಸಮಯದಲ್ಲಿ ಸುಮಾರು 20 ಜನರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದರು. ಇಬ್ಬರು ಬಾಲಕಿಯರ ಬಟ್ಟೆ ಹರಿದು, ನಂತರ ಆರೋಪಿಗಳು ವಾಹನವನ್ನು ಹರಿಸಿ ಹತ್ಯೆ ಮಾಡಿದ್ದಾರೆ” ಎಂದು ರೈತನ ಸಹೋದರ ರಾಮಕುಮಾರ್ ಅವರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?
ಗಾಯಗೊಂಡ ರೈತನನ್ನು ಸುಮಾರು ಒಂದು ಗಂಟೆಯವರೆಗೆ ಆಸ್ಪತ್ರೆಗೆ ಕರೆದೊಯ್ಯಲು ಅನುಮತಿಸಲಿಲ್ಲ. ಗನ್ ಹಿಡಿದು ಬೆದರಿಸಿದರು ಎಂದು ಆರೋಪಿಸಲಾಗಿದೆ. ಕೊನೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆನಂತರ ಚಿಕಿತ್ಸೆ ವೇಳೆ ಅವರು ಮೃತಪಟ್ಟರು ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹೇಂದ್ರ ನಾಗರ್ ಹಾಗೂ ಅವರ ಕುಟುಂಬದ ಮೂವರು ಮಹಿಳೆಯರು ಹಾಗೂ ಇತರ 14 ಜನರ ವಿರುದ್ಧ ಹತ್ಯೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಫತೇಗಢ ಠಾಣಾಧಿಕಾರಿ ತಿಳಿಸಿದ್ದಾರೆ.
ಬಾಮೋರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಋಷಿ ಅಗ್ರವಾಲ್ ಈ ಘಟನೆಯನ್ನು ಖಂಡಿಸಿದ್ದಾರೆ, “ಮಧ್ಯಪ್ರದೇಶದಲ್ಲಿ ಹಿಂಸೆ, ಲೂಟಿ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವವರು ಈ ಎಲ್ಲವನ್ನು ನೋಡುತ್ತಾ ಸುಮ್ಮನಿದ್ದಾರೆ. ಪೊಲೀಸರು ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಮಹೇಂದ್ರ ನಾಗರ್ ಕಳೆದ ಕೆಲವು ವರ್ಷಗಳಿಂದ ಸಣ್ಣ ರೈತರಿಗೆ ಬೆದರಿಕೆ ಹಾಕಿ, ಸುಮಾರು 25 ರೈತರನ್ನು ತಮ್ಮ ಜಮೀನನ್ನು ಕಡಿಮೆ ಬೆಲೆಗೆ ಮಾರುವಂತೆ ಒತ್ತಾಯಿಸಿ, ಗ್ರಾಮದಿಂದ ಓಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಯ ನಂತರ ಆರೋಪಿಯು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಸೇರಿದಂತೆ ಮುಂತಾದ ಗಣ್ಯರ ಜೊತೆಯಿರುವ ಫೋಟೊಗಳು ವೈರಲ್ ಆಗುತ್ತಿವೆ.





