ದೆಹಲಿ ಚಲೋ ಮೆರವಣಿಗೆ ಇಂದು ಬೆಳಿಗ್ಗೆ(ಫೆ.21) 11 ಗಂಟೆಗೆ ಪುನಃ ಪ್ರಾರಂಭವಾಗಿದ್ದು, ಪಂಜಾಬ್ – ಹರಿಯಾಣ ಗಡಿಯಲ್ಲಿ ಭದ್ರತಾಪಡೆಗಳು ರೈತರತ್ತ ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿವೆ. ಎಂಎಸ್ಪಿ ಗ್ಯಾರಂಟಿ ಖಾತರಿಗಾಗಿ ಕೇಂದ್ರ ಸರ್ಕಾರವು ಐದನೇ ಸುತ್ತಿನ ಮಾತುಕತೆಗೆ ರೈತ ಮುಖಂಡರನ್ನು ಆಹ್ವಾನಿಸಿದೆ.
ಪೊಲೀಸ್ ಬ್ಯಾರಿಕೇಡ್ಗಳನ್ನು ಕೆಡವಲು ರೈತರು ತಂದಿರುವ ಸಲಕರಣೆಗಳನ್ನು ವಶಪಡಿಸಿಕೊಳ್ಳುವಂತೆ ಪಂಜಾಬ್ ಪೊಲೀಸರಿಗೆ ಹರಿಯಾಣ ಪೊಲೀಸರು ಆಗ್ರಹಿಸಿದ್ದಾರೆ. ದೆಹಲಿ ಚಲೋ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಎರಡು ರಾಜ್ಯಗಳ ಗಡಿಯಲ್ಲಿ 14 ಸಾವಿರಕ್ಕೂ ಹೆಚ್ಚಿನ ರೈತರು, 1200 ಟ್ರಾಕ್ಟರ್ಗಳು, 300 ಕಾರುಗಳು ಹಾಗೂ 10 ಮಿನಿ ಬಸ್ಗಳು ಆಗಮಿಸಿವೆ.
ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರಾಷ್ಟ್ರ ರಾಜಧಾನಿಯತ್ತ ರೈತರು ಬರುವುದನ್ನು ತಡೆಯಲು ಫೆ.13ರಿಂದಲೇ ಅಂತರ್ರಾಜ್ಯ ಗಡಿಯನ್ನು ಬಂದ್ ಮಾಡಿದ್ದಾರೆ. ಕೇಂದ್ರ ಹಾಗೂ ಹರಿಯಾಣ ಸರ್ಕಾರ ರೈತರ ಪ್ರತಿಭಟನೆ ಬಗ್ಗೆ ಪಂಜಾಬ್ ಹಾಗೂ ಹರಿಯಾಣ ಕೋರ್ಟ್ಗಳಿಗೆ ಮನವಿ ಸಲ್ಲಿಸಿದ್ದು, ಆದರೆ ಕೋರ್ಟ್ಗಳು ತುರ್ತಾಗಿ ವಿಚಾರಣೆ ಕೈಗೊಳ್ಳಲು ನಿರಾಕರಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?
ರೈತ ಪ್ರತಿಭಟನೆ ಪುನರಾರಂಭವಾದ ನಂತರ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಸರ್ವಾನ್ ಸಿಂಗ್ ಪಂಡೇರ್, ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರವು ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಯಾವುದೇ ಅಡೆತಡೆಯಿಲ್ಲದೆ ದೆಹಲಿಗೆ ತೆರಳಲು ಅನುಮತಿಸಬೇಕು ಎಂದು ಹೇಳಿದ್ದಾರೆ.
“ನಾವು ನಮ್ಮ ಕಡೆಯಿಂದ ಕೈಲಾದಷ್ಟು ಪ್ರಯತ್ನಿಸಿದೆವು. ನಾವು ಸಭೆಗಳಿಗೆ ಹಾಜರಾದೆವು. ಪ್ರತಿಯೊಂದು ವಿಷಯವನ್ನು ಚರ್ಚಿಸಲಾಯಿತು. ಈಗ ಕೇಂದ್ರ ಸರ್ಕಾರವು ನಿರ್ಧಾರವನ್ನು ಕೈಗೊಳ್ಳಬೇಕಿದೆ. ನಾವು ಶಾಂತಿಯುತವಾಗಿದ್ದೇವೆ. ಬ್ಯಾರಿಕೇಡ್ಗಳನ್ನು ತೆಗೆದು ದೆಹಲಿಯತ್ತ ಮೆರವಣಿಗೆಗೆ ತೆರಳಲು ನಮಗೆ ಅನುಮತಿಸಬೇಕು” ಎಂದು ಸರ್ವಾನ್ ಸಿಂಗ್ ಪಂಡೇರ್ ತಿಳಿಸಿದ್ದಾರೆ.
ಈ ನಡುವೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಅರ್ಜುನ್ ಮುಂಡಾ, ನಾಲ್ಕನೇ ಸುತ್ತಿನ ನಂತರ ಸರ್ಕಾರವು ಎಲ್ಲ ಸಮಸ್ಯೆಗಳಾದ ಎಂಎಎಸ್ಪಿ ಬೇಡಿಕೆ, ಬೆಳೆ ವೈವಿದ್ಯೀಕರಣ, ರೈತರ ವಿರುದ್ಧದ ಪ್ರತಿಭಟನೆ ವಾಪಸ್ ಸೇರಿದಂತೆ ಮುಂತಾದ ಬೇಡಿಕೆಗಳನ್ನು ಐದನೇ ಸುತ್ತಿನಲ್ಲಿ ಚರ್ಚಿಸಲು ಸಿದ್ಧವಿದೆ. ರೈತ ನಾಯಕರನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸುತ್ತೇನೆ. ನಾವು ಶಾಂತಿ ಕಾಪಾಡಬೇಕು” ಎಂದು ತಿಳಿಸಿದ್ದಾರೆ.





