ಬಲಪಂಥೀಯ ಬೆಂಬಲಿಗ ಸುದ್ದಿ ವಾಹಿನಿಗಳಲ್ಲಿ ಒಂದಾದ ಸುದರ್ಶನ ಟಿವಿಯ ಹಿರಿಯ ಕ್ಯಾಮೆರಾಮನ್ ಸುಶೀಲ್ ಅವಸ್ಥಿ ಅವರ ಮೇಲೆ ನ. 18 ರ ರಾತ್ರಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಲಖನೌನ ಆಲಂಬಾಗ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಐದು ಮಂದಿ ಅಪರಿಚಿತರು ಸುಶೀಲ್ ಅವರನ್ನು ಒತ್ತಾಯಪೂರ್ವಕವಾಗಿ ತಮ್ಮ ಕಾರಿನಲ್ಲಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಲಾಗಿದೆ. ತಲೆ ಮತ್ತು ಮುಖದ ಮೂಳೆಗೆ ಗಂಭೀರವಾದ ಗಾಯಗಳಾಗಿವೆ ಎಂಬ ಮಾಹಿತಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸಹಿತ ಹರಿದಾಡುತ್ತಿದೆ.
ಬಿಜೆಪಿ ಪರ ಇರುವ ಸುದರ್ಶನ ಟಿವಿಯಲ್ಲಿ ಉತ್ತರಪ್ರದೇಶದ ಬಿಜೆಪಿ ಮುಖಂಡ ಮತ್ತು ಆತನ ಪುತ್ರನ ಭೂಹಗರಣ ಸಹಿತ ಹಲವು ಭ್ರಷ್ಟಾಚಾರದ ಬಗ್ಗೆ ವರದಿ ಮಾಡಲಾಗಿತ್ತು. ಆ ದ್ವೇಷಕ್ಕೆ ಆಗಂತುಕರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಯಾವುದೇ ಮಾಧ್ಯಮ ಈ ಸುದ್ದಿಯನ್ನು ವರದಿ ಮಾಡಿಲ್ಲ. ಪೊಲೀಸರು ಸಹಿತ ಯಾವುದೇ ಮಾಹಿತಿ ನೀಡಿಲ್ಲ. ಸುದರ್ಶನ ಟಿವಿಯಿಂದಲೂ ಯಾವುದೇ ವರದಿ ಬಂದಿಲ್ಲ.





