ವಾಲ್ಮೀಕಿ ಅವರ ಕುರಿತು ಆಜ್ ತಕ್ ನಿರೂಪಕಿ ಅಂಜನಾ ಓಂ ಕಶ್ಯಪ್ ಅವರು ಟಿವಿ ಚರ್ಚೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆಕೆಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಾಲ್ಮೀಕಿ ಅವರ ಅನುಯಾಯಿಗಳು ಮತ್ತು ಭಾರತೀಯ ವಾಲ್ಮೀಕಿ ಧರ್ಮ ಸಮಾಜ ಭವದಾಸ್ನ ಮುಖಂಡರು ಅಂಜನಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಭಾರತೀಯ ವಾಲ್ಮೀಕಿ ಧರ್ಮ ಸಮಾಜ ಭವದಾಸ್ನ ರಾಷ್ಟ್ರೀಯ ಸಂಯೋಜಕ ಚೌಧರಿ ಯಶ್ಪಾಲ್ ಅವರು ಪಂಜಾಬ್ನ ಲುಧಿಯಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಅಂಜನಾ ವಿರುದ್ಧ ಬಿಎನ್ಎಸ್ ಸೆಕ್ಷನ್ 299, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(v) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಇಂಡಿಯಾ ಟುಡೇ ಗ್ರೂಪ್ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ಅರೂನ್ ಪುರಿ ಮತ್ತು ಲಿವಿಂಗ್ ಮೀಡಿಯಾ ಇಂಡಿಯಾ ಲಿಮಿಟೆಡ್ಅನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಅಕ್ಟೋಬರ್ 7ರಂದು ಆಜ್ ತಕ್ನಲ್ಲಿ ನಡೆದ ‘ಬ್ಲ್ಯಾಕ್ ಅಂಡ್ ವೈಟ್’ ಚರ್ಚೆಯಲ್ಲಿ ವಾಲ್ಮೀಕಿಯನ್ನು ಉಲ್ಲೇಖಿಸಿ ಮಾತನಾಡಿದ ಅಂಜನಾ ಅವರು ಅನುಚಿತ ಮತ್ತು ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ. ಅದರ ವಿಡಿಯೋವನ್ನು ಅದೇ ದಿನ ಚಾನೆಲ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಪ್ರಸಾರ ಮಾಡಲಾಗಿದೆ ಎಂದು ಯಶ್ಪಾಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
“ಭಗವಾನ್ ವಾಲ್ಮೀಕಿಯನ್ನು ಒಂದು ಕಾಲದಲ್ಲಿ ರತ್ನಾಕರ ಎಂದು ಕರೆಯಲಾಗುತ್ತಿತ್ತು. ಆದರೆ, ಅವರು ನಾರದ ಮುನಿಯನ್ನು ಭೇಟಿಯಾಗುವ ಮೊದಲು ಜನರನ್ನು ದೋಚುತ್ತಿದ್ದರು. ನಾರದ ಮುನಿಯನ್ನು ಭೇಟಿಯಾದ ಬಳಿಕ, ವರ ಜೀವನ ಬದಲಾಯಿತು. ಅವರು ಶ್ರೀರಾಮನ ಭಕ್ತನಾದರು. ಸಾಕ್ಷಾತ್ಕಾರ ಮತ್ತು ಆತ್ಮಾವಲೋಕನದ ಒಂದು ಕ್ಷಣವು ಕೆಟ್ಟ ಜೀವಿಗಳನ್ನು ಸಹ ಬದಲಾಯಿಸುತ್ತದೆ ಎಂಬುದಾಗಿ ಅಂಜನಾ ಕಶ್ಯಪ್ ಹೇಳಿದ್ದಾರೆ” ಎಂದು ದೂರಿನಲ್ಲಿ ವಿವರಿಸಲಾಗಿದೆ.
“ಅಂಜನಾ ಅವರ ಹೇಳಿಕೆಯು ಸುಳ್ಳು ಮತ್ತು ಆಕ್ರಮಣಕಾರಿಯಾಗಿದೆ. ರಾಮಾಯಣ ಬರೆದ ವಾಲ್ಮೀಕಿಯನ್ನು ದೈವಿಕ ವ್ಯಕ್ತಿ ಎಂದು ಪೂಜಿಸುವ ವಾಲ್ಮೀಕಿ ಸಮುದಾಯದ ಭಾವನೆಗಳನ್ನು ಅವರ ಹೇಳಿಕೆಗಳು ನೋಯಿಸಿವೆ. ಇಂತಹ ಹೇಳಿಕೆಗಳಿಗೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ. ವಾಲ್ಮೀಕಿ ಸಮುದಾಯವು ಅಂಜನಾ ಕಶ್ಯಪ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದೆ” ಎಂದು ಯಶ್ವಾಲ್ ಹೇಳಿದ್ದಾರೆ.




