ಕೋಮು ಸೌಹಾರ್ದತೆಗೆ ಬೆದರಿಕೆ ಒಡ್ಡುವಂತಹ ಹಾಗೂ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ ಆರೋಪದಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಪಶ್ಚಿಮ ಬಂಗಾಳದ ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಡಿಸೆಂಬರ್ 19ರಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಮಿತ್ ಮಾಳವಿಯಾ ಪ್ರಚೋದನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಟಿಎಂಸಿ ನಾಯಕ ತನ್ಮೋಯ್ ಘೋಷ್ ನರೇಂದ್ರ ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿ ನಿರ್ದಿಷ್ಟ ಪೋಸ್ಟ್ ಒಂದನ್ನು ಉಲ್ಲೇಖಿಸಲಾಗಿದ್ದು, ಇದು ಕೋಮು ಸೌಹಾರ್ದತೆಯ ವಿರುದ್ಧ ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಭಾರತದ ಸಾರ್ವಭೌಮತೆಗೆ ಗಮನಾರ್ಹ ಬೆದರಿಕೆ ಎದುರಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ- ಸಿದ್ದು ಸರ್ಕಾರಗಳ ನಡೆ ಅನುಕರಣೀಯ ಅಲ್ಲ; ಶೋಭೆ ತರುವುದಿಲ್ಲ
“ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಧ್ವಂಸ ಕಾರ್ಯಾಚರಣೆ ಒಂದು ಎಚ್ಚರಿಕೆಯಾಗಿದೆ. ಭಯೋತ್ಪಾದನೆಯನ್ನು ತುಷ್ಟೀಕರಣ ಮಾಡಿದಾಗ ಹಾಗೂ ಕಾನೂನು ರಾಹಿತ್ಯವನ್ನು ಸಹಜವೆಂಬಂತೆ ಸ್ವೀಕರಿಸಿದಾಗ ಹೇಗೆ ಸಮಾಜದ ಹೆಣಿಗೆ ಬಿಚ್ಚಿಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನ” ಎಂದು ಅಮಿತ್ ಮಾಳವಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಹಲವು ರಾಜ್ಯಗಳಲ್ಲಿ ಪ್ರಕರಣ
ಪಶ್ಚಿಮ ಬಂಗಾಳದ ಪ್ರಕರಣಕ್ಕೂ ಮುನ್ನ ಕರ್ನಾಟಕದಲ್ಲೂ ಅಮಿತ್ ಮಾಳವಿಯಾ ವಿರುದ್ಧ ಗಂಭೀರ ಸ್ವರೂಪದ ಎಫ್ಐಆರ್ ದಾಖಲಾಗಿತ್ತು. 2023ರ ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಅನಿಮೇಟೆಡ್ ವಿಡಿಯೋವನ್ನು ಹಂಚಿಕೊಂಡ ಆರೋಪದಡಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕೆಪಿಸಿಸಿ ಮುಖಂಡರ ದೂರಿನನ್ವಯ, ಧರ್ಮಗಳ ನಡುವೆ ದ್ವೇಷ ಬಿತ್ತುವ (ಐಪಿಸಿ 153A) ಹಾಗೂ ಕ್ರಿಮಿನಲ್ ಒಳಸಂಚು (120B) ನಡೆಸಿದ ಆರೋಪದಡಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದೇ ಮಾದರಿಯಲ್ಲಿ ತಮಿಳುನಾಡು ಪೊಲೀಸರು ಸಹ ಮಾಳವಿಯಾ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು. ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಿ, ಸುಳ್ಳು ಸುದ್ದಿ ಹರಡಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ 2023ರಲ್ಲಿ ತಮಿಳುನಾಡಿನ ತಿರುಚ್ಚಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಹೀಗೆ, ಪಶ್ಚಿಮ ಬಂಗಾಳ ಮಾತ್ರವಲ್ಲದೆ ದಕ್ಷಿಣದ ರಾಜ್ಯಗಳಲ್ಲೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರ ವಿರುದ್ಧ ದಾಖಲಾಗುತ್ತಿರುವ ಸರಣಿ ದೂರುಗಳು, ಸಾಮಾಜಿಕ ಜಾಲತಾಣಗಳ ರಾಜಕೀಯ ದುರ್ಬಳಕೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ.





