ಲಖನೌ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಾದ್ರಿ ಕಾಕೊಟಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ವಿವಾದಿದ ಪೋಸ್ಟ್ ಪ್ರಕಟಿಸಿದ್ದಕ್ಕಾಗಿ ಎಬಿವಿಪಿ ಕಾರ್ಯಕರ್ತರ ದೂರಿನ ಮೇರೆಗೆ ದೇಶದ್ರೋಹ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಕುತೂಹಲವೆಂದರೆ ಡಾ. ಮಾದ್ರಿ ಕಕೋಟಿ ಅವರು ಎಕ್ಸ್ನಲ್ಲಿ 1.50 ಲಕ್ಷ ಬೆಂಬಲಿಗರನ್ನು ಹೊಂದಿದ್ದಾರೆ.ಡಾ ಮೆಡುಸಾ ಎಂಬ ಹೆಸರಿನಲ್ಲಿ ಖ್ಯಾತಿ ಹೊಂದಿದ್ದಾರೆ. ಪ್ರಾಧ್ಯಾಪಕಿ ಪೋಸ್ಟ್ ಮಾಡಿರುವ ವಿವಾದಿತ ವಿಡಿಯೋದಲ್ಲಿ ‘ಯಾರನ್ನಾದರೂ ಧರ್ಮದ ಹೆಸರಿನಲ್ಲಿ ಕೊಲ್ಲುವುದು ಹತ್ಯೆಯಾಗಿದೆ. ಹಾಗೆಯೇ ಧರ್ಮದ ಹೆಸರಿನಿಂದ ಜನರನ್ನು ಉದ್ಯೋಗದಿಂದ ವಂಚಿತರನ್ನಾಗಿಸುವುದು, ಬಾಡಿಗೆಗೆ ಮನೆಗಳನ್ನು ನೀಡದಿರುವುದು, ಬುಲ್ಡೋಜರ್ನಿಂದ ಮನೆಗಳನ್ನು ನಾಶಪಡಿಸುವುದು ಸೇರಿ ಇಂತಹ ಹಲವು ಕೃತ್ಯಗಳನ್ನು ಎಸಗುವುದು ಕೂಡ ಭಯೋತ್ಪಾದನೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದ್ರಿ ಕಾಕೋಟಿ ಅವರ ವಿರುದ್ಧ ಎಬಿವಿಪಿ ಸದಸ್ಯರಾದ ಜತಿನ್ ಶುಕ್ಲಾ ಅವರು ಪ್ರಕರಣ ದಾಖಲಿಸಿದ್ದಾರೆ. ಪ್ರಾಧ್ಯಾಪಕಿಯ ವಿರುದ್ಧ ಎಬಿವಿಪಿ ಕಾರ್ಯಕರ್ತರು ಕಾಲೇಜಿನ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು.
ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಕಾಕೋಟಿ ಅವರು, ನಾನು ಹೇಳಿರುವುದು ಶೇ.100 ರಷ್ಟು ಸತ್ಯವಾಗಿದೆ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಇದು ಸಾಮಾನ್ಯವಾಗಿದ್ದು, ಭಯೋತ್ಪಾದನೆಯು ಅದನ್ನು ಉಂಟುಮಾಡುವ ವ್ಯಾಖ್ಯಾನದೊಳಗೆಯೇ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇದು ನಮ್ಮ ಕಾಶ್ಮೀರ, ದ್ವೇಷವು ಪ್ರೀತಿಗೆ ಸೋತಿದೆ; ದಾಳಿಯ ನಂತರ ಪಹಲ್ಗಾಮ್ಗೆ ನಟ ಅತುಲ್ ಕುಲಕರ್ಣಿ ಭೇಟಿ
ಈ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯವಿದ್ದರೆ,ಪ್ರಾಧ್ಯಾಪಕಿ ಮಾದ್ರಿ ಕಾಕೋಟಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾಕೋಟಿಯವರ ಪೋಸ್ಟ್ನ ವಿವಾದ ಉಲ್ಬಣಗೊಂಡ ನಂತರ , ಲಖನೌ ವಿಶ್ವವಿದ್ಯಾಲಯವು ಡಾ. ಮಾದ್ರಿ ಕಾಕೋಟಿಯವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದು ಲಖನೌ ವಿಶ್ವವಿದ್ಯಾಲಯ ಮತ್ತು ರಾಷ್ಟ್ರದ ಪ್ರತಿಷ್ಠೆಯನ್ನು ಹಾಳು ಮಾಡುವ ಸಾಧ್ಯತೆಯಿದೆ. ಅವರ ಕೃತ್ಯ ದೇಶ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಡಾ. ಮಾದ್ರಿ ಕಾಕೋಟಿ ವಿರುದ್ಧ ಬಿಎನ್ಎಸ್ನ ವಿವಿಧ ಸೆಕ್ಷನ್ನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾಕೋಟಿ ವಿರುದ್ಧ ಸೆಕ್ಷನ್ 196(1)(ಎ) ಧರ್ಮ, ಜಾತಿ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು, 197(1)ರ ರಾಷ್ಟ್ರೀಯ ಏಕೀಕರಣಕ್ಕೆ ಹಾನಿ ಮಾಡುವ ಅಕ್ರಮಗಳು ಮುಂತಾದವುಗಳಡಿ ಪ್ರಕರಣ ದಾಖಲಿಸಲಾಗಿದೆ.





