ಜನವರಿ 26ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸದ್ಯ 21ಕ್ಕೆ ತಲುಪಿದೆ. ಇನ್ನೂ 28 ಮಂದಿ ನಾಪತ್ತೆಯಾಗಿದ್ದಾರೆ. ಜನಪ್ರಿಯ ಫಾಸ್ಟ್-ಫುಡ್ ಬ್ರ್ಯಾಂಡ್ ವಾವ್! ಮೊಮೊ ನಿರ್ವಹಿಸುತ್ತಿದ್ದ ಒಂದು ಗೋದಾಮು ಸೇರಿದಂತೆ ಎರಡು ಗೋದಾಮುಗಳು ಬೆಂಕಿಗಾಹುತಿಯಾಗಿತ್ತು. ಸದ್ಯ ಈ ಗೋದಾಮುಗಳಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲದಿರುವ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ಉಂಟಾಗಿದೆ.
ಪುಷ್ಪಾಂಜಲಿ ಡೆಕೋರೇಟರ್ಸ್ ಒಡೆತನದ ಗೋದಾಮಿನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಇತರೆ ವಸ್ತುಗಳನ್ನು ಸಂಗ್ರಹಿಸಲಾಗಿದ್ದ ನೆರೆಯ ವಾವ್! ಮೊಮೊ ಗೋದಾಮಿಗೂ ಈ ಬೆಂಕಿ ಹರಡಿತ್ತು. ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವ ಹೊತ್ತಿಗೆ ಎರಡೂ ಗೋದಾಮುಗಳು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿತ್ತು. ಅನೇಕ ಬಾರಿ ಸ್ಫೋಟವಾಗಿದೆ, ಕಟ್ಟಡ ಕುಸಿತವಾಗಿದೆ. ಇದರಿಂದಾಗಿ ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದವರು 36 ಗಂಟೆಗಳಿಗೂ ಹೆಚ್ಚು ಕಾಲ ತಗುಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹೈದರಾಬಾದ್ | ಮೊಮೊಸ್ ತಿಂದು ಮಹಿಳೆ ಸಾವು, 22 ಮಂದಿ ಆಸ್ಪತ್ರೆಗೆ ದಾಖಲು
ಪೊಲೀಸರ ಪ್ರಕಾರ, ಈ ಗೋದಾಮಿನೊಳಗೆ ಸಾವನನ್ಪಪ್ಪಿದ ಮತ್ತು ಸಿಲುಕಿರುವ ಹೆಚ್ಚಿನ ಮಂದಿ ರಾತ್ರಿಯಿಡೀ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಪ್ರಾಥಮಿಕ ತನಿಖೆಯಲ್ಲಿ ತೀವ್ರ ಲೋಪ ಮತ್ತು ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಬಹಿರಂಗವಾಗಿದೆ. ಗೋದಾಮಿನಲ್ಲಿ ಅಲಾರಂಗಳು, ಸ್ಪ್ರಿಂಕ್ಲರ್ಗಳು ಅಥವಾ ಸ್ಪಷ್ಟವಾಗಿ ಗುರುತಿಸಲಾದ ತುರ್ತು ನಿರ್ಗಮನಗಳಂತಹ ಸರಿಯಾದ ಅಗ್ನಿಶಾಮಕ ವ್ಯವಸ್ಥೆಗಳು ಇರಲಿಲ್ಲ. ನಿರ್ಗಮನ ದ್ವಾರಗಳೂ ಮುಚ್ಚಲಾಗಿದ್ದರಿಂದ ಕಾರ್ಮಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ವಾವ್| ಮೊಮೊ ಏನು ಹೇಳಿದೆ?
ಈ ಸಂಬಂಧ ವಾವ್! ಮೊಮೊ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಉದ್ಯೋಗಿಗಳು ಮತ್ತು ಒಬ್ಬ ಗುತ್ತಿಗೆ ಭದ್ರತಾ ಸಿಬ್ಬಂದಿ ಸೇರಿದ್ದಾರೆ ಎಂದು ತಿಳಿಸಿದೆ. ಹಾಗೆಯೇ ಸಂಸ್ಥೆಯು ಸಂತ್ರಸ್ತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಜತೆಗೆ ಮಾಸಿಕ ಆರ್ಥಿಕ ನೆರವು ಮತ್ತು ಮೃತರ ಮಕ್ಕಳಿಗೆ ಶೈಕ್ಷಣಿಕ ಬೆಂಬಲವನ್ನೂ ಘೋಷಿಸಿದೆ.





