ಅಮೃತಸರದಿಂದ ಬಿಹಾರದ ಸಹರ್ಸಾಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್ಪ್ರೆಸ್ನ ಮೂರು ಎಸಿ ಬೋಗಿಗಳು ಸಿರ್ಹಿಂದ್ ರೈಲ್ವೆ ನಿಲ್ದಾಣದ ಬಳಿ ಬೆಂಕಿಗೆ ಆಯುತಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರೈಲು ಸಿರ್ಹಿಂದ್ ನಿಲ್ದಾಣವನ್ನು ದಾಟಿ ಮುಂದೆ ಸಾಗುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ರೈಲು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ, ರೈಲನ್ನು ತಕ್ಷಣವೇ ನಿಲ್ಲಿಸಲಾಗಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ರೈಲಿನಲ್ಲಿ ಹೊರಬಂದಿದ್ದಾರೆ.
ಆದಾಗ್ಯೂ, ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟದಲ್ಲಿ ರೈಲಿನ ಮೂರು ಬೋಗಿಗಳು ಭಾಗಶಃ ಸುಟ್ಟುಹೋಗಿದ್ದವು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಅಧಿಕಾರಿ ಪ್ರಕಾರ, “ಆರಂಭದಲ್ಲಿ ಜಿ-19 ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ನಂತರ ಪ್ರಯಾಣಿಕರೊಬ್ಬರು ರೈಲು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಿದ್ದು, ತಕ್ಷಣವೇ ರೈಲು ನಿಂತಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಬೋಗಿಯಿಂದ ಕೆಳಗಿಳಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಕಿ ಹೊತ್ತಿಕೊಂಡ ಮೂರು ಕೋಚ್ಗಳನ್ನು ರೈಲಿನ ಉಳಿದ ಭಾಗದಿಂದ ಬೇರ್ಪಡಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಿಸಲಾಗಿದೆ. ಓರ್ವ ಮಹಿಳೆಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಫತೇಘರ್ ಸಾಹಿಬ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಅವರು ಹೇಳಿದ್ದಾರೆ.




