ತಿರುಪತಿಯಲ್ಲಿ ಭಾರಿ ಸುದ್ದಿಯಾಗಿದ್ದ ಡಾಲರ್ ಕಳವು ಬಗ್ಗೆ ದೂರು ನೀಡಿದ್ದ ಮತ್ತು ಈ ಪ್ರಕರಣದ ಆರೋಪಿಗಳೊಂದಿಗೆ ರಾಜಿ ಮಾಡಿಕೊಂಡ ಆರೋಪ ಹೊತ್ತಿದ್ದ ಟಿಟಿಡಿ ಮಾಜಿ ಸಹಾಯಕ ಜಾಗೃತ ಮತ್ತು ಭದ್ರತಾ ಅಧಿಕಾರಿ(ಎವಿಎಸ್ಒ) ವೈ ಸತೀಶ್ ಕುಮಾರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಅನಂತಪುರ ಜಿಲ್ಲೆಯ ತಾಡಿಪತ್ರಿ ಬಳಿಯ ಕೋಮಲಿ ರೈಲ್ವೆ ಹಳಿಯಲ್ಲಿ ಸತೀಶ್ ಮೃತದೇಹ ಪತ್ತೆಯಾಗಿದೆ. ರೈಲ್ವೆ ಪೊಲೀಸರು ಮೃತದೇಹವನ್ನು ರೈಲ್ವೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಗುರುವಾರ ರಾತ್ರಿ ಗುಂಟಕಲ್ ರೈಲ್ವೆ ನಿಲ್ದಾಣದಲ್ಲಿ ಸತೀಶ್ ರಾಯಲಸೀಮಾ ಎಕ್ಸ್ಪ್ರೆಸ್ ಹತ್ತಿದ್ದರು. ಶುಕ್ರವಾರ ತಿರುಪತಿಯಲ್ಲಿ ಪರಕಾಮಣಿ ಕಳ್ಳತನ ಪ್ರಕರಣ ಎಂದೂ ಕರೆಯಲಾಗುವ ಡಾಲರ್ ಕಳವು ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕೋಮಲಿ ರೈಲ್ವೆ ಹಳಿಯಲ್ಲಿ ಸತೀಶ್ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಬೆಳೆ ಕೊರತೆ, ಬೆಲೆ ಏರಿಕೆ: ಕಾಫಿ ಪ್ರಿಯರಿಗೆ ಕಹಿ ಹೆಚ್ಚಿಸುತ್ತಾ ಪೇಯ?
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪೊಲೀಸರು, “ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಾವು ಸತೀಶ್ ಮತ್ತು ಪರಕಾಮಣಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಏನಿದು ಡಾಲರ್ ಕಳವು ಪ್ರಕರಣ, ಸತೀಶ್ಗೆ ಸಂಬಂಧವೇನು?
ಪ್ರಸ್ತುತ ಗುಂತಕಲ್ ರೈಲ್ವೆ ನಿಲ್ದಾಣದಲ್ಲಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸತೀಶ್, ಕರ್ನೂಲ್ ಜಿಲ್ಲೆಯ ಪಟ್ಟಿಕೊಂಡ ಮೂಲದವರು. 2023ರ ಏಪ್ರಿಲ್ನಲ್ಲಿ ದೇವಾಲಯದ ಹುಂಡಿಯಲ್ಲಿ (ಪರಕಾಮಣಿ) ಸಂಗ್ರಹವಾದ ಹಣ ಎಣಿಕೆಯಲ್ಲಿ ಭಾಗಿಯಾಗಿದ್ದ ದೇಣಿಗೆ ಎಣಿಕೆ ಕೇಂದ್ರದ ಗುಮಾಸ್ತ ಸಿವಿ ರವಿ ಕುಮಾರ್ ಕಳವು ಮಾಡಿದ್ದಾನೆ ಎಂದು ಆರೋಪಿಸಿ ಸತೀಶ್ ದೂರು ನೀಡಿದ್ದರು.
ಎಣಿಕೆ ವೇಳೆ ಕರ್ತವ್ಯದಲ್ಲಿದ್ದ ಸತೀಶ್, ರವಿ ಕುಮಾರ್ ಪರಕಾಮಣಿಯಿಂದ $900 ಕದಿಯುತ್ತಿರುವುದನ್ನು ನೋಡಿದ್ದರು. ಈ ಸಂಬಂಧ ಟಿಟಿಡಿ ವಿಜಿಲೆನ್ಸ್ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದರು. ಹಾಗೆಯೇ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಬಳಿಕ ಸತೀಶ್ ಪ್ರಕರಣವನ್ನು ವಾಪಸ್ ಪಡೆದುಕೊಂಡಿದ್ದರು. ಕೊನೆಗೆ 2023ರ ಸೆಪ್ಟೆಂಬರ್ನಲ್ಲಿ ಲೋಕ ಅದಾಲತ್ನಲ್ಲಿ ಈ ವಿಷಯದ ಇತ್ಯರ್ಥವಾಗಿದೆ. ರವಿ ಕುಮಾರ್ ಬಿಡುಗಡೆ ಮಾಡಲಾಗಿದೆ.
ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿದರೆ ರವಿ ಕುಮಾರ್ ತಮ್ಮ ಆಸ್ತಿಗಳನ್ನು ದಾನ ಮಾಡುವುದಾಗಿ ಒಪ್ಪಿಕೊಂಡಿದ್ದರು. ಈ ನಿಟ್ಟಿನಲ್ಲಿ ಟಿಟಿಡಿ ಮಂಡಳಿಯು ರವಿ ಕುಮಾರ್ಗೆ ಸೇರಿದ ಕೆಲವು ಆಸ್ತಿಗಳನ್ನು ದೇಣಿಗೆಯಾಗಿ ಪಡೆಯುತ್ತಿದೆ ಎಂದು ಹೇಳಲಾಗಿತ್ತು. ಆದರೆ ಬಳಿಕ ರಾಜಿ ಪಂಚಾಯಿತಿ ಮತ್ತು ಲೋಕ ಅದಾಲತ್ ಇತ್ಯರ್ಥದ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಬಂಧನ: ಬರೋಬ್ಬರಿ 100 ದ್ವಿಚಕ್ರ ವಾಹನ ವಶಕ್ಕೆ!
ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಡಾಲರ್ ಕಳವು ಪ್ರಕರಣದ ಬಗ್ಗೆ ಮತ್ತೆ ಸಂಪೂರ್ಣವಾಗಿ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿದೆ. ರವಿ ಕುಮಾರ್ ಅವರ ಆಸ್ತಿಗಳ ತನಿಖೆ ನಡೆಸುವಂತೆ ಎಸಿಬಿಗೆ ಸೂಚಿಸಿದೆ. ಆಂಧ್ರಪ್ರದೇಶ ಸಿಐಡಿ ಮಹಾನಿರ್ದೇಶಕ ರವಿಶಂಕರ್ ಅಯ್ಯನಾರ್ ನಿರ್ದೇಶನದ ಮೇರೆಗೆ ವಿಶೇಷ ತಂಡವನ್ನೂ ರಚಿಸಲಾಗಿತ್ತು.
ರಾಜಿಯಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಗಳಿಗೆ ಸಮನ್ಸ್ ಜಾರಿ ಮಾಡುವ ಮೂಲಕ ತಂಡವು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಹಾಗೆಯೇ ತನಿಖೆ ನಿರ್ಣಾಯಕ ಹಂತವನ್ನು ತಲುಪಿದೆ ಎನ್ನಲಾಗಿತ್ತು. ನವೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸತೀಶ್ ಅವರಿಗೆ ತಿಳಿಸಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಬೇಕಿದ್ದ ಸತೀಶ್ ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಆತ್ಮಹತ್ಯೆಯೇ, ಅಪಘಾತವೇ ಅಥವಾ ಕೊಲೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಇನ್ನು ಡಾಲರ್ ಕಳವು ಪ್ರಕರಣದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಈಗ ಪ್ರಮುಖ ಸಾಕ್ಷಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಈ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ.





