ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಹಿಳಾ ವೈದ್ಯೆಯ ಹಿಜಾಬ್ ಎಳೆದ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ, ನಿತೀಶ್ ಕ್ರಮವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮಹಿಳೆಯ ಕುರಿತು “ನರಕಕ್ಕಾದರೂ ಹೋಗಲಿ” ಎಂದು ಹೇಳಿಕೆ ನೀಡಿರುವುದು ವಿವಾದದ ಕಿಡಿ ಹೊತ್ತಿಸಿದೆ.
ಪಾಟ್ನಾದಲ್ಲಿ ಆಯುಷ್ ವೈದ್ಯರ ನೇಮಕಾತಿ ಪತ್ರ ವಿತರಣೆ ವೇಳೆ ನಿತೀಶ್ ಕುಮಾರ್ ಅವರು ಮಹಿಳೆಯ ಹಿಜಾಬ್ ಸರಿಸಿದ್ದರು. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗಿರಿರಾಜ್ ಸಿಂಗ್, “ಮುಖ್ಯಮಂತ್ರಿಗಳ ನಡೆಯಲ್ಲಿ ಯಾವುದೇ ತಪ್ಪಿಲ್ಲ. ನೇಮಕಾತಿ ಪತ್ರ ಪಡೆಯುವಾಗ ಗುರುತು ಪತ್ತೆಗೆ ಮುಖ ತೋರಿಸುವುದು ಅಗತ್ಯ. ನಾವಿರುವುದು ಭಾರತದಲ್ಲೇ ಹೊರತು ಇಸ್ಲಾಮಿಕ್ ರಾಷ್ಟ್ರದಲ್ಲಲ್ಲ. ಪಾಸ್ಪೋರ್ಟ್ ಕಚೇರಿ ಅಥವಾ ವಿಮಾನ ನಿಲ್ದಾಣಗಳಲ್ಲಿ ಮುಖ ತೋರಿಸುವುದಿಲ್ಲವೇ? ನಿತೀಶ್ ಅವರು ಪೋಷಕರ ಸ್ಥಾನದಲ್ಲಿ ನಿಂತು ಆ ಕೆಲಸ ಮಾಡಿದ್ದಾರೆ” ಎಂದು ಸಮರ್ಥಿಸಿಕೊಂಡರು.
“ಆ ಮಹಿಳೆ ಸರ್ಕಾರಿ ಕೆಲಸ ಬೇಡವೆಂದು ತಿರಸ್ಕರಿಸಬಹುದು ಅಥವಾ ನರಕಕ್ಕಾದರೂ ಹೋಗಲಿ, ಅದು ಆಕೆಯ ಆಯ್ಕೆ,” ಎಂದು ಗಿರಿರಾಜ್ ಸಿಂಗ್ ಹರಿಹಾಯ್ದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನೇಕೆ ಮಾಡುತ್ತಿಲ್ಲ?
ವಿಪಕ್ಷಗಳ ವಾಗ್ದಾಳಿ
ಕೇಂದ್ರ ಸಚಿವರ ಈ ಹೇಳಿಕೆ ಮತ್ತು ನಿತೀಶ್ ವರ್ತನೆಗೆ ‘ಇಂಡಿಯಾ’ ಒಕ್ಕೂಟದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಬಿಜೆಪಿಯವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ,” ಎಂದು ಕಾಂಗ್ರೆಸ್ ಸಂಸದ ತಾರಿಖ್ ಅನ್ವರ್ ಕಿಡಿಕಾರಿದ್ದಾರೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿ, “ಒಬ್ಬ ಮುಸ್ಲಿಂ ನಾಯಕ ಹಿಂದೂ ಮಹಿಳೆಯ ಮುಸುಕು ಸರಿಸಿದ್ದರೆ ಬಿಜೆಪಿ ಮತ್ತು ದೇಶದ ಪ್ರತಿಕ್ರಿಯೆ ಹೇಗಿರುತ್ತಿತ್ತು?” ಎಂದು ಪ್ರಶ್ನಿಸಿದ್ದಾರೆ.
ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಹಾಗೂ ಎನ್ಸಿಪಿ ಸಂಸದೆ ಫೌಜಿಯಾ ಖಾನ್, “ಇದು ಮಹಿಳೆಯರ ಘನತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕವಾಗಿ ಅವಮಾನಿಸುವ ಹೇಯ ಕೃತ್ಯ,” ಎಂದು ಖಂಡಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಆರ್ಜೆಡಿ ಮತ್ತು ಶಿವಸೇನೆ (ಯುಬಿಟಿ) ನಾಯಕರು ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.





