ಆನ್ಲೈನ್ ವಂಚನೆಗೆ ತಡೆಯೊಡ್ಡುವ ಉದ್ದೇಶದಿಂದ ದೇಶಾದ್ಯಂತ ಎಲ್ಲ ಮೊಬೈಲ್ಗಳಿಗೂ ʼಸಂಚಾರ್ ಸಾಥಿʼ ಆ್ಯಪ್ ಇನ್ಬೆಲ್ಟ್ ಆಗಿ ಡಿಲೀಟ್ ಆಗದಂತೆ ದೊರೆಯಲು ಸಾಫ್ಟ್ವೇರ್ ಅಭಿವೃದ್ಧಿ ಮಾಡಲು ಸೂಚಿಸಲಾಗಿತ್ತು. ಇದೀಗ ವಿವಾದದ ಬಳಿಕ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಆ್ಯಪ್ ಕಡ್ಡಾಯವಲ್ಲ ಎಂದು ಹೇಳಿದೆ. ಆದರೆ ಪ್ರಕಟಿಸಿದ ನಿರ್ಧಾರವನ್ನು ಹಿಂತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.
ಆನ್ಲೈನ್ ವಂಚನೆಗೆ ತಡೆಯೊಡ್ಡಲು ಸರ್ಕಾರದ ಸಂಚಾರ ಸಾಥಿ ಆ್ಯಪ್ ಅನ್ನು ಎಲ್ಲ ಮೊಬೈಲ್ಗಳಲ್ಲಿ ಇನ್ಸ್ಟಾಲ್ ಮಾಡುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ಸೂಚಿಸಿದೆ. ದೇಶಾದ್ಯಂತ ಎಲ್ಲ ಮೊಬೈಲ್ಗಳಿಗೂ ಇದು ಅನ್ವಯಿಸಲಿದ್ದು, ಡಿಲೀಟ್ ಆಗದಂತೆ ಸಾಫ್ಟ್ವೇರ್ ಅಭಿವೃದ್ಧಿ ಮಾಡಲು ಸೂಚಿಸಲಾಗಿತ್ತು. ಇದೀಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ ನೀಡಿದ್ದು, “ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಬಳಕೆದಾರರಿಗೆ ಬಿಟ್ಟದ್ದು” ಎಂದು ಹೇಳಿದ್ದಾರೆ.
ದೂರಸಂಪರ್ಕ ಇಲಾಖೆ ಅಭಿವೃದ್ಧಿಪಡಿಸಿದ ಸೈಬರ್ ಭದ್ರತಾ ಆ್ಯಪ್ ಸಂಚಾರ್ ಸಾಥಿಯಿಂದ ಯಾವುದೇ ಬೇಹುಗಾರಿಕೆ ಅಥವಾ ಕರೆ ಮೇಲ್ವಿಚಾರಣೆ ಒಳಗೊಂಡಿರುವುದಿಲ್ಲ, ಗೌಪ್ಯತೆಯ ಬಗ್ಗೆ ಕಾಳಜಿ ಮತ್ತು ಸರ್ಕಾರದ ಕಣ್ಗಾವಲಿನ ಭಯವಿದ್ದವರು ಅದನ್ನು ಡಿಲೀಟ್ ಮಾಡಬಹುದು” ಎಂದು ಸಚಿವರು ಹೇಳಿದ್ದಾರೆ.
ಏನಿದು ಸಂಚಾರ್ ಸಾಥಿ?
ಮೇ 2023ರಂದು ಸ್ಥಾಪಿಸಲಾದ ಈ ಪೋರ್ಟಲ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಆಗಿಯೂ ಲಭ್ಯವಿದೆ. ದೂರಸಂಪರ್ಕ ಇಲಾಖೆ ಮೊಬೈಲ್ ಬಳಕೆದಾರರ ಭದ್ರತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಈ ಅಪ್ಲಿಕೇಶನ್ ಅನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ.
ಇದೀಗ ಇದರ ಬಳಕೆ ಜನರ ಆಯ್ಕೆಗೆ ಬಿಟ್ಟಿದೆ. ದುರುದ್ದೇಶಪೂರಿತ ವೆಬ್ ಲಿಂಕ್ ಗಳ ಬಗ್ಗೆ ಮತ್ತು ಕಳೆದು ಹೋದ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸುವುದು ಮತ್ತು ವರದಿ ಮಾಡಬಹುದಾಗಿದೆ. ಆದರೆ ಶೀಘ್ರವೇ ಈ ಅಪ್ಲಿಕೇಶನ್ ಪ್ರತಿ ಫೋನ್ನಲ್ಲಿ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಸಂಚಾರ ಸಾಥಿಯ ಲಾಭವೇನು?
ಈ ವೆಬ್ಸೈಟ್ ಪ್ರಕಾರ ಯೋಜನೆಯಡಿ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿದೆ. 26.11 ಲಕ್ಷಕ್ಕೂ ಹೆಚ್ಚು ಕಳೆದು ಹೋದ ಮೊಬೈಲ್ ಸೆಟ್ಗಳನ್ನು ಪತ್ತೆಹಚ್ಚಲಾಗಿದೆ. ತಮ್ಮ ಹೆಸರಿನಲ್ಲಿರುವ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳ ಮಾಹಿತಿ ಪಡೆಯಲು ಬಯಸುವ ವ್ಯಕ್ತಿಗಳಿಂದ 288 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಸ್ವೀಕರಿಸಲಾಗಿದ್ದು, 254 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಪರಿಹರಿಸಲಾಗಿದೆ. ಪ್ರಸ್ತುತ ಅಪ್ಲಿಕೇಶನ್ 1.14 ಕೋಟಿಗೂ ಹೆಚ್ಚು ನೋಂದಣಿಗಳನ್ನು ಹೊಂದಿದೆ. ಗೂಗಲ್ ಪ್ಲೇಸ್ಟೋರ್ನಿಂದ 1 ಕೋಟಿಗೂ ಹೆಚ್ಚು ಡೌನ್ಲೋಡ್ಗಳು ಮತ್ತು ಆಪಲ್ ಸ್ಟೋರ್ನಿಂದ 9.5 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಆಗಿದೆ.
ಸಂಚಾರ ಸಾಥಿ ಯಾವ ಸೇವೆ ಲಭ್ಯ?
ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ತಿಳಿದುಕೊಳ್ಳಲು ಮತ್ತು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹ ಸಂಪರ್ಕ ವಿವರಗಳನ್ನು ಪರಿಶೀಲಿಸಲು ನೆರವಾಗುತ್ತದೆ. ಬಳಕೆದಾರರರು ಅಪ್ಲಿಕೇಶನ್ ಮೂಲಕ ವಂಚನೆ ವರದಿ ಮಾಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಈ ಅಪ್ಲಿಕೇಶನ್ ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸುವುದು. ಹ್ಯಾಂಡ್ಸೆಟ್ ನಿಜವೇ ಎಂದು ಪರಿಶೀಲಿಸುವುದು ಮತ್ತು ಅನುಮಾನಾಸ್ಪದ ಸಂವಹನ ಅಥವಾ ಸ್ಪಾಮ್ಗಳನ್ನು ವರದಿ ಮಾಡುವಂತಹ ಸೇವೆಗಳನ್ನು ಒದಗಿಸುತ್ತದೆ. ಫೋನ್ನಲ್ಲಿ ಒಟಿಪಿ ಪರಿಶೀಲನೆ ಇಲ್ಲದೆಯೇ, ಭಾರತೀಯ ಸಂಖ್ಯೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಕರೆಯನ್ನೂ ವರದಿ ಮಾಡಲು ಅವಕಾಶ ನೀಡುತ್ತದೆ.
ಅಪ್ಲಿಕೇಶನ್ ಕಡ್ಡಾಯ?
ಇದೀಗ ತಯಾರಿಸಿ ಚಾಲ್ತಿಯಲ್ಲಿರುವ ಸಾಧನಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಾಫ್ಟ್ವೇರ್ ನವೀಕರಣದ ಮೂಲಕ ತೂರಿಸುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ತಿಳಿಸಿದೆ. ಈ ನವೀಕರಣಕ್ಕೆ 90 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ವಿವಾದದ ನಂತರ ಸಮಜಾಯಿಶಿ ನೀಡಿದರೂ, ಆದೇಶವನ್ನು ಹಿಂಪಡೆದಿಲ್ಲ.





