ಆಗಸ್ಟ್ 15ರ ಬೆಳಗ್ಗೆ ಶ್ರೀಮಂತರಿಂದ ಬಡವರವರೆಗೆ ಎಲ್ಲರ ಮನೆಗಳ ಬಾಗಿಲಿನಲ್ಲಿ ಧ್ವಜದ ರಂಗೋಲಿ ಕಂಗೊಳಿಸುತ್ತಿತ್ತು. ಅಂದಿನಿಂದ ಇಂದಿನವರೆಗೂ ನಾವು ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜದ ರಂಗೋಲಿಯನ್ನು ರಚಿಸುತ್ತಲೇ ಬಂದಿದ್ದೇವೆ. ಇದು ನಮ್ಮ ಹೆಮ್ಮೆ.
ದೆಹಲಿಯಲ್ಲಿ ನೆಲೆಸಿರುವ ತೆಲುಗು ಮೂಲದ ಪತ್ರಕರ್ತೆ ರಾಗಿಣಿ ಡೇ ಅವರು ತಮ್ಮ ಅಜ್ಜಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತಾಗ ಹೇಗೆ ಸಂಭ್ರಮಿಸಿದ್ದರು. ಅಂದು ದೇಶದ ಮತ್ತು ತಮ್ಮ ಊರಿನ ವಾತಾವರಣ ಹೇಗಿತ್ತು ಎಂಬ ಬಗ್ಗೆ ‘ದಿ ವೈರ್’ನಲ್ಲಿ ನಿರೂಪಿಸಿದ್ದಾರೆ. ಅವರ ನಿರೂಪಣೆಯ ಕನ್ನಡ ಅನುವಾದ ಹೀಗಿದೆ:
ಅಜ್ಜಿ ಜಾನಕಿ, ತಮ್ಮ ಜೀವನದ ಕೊನೆಯವರೆಗೂ ನೆನಪುಗಳನ್ನು ಹೊತ್ತ ಭಂಡಾರವಾಗಿದ್ದರು. ಅವರು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜನಿಸಿದವರು. ಅವರ ನಿಖರವಾದ ಜನ್ಮ ದಿನಾಂಕ ಗೊತ್ತಿಲ್ಲದಿದ್ದರೂ, ಅಜ್ಜಿ ಹೇಳುವಂತೆ, ಸ್ವಾತಂತ್ರ್ಯ ದೊರೆತಾಗ ಅವರಿಗೆ 8 ಅಥವಾ 9 ವರ್ಷ ವಯಸ್ಸು.
ಕೆಲವು ವರ್ಷಗಳ ಹಿಂದೆ, ಆಗಸ್ಟ್ 15ರಂದು ಅಜ್ಜಿ ಖಾದಿ ಸೀರೆ ಧರಿಸಿ, ವರಾಂಡದಲ್ಲಿ ಧ್ವಜಗಳು ಮತ್ತು ಚರಕದ ಮಾದರಿಯ ರಂಗೋಲಿ ಹಾಕಿದ್ದರು. ಅವರು ಪ್ರತಿ ಸ್ವಾತಂತ್ರ್ಯ ದಿನದಂದು ಈ ರೀತಿ ರಂಗೋಲಿ ಇಡುವುದನ್ನು ಮೈಗೂಡಿಸಿಕೊಂಡಿದ್ದರು. ಅಂದು ಅವರ ರಂಗೋಲಿ ನೋಡಿದಾಗ, ಅದರ ಹಿಂದಿನ ಕಥೆಯ ಬಗ್ಗೆ ಕೇಳಬೇಕೆಂಬ ಕುತೂಹಲ ಹೆಚ್ಚಾಯಿತು. ಅವರನ್ನು ಪ್ರಶ್ನಿಸಿದೆ.
ಜಾನಕಿ ಅಜ್ಜಿ ತಮ್ಮ ನೆನಪುಗಳನ್ನು ಸ್ಮರಿಸಲಾರಂಭಿಸಿದರು. ಅಜ್ಜಿ ಮುಗ್ಧ ಮಕ್ಕಳಂತಹ ಮುಖಚಹರೆಯೊಂದಿಗೆ ಹೇಳಿದ್ದು ಹೀಗೆ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ನೆಲೆಸಿದ್ದೆವು. ನಮ್ಮದು ಕೆಳ-ಮಧ್ಯಮ ವರ್ಗದ ದೊಡ್ಡ ಕುಟುಂಬ. 1947ರ ಆಗಸ್ಟ್ 14ರಂದು ಸೂರ್ಯನ ಬೆಳಕು ಎಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಇಡೀ ದೇಶವೇ ಹೊಸ ಜೀವನದೊಂದಿಗೆ ಎಚ್ಚರಗೊಂಡಿತ್ತು. ಅಂದು ಸ್ವಾತಂತ್ರ್ಯ ಪಡೆಯುವ ಬಗ್ಗೆ ಸುದ್ದಿ ಹರಡಿತು. ಎಲ್ಲರಲ್ಲೂ ಉತ್ಸಾಹದ ಅಲೆ ಚಿಮ್ಮಿತು.
14ನೇ ತಾರೀಕಿನ ಸಂಜೆ, ಆಂಧ್ರದಲ್ಲಿನ ವಾಡಿಕೆಯಂತೆ ಹಬ್ಬದ ಹಿಂದಿನ ದಿನ ಎಲ್ಲ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವಂತೆ, ಅಂದೂ ಮಾಡಿಸಲಾಯಿತು. ನನ್ನ ತಾಯಿ ಮತ್ತು ಚಿಕ್ಕಮ್ಮಂದಿರು ಮನೆಯನ್ನು ಸ್ವಚ್ಛಗೊಳಿಸಿದರು, ಹೂವುಗಳಿಂದ ಅಲಂಕರಿಸಿದರು, ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿದರು. ನನ್ನ ತಂದೆ ಮತ್ತು ಅಣ್ಣಂದಿರು ಭಾರವಾದ ಚೀಲಗಳನ್ನು ಹೊತ್ತು ಬಂದರು. ಮನೆಯ ಎಲ್ಲರಿಗೂ ಹೊಸ ಬಟ್ಟೆಗಳನ್ನು ಕೊಟ್ಟರು. ಜೊತೆಗೆ, ‘ಇವು ನಮ್ಮ ಜನರ ರಕ್ತ, ಬೆವರು ಮತ್ತು ಕಣ್ಣೀರಿನಿಂದ ತಯಾರಾದ ಬಟ್ಟೆಗಳು’ ಎಂದು ಹರ್ಷದಿಂದ ಹೇಳಿದರು. ಆ ಬಟ್ಟೆಗಳು ನಮ್ಮ ಗ್ರಾಮದಲ್ಲಿಯೇ, ಕೈಮಗ್ಗಗಳಲ್ಲಿ ಖಾದಿಯಿಂದ ತಯಾರಿಸಿದ್ದ ಬಟ್ಟೆಗಳು. ಅವುಗಳು ದಪ್ಪವಾಗಿ ಮತ್ತು ಒರಟಾಗಿದ್ದವು. ಆದರೂ, ಮರುದಿನ ಬೆಳಗ್ಗೆ ಅವುಗಳನ್ನು ಹೆಮ್ಮೆಯಿಂದ ಧರಿಸಿದೆವು.
ನಮ್ಮ ಹಿರಿಯರಿಗೆ ನಾವು ಶೀಘ್ರವೇ ಸ್ವಾತಂತ್ರ್ಯ ಪಡೆಯುತ್ತೇವೆ ಎಂಬುದು ಮೊದಲೇ ತಿಳಿದಿತ್ತು. ಹೀಗಾಗಿ, ಅವರು ತಮ್ಮ ಮನೆಗಳಲ್ಲಿ ರಹಸ್ಯವಾಗಿ ಬಹುದಿನಗಳಿಂದಲೇ ಬಟ್ಟೆಗಳನ್ನು ನೇಯಲು ಆರಂಭಿಸಿದ್ದರು. ಖಾದಿಯು ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾವಲಂಬನೆಯ ಸಂಕೇತವಾಗಿತ್ತು.
ಆಗಸ್ಟ್ 15ರ ಬೆಳಗ್ಗೆ ಶ್ರೀಮಂತರಿಂದ ಬಡವರವರೆಗೆ ಎಲ್ಲರ ಮನೆಗಳ ಬಾಗಿಲಿನಲ್ಲಿ ಧ್ವಜದ ರಂಗೋಲಿ ಕಂಗೊಳಿಸುತ್ತಿತ್ತು. ಅಂದಿನಿಂದ ಇಂದಿನವರೆಗೂ ನಾವು ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜದ ರಂಗೋಲಿಯನ್ನು ರಚಿಸುತ್ತಲೇ ಬಂದಿದ್ದೇವೆ. ಇದು ನಮ್ಮ ಹೆಮ್ಮೆ.
ಎಲ್ಲರೂ ತಮ್ಮ ಹೊಸ ಖಾದಿ ಬಟ್ಟೆಗಳನ್ನು ಧರಿಸಿದರು. ಚಿಕ್ಕ ಬಟ್ಟೆಯ ಧ್ವಜಗಳನ್ನು ಅವರ ಬಟ್ಟೆಗಳ ಮೇಲೆ ಎದೆ ಭಾಗದಲ್ಲಿ ಅಂಟಿಸಿಕೊಂಡಿದ್ದರು. ಕೆಲವರು ಸಂತೋಷದಿಂದ ಕಣ್ಣೀರು ಸುರಿಸುತ್ತಿದ್ದರು. ಧ್ವಜವನ್ನು ಏರಿಸಿದಾಗ ದೇಶಭಕ್ತಿಯ ಗೀತೆಗಳು ಮೊಳಗಿದವು. ಎಲ್ಲರೂ ‘ಸ್ವಾತಂತ್ರಂ ವರ್ಧಿಲ್ಲಾಲಿ’ (ಸ್ವಾತಂತ್ರ್ಯವು ಶಕ್ತಿಯಾಗಲಿ) ಎಂದು ಘೋಷಣೆ ಕೂಗಿ, ಸಿಹಿತಿಂಡಿ ಹಂಚಿದರು. ಸಂಭ್ರಮಿಸಿದರು ಎಂದು ಜಾನಕಿ ಅಜ್ಜಿ ಸ್ಮರಿಸಿದ್ದರು.
ಈ ಲೇಖನ ಓದಿದ್ದೀರಾ?: ‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ
ಅಲ್ಲದೆ, ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭವನ್ನೂ ಹಂಚಿಕೊಂಡಿರುವ ಅಜ್ಜಿ ಜಾನಕಿ: ಒಮ್ಮೆ ಗಾಂಧಿ ತಾತ ಚೆನ್ನೈಗೆ ಪ್ರಯಾಣಿಸುವಾಗ ನಾವು ಅವರನ್ನು ನೋಡಲು ಹೋಗಿದ್ದವು. ಗಾಂಧಿ ತಾತ ರೈಲಿನಲ್ಲಿ ತೆರಳುತ್ತಿದ್ದರು. ಆ ರೈಲು ನಮ್ಮ ಗ್ರಾಮದ ಸಮೀಪದ ಪೊನ್ನೂರಿನಲ್ಲಿ ನಿಲ್ಲಲಿತ್ತು. ಈ ಬಗ್ಗೆ ಗ್ರಾಮದಲ್ಲಿ ಸುದ್ದಿ ಹರಡಿದಾಗ, ಇಡೀ ಗ್ರಾಮ- ಎಲ್ಲ ಧರ್ಮಗಳು, ಜಾತಿಗಳು ಹಾಗೂ ವಯಸ್ಸಿನವರು- ರೈಲು ನಿಲ್ದಾಣಕ್ಕೆ ಧಾವಿಸಿದರು. ರೈಲು ಬಂದಾಗ, ಕೋಲಿನೊಂದಿಗೆ ವೃದ್ಧ, ದುರ್ಬಲ ವ್ಯಕ್ತಿಯೊಬ್ಬ, ಬರಿಯ ಭುಜದ ಮೇಲೆ ಶಾಲು ಹೊದ್ದುಕೊಂಡು ದುಂಡಗಿನ ಕನ್ನಡಕ ಧರಿಸಿ ಕೆಳಗಿಳಿದರು. ಅವರು ಕೆಲವು ನಿಮಿಷಗಳ ಕಾಲ ನೆರೆದಿದ್ದವರತ್ತ ಕೈ ಬೀಸಿದರು, ಕೈ ಮುಗಿದರು ಹಾಗೂ ನಗುತ್ತಾ ಮತ್ತೆ ರೈಲು ಹತ್ತಿದರು. ರೈಲು ಹೊರಡುವ ವೇಳೆಗೆ ನೂರಾರು ಜನರು ‘ವಂದೇ ಮಾತರಂ!’ ಮತ್ತು ‘ಸ್ವಾತಂತ್ರಂ ಮಾ ಜನ್ಮ ಹಕ್ಕು’ (ಸ್ವಾತಂತ್ರ್ಯ ನನ್ನ ಜನ್ಮ ಹಕ್ಕು) ಎಂದು ಘೋಷಣೆ ಕೂಗಿದರು.
ಅಜ್ಜಿ ತಮ್ಮ ನೆನಪುಗಳನ್ನು ಹೇಳುತ್ತಿರುವಾಗಲೇ, ಒಂದು ಚಿಕ್ಕ ಗುಂಪಿನ ಯುವಕ-ಯುವತಿಯರು ಧ್ವಜಗಳನ್ನು ಬೀಸುತ್ತಾ, ಧ್ವನಿವರ್ಧಕದೊಂದಿಗೆ ಬೀದಿಯಲ್ಲಿ ಹಾದುಹೋಗುತ್ತಿದ್ದರು. ಅವರನ್ನು ಗಮನಿಸಿದ ಅಜ್ಜಿ, ”ಆ ದಿನಗಳು ಬೇರೆಯಾಗಿದ್ದವು. ಆ ಭಾವನೆಗಳು ಬೇರೆಯದ್ದೇ ರೀತಿಯಲ್ಲಿದ್ದವು” ಎಂದು ನಿಟ್ಟುಸಿರು ಬಿಟ್ಟರು.
ಜಾನಕಿ ಅಜ್ಜಿ 77 ವರ್ಷಗಳ ಕಾಲ, ಪ್ರತಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜದ ರಂಗೋಲಿಯನ್ನು ಪ್ರೀತಿ ಮತ್ತು ಹೆಮ್ಮೆಯಿಂದ ಬಿಡಿಸುತ್ತಿದ್ದರು. ಇದು ಭಾರತದ ಸ್ವಾತಂತ್ರ್ಯಕ್ಕೆ ಅವರ ವೈಯಕ್ತಿಕ ಗೌರವ ಅರ್ಪಣೆಯಾಗಿತ್ತು. ಅದು ಅವರಿಗೆ ಏಕತೆಯ ಸಂಕೇತವಾಗಿತ್ತು. ಧರ್ಮ, ಜಾತಿ ಅಥವಾ ವರ್ಗವನ್ನು ಲೆಕ್ಕಿಸದೆ ಎಲ್ಲರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಟ್ಟಾಗಿದ್ದರು ಎಂಬುದನ್ನು ಆ ರಂಗೋಲಿ ಪ್ರತಿನಿಧಿಸುತ್ತಿತ್ತು.
ಜಾನಕಿ ಅವರು 2024ರಲ್ಲಿ ಕೊನೆಯುಸಿರೆಳೆದರು.




