2025ರ ದ್ರಾಕ್ಷಿ ಬೆಳೆ ಹಾನಿಯು ಕೇವಲ ಆರ್ಥಿಕ ನಷ್ಟವಲ್ಲ. ಹವಾಮಾನ ಬದಲಾವಣೆಯ ಮುಂದೆ ಕೃಷಿ ದುರ್ಬಲವಾಗುತ್ತಿದೆ. ಹಾಗಾಗಿ ರೈತರನ್ನು ರಕ್ಷಿಸಲು ಸರ್ಕಾರಗಳು, ತಜ್ಞರು ಮತ್ತು ಸಮುದಾಯ ಎಲ್ಲರೂ ಕೈ ಜೋಡಿಸಬೇಕು.
2025ರಲ್ಲಿ ಮಹಾರಾಷ್ಟ್ರದ ದ್ರಾಕ್ಷಿ ಬೆಳೆ ಹಾನಿ ಮತ್ತು ಒಣದ್ರಾಕ್ಷಿ ರಫ್ತಿನ ಮೇಲೆ ಗಂಭೀರ ಪರಿಣಾಮವಾಗಿ
ದೇಶದ ಕೃಷಿ ರಂಗದಲ್ಲಿ ಒಂದು ದೊಡ್ಡ ಸಂಕಷ್ಟವನ್ನು ಸೃಷ್ಟಿಸಿದೆ. ದೇಶದ ಒಟ್ಟು ದ್ರಾಕ್ಷಿ ಉತ್ಪಾದನೆಯಲ್ಲಿ ಸುಮಾರು ಶೇ.80ರಷ್ಟು ಪಾಲು ಹೊಂದಿರುವ ಮಹಾರಾಷ್ಟ್ರದಲ್ಲಿ ನಾಸಿಕ್, ಸಾಂಗ್ಲಿ, ಸೋಲಾಪುರ ಮತ್ತು ಪುಣೆಯಂತಹ ಪ್ರದೇಶಗಳು ಮುಖ್ಯ ಉತ್ಪಾದನಾ ಕೇಂದ್ರಗಳಾಗಿವೆ. ಈ ವರ್ಷದ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆಯಲ್ಲಿ ಶೇ.50-70ರಷ್ಟು ನಷ್ಟವಾಗಿದ್ದು, ಒಣದ್ರಾಕ್ಷಿ(ರೈಸಿನ್) ಉತ್ಪಾದನೆ ಮತ್ತು ರಫ್ತನ್ನು ಗಣನೀಯವಾಗಿ ಕಡಿಮೆಗೊಳಿಸಿದೆ.
ದ್ರಾಕ್ಷಿ ಬೆಳೆಯ ಮಹತ್ವ ಮತ್ತು ಮಹಾರಾಷ್ಟ್ರದ ಪಾತ್ರ
ವಿಶ್ವಾದ್ಯಂತ ಭಾರತವು ದ್ರಾಕ್ಷಿ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ವಾರ್ಷಿಕವಾಗಿ ಸುಮಾರು 3 ಮಿಲಿಯನ್ ಟನ್ ಉತ್ಪಾದನೆಯಾಗುತ್ತದೆ. ಇದರಲ್ಲಿ ಮಹಾರಾಷ್ಟ್ರವೊಂದೇ ಶೇ.80ರಷ್ಟು ದ್ರಾಕ್ಷಿ ಉತ್ಪಾದನೆ ಮಾಡುತ್ತದೆ. ನಾಸಿಕ್, ದೇಶದ ಅತಿದೊಡ್ಡ ದ್ರಾಕ್ಷಿ ಬೆಳೆಗಾರ ಜಿಲ್ಲೆಯಾಗಿದ್ದು, ಸುಮಾರು 81,000 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಸಾಂಗ್ಲಿ ಮತ್ತು ಸೋಲಾಪುರ ಜಿಲ್ಲೆಗಳು ಒಣದ್ರಾಕ್ಷಿ ಉತ್ಪಾದನೆಯಲ್ಲಿ ಪ್ರಮುಖವಾಗಿವೆ.
ದ್ರಾಕ್ಷಿಯನ್ನು ಟೇಬಲ್ ಗ್ರೇಪ್(ಹಸಿ ತಿನ್ನುವುದು), ವೈನ್ ತಯಾರಿಕೆ ಮತ್ತು ಒಣದ್ರಾಕ್ಷಿ ತಯಾರಿಕೆಗೆ ಬಳಸಲಾಗುತ್ತದೆ. ಹಾಗಾಗಿ ಮಹಾರಾಷ್ಟ್ರದ ಮುಖ್ಯ ರಫ್ತು ಉತ್ಪನ್ನಗಳಲ್ಲಿ ಒಣದ್ರಾಕ್ಷಿಯೂ ಒಂದಾಗಿದೆ.
ಸಾಮಾನ್ಯವಾಗಿ ಭಾರತದಿಂದ ವಾರ್ಷಿಕವಾಗಿ ಸಾವಿರಾರು ಟನ್ ಒಣದ್ರಾಕ್ಷಿ ರಫ್ತಾಗುತ್ತದೆ. ಮುಖ್ಯವಾಗಿ ರಷ್ಯಾ, ಸೌದಿ ಅರೇಬಿಯಾ, ಇಂಡೋನೇಷ್ಯಾ, ಶ್ರೀಲಂಕಾ ಮತ್ತು ಯೂರೋಪಿಯನ್ ದೇಶಗಳಿಗೆ ಒಣದ್ರಾಕ್ಷಿ ರಫ್ತಾಗುತ್ತದೆ.
2025ರ ಮೇ ತಿಂಗಳಿನಿಂದ ಅಕ್ಟೋಬರ್-ನವೆಂಬರ್ ವರೆಗೆ ನಿರಂತರವಾಗಿ ಸುರಿದ ಅಕಾಲಿಕ ಮಳೆಯು ದ್ರಾಕ್ಷಿ ಬೆಳೆಗೆ ಮಾರಕವಾಯಿತು. ದ್ರಾಕ್ಷಿ ಗಿಡಗಳು ಶುಷ್ಕ ಮತ್ತು ಬಿಸಿಲಿನ ಹವಾಮಾನಕ್ಕೆ ಸೂಕ್ತವಾಗಿದ್ದು, ಅತಿಯಾದ ಆರ್ದ್ರತೆ ಹಾಗೂ ಮಳೆಯಿಂದ ಹಲವು ಸಮಸ್ಯೆಗಳಿಗೆ ಒಳಗಾಗಿವೆ.
ಚಿಕ್ಕಬಳ್ಳಾಪುರ ದ್ರಾಕ್ಷಿ ಬೆಳೆಗಾರ ಪ್ರಭು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನಾಲ್ಕು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಮಾಡಿದ್ದೇನೆ. ಈಗಷ್ಟೇ ಗಿಡ ಕಸಿ ಮಾಡಲಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ಬೆಳೆ ಹೇಗೆ ಕಾಯಿಗಟ್ಟುತ್ತದೆ ಎಂಬುದನ್ನು ನೋಡಬೇಕು. ಏಕೆಂದರೆ ಬೆಳೆ ಕಸಿ ಮಾಡಿದ ಬಳಿಕ ಇದಕ್ಕೆ ಅಗತ್ಯವಾದ ಬಿಸಿಲಿನ ಅವಶ್ಯಕತೆ ಇದೆ. ಆದರೆ ಈ ತಿಂಗಳ ಆರಂಭದಲ್ಲಿ ಸುರಿದ ಮಳೆಹನಿ, ಮೋಡ ಕವಿದ ವಾತಾವರಣ, ಮಂಜು ಬೀಳುವುದು ಇವೆಲ್ಲವೂ ದ್ರಾಕ್ಷಿ ಬೆಳೆ ಮೇಲೆ ತುಂಬಾ ಪರಿಣಾಮ ಬೀರುತ್ತವೆ” ಎಂದು ಹೇಳಿದರು.
“ನಾಲ್ಕು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲು 6 ರಿಂದ 7 ಲಕ್ಷ ರೂಪಾಯಿ ಖರ್ಚಾಗುತ್ತದೆ. ಹವಾಮಾನ ಬದಲಾವಣೆಗಳಾದರೆ ರೋಗ ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಔಷಧಿ ಸಿಂಪಡಣೆಗೆ ಇನ್ನೂ ಹೆಚ್ಚಿನ ಖರ್ಚಾಗುತ್ತದೆ. ರೈತರ ಕಷ್ಟ ಹೇಳತೀರದಾಗಿದೆ. ದ್ರಾಕ್ಷಿ ಬೆಳೆಯುವುದೇ ಬೇಡ ಎನ್ನುವಂತಾಗಿದೆ. ಕಟಾವು ಮಾಡಿದ ಕೂಡಲೇ ಎಷ್ಟು ಬೆಲೆಯಿದ್ದರೂ ಕೊಡಲೇಬೇಕು. ಇದನ್ನು ಇಟ್ಟುಕೊಳ್ಳಲಾಗುವುದಿಲ್ಲ. ಎಷ್ಟು ಪ್ರಮಾಣದಲ್ಲಿ ಇಳುವರಿ ಬರುತ್ತದೆ ಎಂಬುದು ಈ ಬಾರಿಯ ಕಟಾವಿನ ವೇಳೆ ಅಂದರೆ ಏಪ್ರಿಲ್ ಮೇ ತಿಂಗಳಿನಲ್ಲಿ ತಿಳಿಯುತ್ತದೆ. ಯಾಕೆಂದರೆ, ಈಗ ಹವಾಮಾನ ಬದಲಾವಣೆಯಿಂದ ಹೂವುಗಳೆಲ್ಲ ಉದುರುತ್ತವೆ. ರೋಗಕ್ಕೆ ತುತ್ತಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದರೂ ಬೆಲೆ ಸಿಗುವುದಿಲ್ಲ. ಇದಕ್ಕೆಲ್ಲ ಹವಾಮಾನ ವೈಪರೀತ್ಯ, ಅಕಾಲಿಕ ಮಳೆಯೇ ಕಾರಣ” ಎಂದು ಹೇಳುತ್ತಾರೆ.
“ತೋಟಗಾರಿಕಾ ಬೆಳೆಗಳ ಕಡೆಗೂ ಸರ್ಕಾರ ಗಮನಹರಿಸಬೇಕು. ಇದೊಂದೇ ಬೆಳೆಯನ್ನು ನಂಬಿಕೊಂಡು ಇರುತ್ತೇವೆ. ಈ ಬಾರಿ ಫೆಬ್ರವರಿವರೆಗೂ ಚಳಿಗಾಲ ಮುಂದುವರೆಯುವ ಸಾಧ್ಯತೆ ಇದೆ. ಇದರಿಂದ ಬರುವ ಆದಾಯವೇ ಹೊರತು ಬೇರಾವುದೇ ಆದಾಯಗಳಿಲ್ಲ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ದೇಶದ ದ್ರಾಕ್ಷಿ ಬೆಳೆಗಾರರನ್ನೂ ಪ್ರೋತ್ಸಾಹಿಸಬೇಕು. ಪರಿಹಾರಗಳನ್ನು ನೀಡಬೇಕು” ಎಂದು ಮನವಿ ಮಾಡಿದರು.
ಮಹಾರಾಷ್ಟ್ರದಲ್ಲಿ ಏಪ್ರಿಲ್ನಲ್ಲಿ ಗಿಡಗಳನ್ನು ಕಸಿ ಮಾಡಿದ ಬಳಿಕ ಅವುಗಳಿಗೆ ಬಿಸಿಲಿನ ತಾಪದ ಅಗತ್ಯವಿರುತ್ತದೆ. ಆದರೆ ನಿರಂತರ ಮಳೆಯಿಂದ ಹೂವುಗಳು ಉದುರಿ, ಹಣ್ಣು ಕಟ್ಟದೇ ಇದ್ದವು. ಅತಿಯಾದ ಆರ್ದ್ರತೆಯಿಂದ ಡೌನಿ ಮಿಲ್ಡ್ಯೂ, ಪೌಡರಿ ಮಿಲ್ಡ್ಯೂ ಮುಂತಾದ ಶಿಲೀಂಧ್ರಗಳಿಂದ ರೋಗಗಳು ಹರಡಿ, ಹಣ್ಣುಗಳು ಕೊಳೆತಿವೆ. ಅಲ್ಲದೆ ಹಣ್ಣುಗಳ ಗಾತ್ರ ಕಡಿಮೆಯಾಗಿ, ಸಿಹಿ ಕಡಿಮೆಯಾಗಿದ್ದು, ಗುಣಮಟ್ಟವೂ ಇಲ್ಲದಂತಾಗಿದೆ. ಹಾಗಾಗಿ ರಫ್ತು ಮಾಡಲು ಬೇಕಾದಂತಹ ಗುಣಮಟ್ಟ ಇಲ್ಲದಿರುವ ಕಾರಣ ರೈತರಿಗೆ ಇದರ ಬಿಸಿ ತಾಕಿದೆ.
ನಾಸಿಕ್ನಲ್ಲಿ ಶೇ.70-100ರಷ್ಟು ನಷ್ಟ, ಸಾಂಗ್ಲಿಯಲ್ಲಿ ಶೇ.50ರಷ್ಟು ನಷ್ಟ, ಸೋಲಾಪುರ ಮತ್ತು ಪುಣೆಯಲ್ಲಿ ಶೇ.30-40ರಷ್ಟು ನಷ್ಟ ಆಗಿರುವುದಾಗಿ ಅಂದಾಜಿಸಲಾಗಿದೆ. ಹವಾಮಾನ ಬದಲಾವಣೆಯಿಂದ ಇಷ್ಟು ಪ್ರಮಾಣದ ನಷ್ಟವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಅಕಾಲಿಕ ಮಳೆಯು ದ್ರಾಕ್ಷಿ ಬೆಳೆಗೆ ನಿಯಮಿತ ಸವಾಲಾಗಿ ಪರಿಣಮಿಸಿದೆ.
ಒಣದ್ರಾಕ್ಷಿ ಉತ್ಪಾದನೆ ಮತ್ತು ರಫ್ತಿನ ಮೇಲೆ ಪರಿಣಾಮ
ಒಣದ್ರಾಕ್ಷಿ ತಯಾರಿಕೆಗೆ ದ್ರಾಕ್ಷಿಯನ್ನು ಒಣಗಿಸುವುದು ಅಗತ್ಯವಿದ್ದು, ಇದಕ್ಕೆ ಶುಷ್ಕ ಹವಾಮಾನ ಬೇಕು. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಸುರಿದ ಮಳೆಯಿಂದ ಒಣಗಿಸುವ ಪ್ರಕ್ರಿಯೆ ತಡವಾಯಿತು. ಇದರಿಂದ ಗುಣಮಟ್ಟ ಕುಸಿತವಾಯಿತು.
ಏಪ್ರಿಲ್ನಿಂದ ನವೆಂಬರ್ 2025ರವರೆಗೆ ಮಹಾರಾಷ್ಟ್ರದಿಂದ ಕೇವಲ 6,309 ಟನ್ ಒಣದ್ರಾಕ್ಷಿ ರಫ್ತಾಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರೀ ಕುಸಿತವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ವಾರ್ಷಿಕ ರಫ್ತು ಹಲವು ಸಾವಿರ ಟನ್ಗಳಷ್ಟಿರುತ್ತದೆ. ಏಪ್ರಿಲ್-ಆಗಸ್ಟ್ 2025ರಲ್ಲಿ ಹಸಿ ದ್ರಾಕ್ಷಿ ರಫ್ತು ಕೂಡ ಕಡಿಮೆಯಾಗಿದ್ದು, ಕೇವಲ 59,560 ಟನ್ಗಳಷ್ಟು ರಫ್ತಾಗಿದೆ.
ಸರಬರಾಜು ಕಡಿಮೆಯಾದ ಕಾರಣದಿಂದ ಒಣದ್ರಾಕ್ಷಿ ಮತ್ತು ಹಸಿ ದ್ರಾಕ್ಷಿ ಬೆಲೆ ಏರಿಕೆಯಾಗಿದೆ. ಹಸಿ ದ್ರಾಕ್ಷಿ ಬೆಲೆ ಕೆಜಿಗೆ ₹140-160ಕ್ಕೆ ಏರಿದ್ದು(ಹಿಂದೆ ₹70-80 ಇತ್ತು). ವೈನ್ ಉದ್ಯಮದ ಮೇಲೂ ಪರಿಣಾಮ ಬೀರಿದೆ.
ರೈತರ ಮೇಲೆ ಪರಿಣಾಮ ಮತ್ತು ಸಾಮಾಜಿಕ ಸಮಸ್ಯೆಗಳು
ದ್ರಾಕ್ಷಿ ಬೆಳೆಯ ಹೆಚ್ಚು ಹೂಡಿಕೆಯ ಬೆಳೆಯಾಗಿದ್ದು, ಪ್ರತಿ ಹೆಕ್ಟೇರ್ಗೆ 1 ಲಕ್ಷ ರೂಪಾಯಿಯಿಂದ 1.5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ವರ್ಷದ ನಷ್ಟದಿಂದ ರೈತರು ಭಾರೀ ಸಾಲಗಾರರಾಗಿದ್ದಾರೆ. ನಾಸಿಕ್ ಮತ್ತು ಇತರ ಜಿಲ್ಲೆಗಳಲ್ಲಿ ದ್ರಾಕ್ಷಿ ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಇಂತಹ ಘಟನೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಕಂಡುಬಂದಿವೆ.
ನಾಸಿಕ್ನ ನಿಫಡ್ ತಾಲೂಕಿನ ಉಗಾಂವ್ ಗ್ರಾಮದ ರೈತ ಕೈಲಾಸ್ ಪಂಗವಾನೆ(45) ನವೆಂಬರ್ 4ರಂದು ತಮ್ಮ ದ್ರಾಕ್ಷಿ ತೋಟದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಅನೇಕ ರೈತರು ತಮ್ಮ ದ್ರಾಕ್ಷಿ ತೋಟಗಳನ್ನು ಕಿತ್ತುಹಾಕುತ್ತಿದ್ದಾರೆ. ಬೇರೆ ಬೆಳೆಗಳತ್ತ ತಿರುಗುತ್ತಿದ್ದಾರೆ. ಇದರಿಂದಾಗಿ ಸಂಬಂಧಿತ ಉದ್ಯಮಗಳಾದ ವೈನ್ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಸಾಗಾಣಿಕೆ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ.
ಸರ್ಕಾರಿ ಕ್ರಮಗಳು ಮತ್ತು ಭವಿಷ್ಯದ ಸವಾಲುಗಳು
ಸರ್ಕಾರವು ಹಾನಿ ಮೌಲ್ಯಮಾಪನ ಮಾಡಿ ಪರಿಹಾರ ನೀಡುತ್ತಿದೆ. ಬೆಳೆ ವಿಮೆ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ರೈತರು ತಕ್ಷಣದ ಸಹಾಯ ಮತ್ತು ಬೆಂಬಲ ಬೆಲೆಗೆ ಒತ್ತಾಯ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಬಹುದು. ರೈತರು ತೋಟಕ್ಕೆ ಒಡ್ಡು, ಹೊಸ ತಳಿಗಳು ಮತ್ತು ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.
ಇದನ್ನೂ ಓದಿದ್ದೀರಾ? ಚಳಿಗೆ ತತ್ತರಿಸಿದ ತೊಗರಿ-ಅವರೆ: ರೈತರಿಗೆ ಭಾರೀ ನಷ್ಟದ ಬರೆ
2025ರ ದ್ರಾಕ್ಷಿ ಬೆಳೆ ಹಾನಿಯು ಕೇವಲ ಆರ್ಥಿಕ ನಷ್ಟವಲ್ಲ. ಹವಾಮಾನ ಬದಲಾವಣೆಯ ಮುಂದೆ ಕೃಷಿ ದುರ್ಬಲವಾಗುತ್ತಿದೆ. ಹಾಗಾಗಿ ರೈತರನ್ನು ರಕ್ಷಿಸಲು ಸರ್ಕಾರಗಳು, ತಜ್ಞರು ಮತ್ತು ಸಮುದಾಯ ಸೇರಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಭಾರತದ ದ್ರಾಕ್ಷಿ ಮತ್ತು ಒಣದ್ರಾಕ್ಷಿ ರಫ್ತು ಇನ್ನಷ್ಟು ಕುಸಿಯಬಹುದಾದ ಆತಂಕ ಎದುರಾಗಿದೆ.





