ತನ್ನ ಮಗಳ ಎರಡು ಈವೆಂಟ್ಗಳಲ್ಲಿ ಗೆದ್ದರೂ ಕೇವಲ ಒಂದು ಬಹುಮಾನ ನೀಡಲಾಗಿದೆ ಎಂದು ಪ್ರಶ್ನಿಸಿದ್ದ 40 ವರ್ಷದ ವ್ಯಕ್ತಿಯನ್ನು ಕಾರ್ಯಕ್ರಮ ಸಂಘಟಕರು ಹೊಡೆದು ಕೊಂದಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ನ ಬೋರಬಂದರ್ನಲ್ಲಿ ಕೃಷ್ಣಾ ಪಾರ್ಕ್ ಸೊಸೈಟಿಯು ಸಾಂಪ್ರಾದಾಯಿಕ ನೃತ್ಯ ‘ಗರ್ಬಾ’ಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಸ್ಪರ್ಧೆಗಳಲ್ಲಿ 11 ವರ್ಷದ ಬಾಲಕಿ ಭಾವಹಿಸಿ ಎರಡು ಸ್ಪರ್ಧೆಗಳಲ್ಲಿ ಗೆದ್ದಿದ್ದಳು. ಆದರೆ, ಆಕೆಗೆ ಒಂದೇ ಒಂದು ಬಹುಮಾನ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಆಕೆಯ ತಂದೆ ಸರ್ಮನ್ ಒಡೆದಾರ ಅವರ ಮೇಲೆ ಏಳು ಮಂದಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಸರ್ಮನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸರ್ಮನ್ ಹತ್ಯೆಯಲ್ಲಿ ಭಾಗಿಯಾಗಿರುವ ರಾಜಾ ಕುಚಾಡಿಯಾ, ರಾಜು ಕೇಶ್ವಾಲಾ, ರಾಮ್ಡೆ ಬೊಖಿರಿಯಾ, ಪ್ರತೀಕ್ ಗೊರಾನಿಯಾ ಹಾಗೂ ಇತರ ಮುವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಬೋರಬಂದರ್ನ ಉಪ ಪೊಲೀಸ್ ವರಿಷ್ಠಾಧಿಕಾರಿ ರುತು ರಾಬಾ ತಿಳಿಸಿದ್ದಾರೆ.
ಪೋರಬಂದರ್ನ ಉದ್ಯೋಗನಗರ ಪೊಲೀಸ್ ಠಾಣೆಯಲ್ಲಿ ಸರ್ಮನ್ ಅವರ ಪತ್ನಿ ಮಾಲಿಬೆನ್ ಅವರು ದೂರು ದಾಖಳಿಸಿದ್ದಾರೆ. ದೂರಿನಲ್ಲಿ, “ಸೋಮವಾರ ರಾತ್ರಿ ತಮ್ಮ ಮಗಳು ಗಾರ್ಬಾ ನೃತ್ಯ ಮಾಡಿದ ನಂತರ ಮನೆಗೆ ಬಂದು, ‘ತಾನು ಎರಡು ವಿಭಿನ್ನ ಗೆದ್ದಿದ್ದರೂ ತನಗೆ ಒಂದು ಬಹುಮಾನ ಮಾತ್ರ ನೀಡಿದ್ದಾರೆ’ ಎಂದು ಹೇಳಿದ್ದರು. ಮಗಳೊಂದಿಗೆ ನಾನು (ಮಾಲಿಬೆನ್) ಸಂಘಟಕರ ಬಳಿ ಹೋಗಿ ಪ್ರಶ್ನಿಸಿದಾಗ, ಆರೋಪಿ ಕೇಶ್ವಾಲಾ ಎಂಬಾತ ನಾವು ಕೊಟ್ಟಿರುವ ತೀರ್ಪನ್ನು ಒಪ್ಪಿಕೊಳ್ಳಬೇಕೆಂದು ಅಸಭ್ಯವಾಗಿ ಹೇಳಿದ್ದಾನೆ. ಆ ವೇಳೆ, ಕುಚಾಡಿಯಾ ಮತ್ತು ಬೊಖಿರಿಯಾ ಕೂಡ ಸ್ಥಳಕ್ಕೆ ಬಂದು ‘ಇಲ್ಲಿಂದ ಹೋಗದಿದ್ದರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದರು” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೈತ್ರಿ ಇದ್ದರೂ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಎಂದ ಮಿಝೋರಾಂ ಮುಖ್ಯಮಂತ್ರಿ
ಅದಾದ ಒಂದು ಗಂಟೆಯ ನಂತರ, ಮಾಲಿಬೆನ್ ಮತ್ತು ಸರ್ಮನ್ ತಮ್ಮ ಮನೆಯ ಹೊರಗೆ ಕುಳಿತಿದ್ದಾಗ, ಅಲ್ಲಿಗೆ ಬಂದ ನಾಲ್ವರು ಪ್ರಮುಖ ಆರೋಪಿಗಳು ಮತ್ತು ಅವರ ಮೂವರು ಸಹಚರರು ದೊಣ್ಣೆ ಮತ್ತು ಮರದ ಕಟ್ಟಿಗೆಗಳಿಂದ ಹೊಡೆಯಲಾರಂಭಿಸಿದರು. ಸರ್ಮನ್ ಅವರನ್ನು ರಕ್ಷಿಸಲು ಹೋದಾಗ ಮಾಲಿಬೆನ್ ಅವರನ್ನು ದೂಡಿದ್ದಾರೆ. ಬಳಿಕ, ಸರ್ಮನ್ ಅವರನ್ನು ತಮ್ಮ ಬೈಕ್ಗಳಲ್ಲಿ ಗಾರ್ಬಾ ಸ್ಥಳಕ್ಕೆ ಎಳೆದೊಯ್ದು ಥಳಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸರ್ಮನ್ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದರೆ, ಚಿಕಿತ್ಸೆ ಫಲಿಸಂದೆ ಅವರು ಸಾವನ್ನಪ್ಪಿದ್ದಾರೆ.




