2002ರಲ್ಲಿ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಖುಲಾಸೆಗೊಂಡಿದ್ದಾರೆ. ಏಳು ವರ್ಷಗಳ ಹಿಂದೆ ವಿಶೇಷ ಸಿಬಿಐ ಕೋರ್ಟ್ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಶನಿವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ. ಆದರೆ ಗುರ್ಮೀತ್ ಸಿಂಗ್ ಇನ್ನೂ ಎರಡು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿದ್ದು 20 ವರ್ಷಗಳ ಜೀವಾವಧಿ ಶಿಕ್ಷೆಯಿದೆ. ಆದ್ದರಿಂದ ಜೈಲಿನಲ್ಲೇ ಇರಲಿದ್ದಾರೆ.
ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆಗೆ ಸಂಬಂಧಿಸಿದಂತೆ ಸಿಂಗ್ ಮತ್ತು ಇತರ ಮೂವರು ಕುಲದೀಪ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕ್ರಿಶನ್ ಲಾಲ್ಗೆ 2019ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗುರ್ಮೀತ್ ಸಿಂಗ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗುರ್ಮೀತ್ ಸಿಂಗ್ ಅವರನ್ನು ಖುಲಾಸೆಗೊಳಿಸಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ಗೆ ಮತ್ತೆ ಪೆರೋಲ್: ಇದು 15ನೇ ಬಾರಿ
ಪೂರಾ ಸಚ್ ಪತ್ರಿಕೆಯನ್ನು ನಡೆಸುತ್ತಿದ್ದ ಛತ್ರಪತಿ ಅವರನ್ನು 2002ರ ಅಕ್ಟೋಬರ್ನಲ್ಲಿ ಹರಿಯಾಣದ ಸಿರ್ಸಾದಲ್ಲಿರುವ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯಲ್ಲಿ ಮಹಿಳಾ ಅನುಯಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಅನಾಮಧೇಯ ಪತ್ರವೊಂದನ್ನು ಛತ್ರಪತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಅದಾದ ಬಳಿಕ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಛತ್ರಪತಿಯವರ ಕುಟುಂಬವು 2003ರಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಬಳಿಕ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. 2007ರ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರೂ, ಗುರ್ಮೀತ್ ರಾಮ್ ರಹೀಮ್ ಸಿಂಗ್ 2017ರಲ್ಲಿ ತನ್ನ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿ. ಆದರೆ ಪದೇ ಪದೇ ಪರೋಲ್ ಮೇಲೆ ಗುರ್ಮೀತ್ ಹೊರಬರುವುದು ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರಿ ‘ದೇವಮಾನವ’ನಿಗೆ ಈ ಪರಿ ‘ಪೆರೋಲ್’ ಸಿಗುವುದಾದರೂ ಹೇಗೆ? ಸಂತ್ರಸ್ತೆಯರಿಗೆ ಶಿಕ್ಷೆಯೇ?
2026ರ ಜನವರಿಯಲ್ಲಿ ಗುರ್ಮೀತ್ ಸಿಂಗ್ಗೆ 40 ದಿನಗಳ ಪರೋಲ್ ಮಂಜೂರು ಮಾಡಲಾಗಿದೆ. 2017ರಲ್ಲಿ ಸಿಂಗ್ ಶಿಕ್ಷೆಗೊಳಗಾದ ನಂತರ 15ನೇ ಬಾರಿ ಪರೋಲ್ ಪಡೆದಿರುವುದು. ಕಳೆದ ಐದು ವರ್ಷಗಳಲ್ಲಿ ಸಿಂಗ್ ಪರೋಲ್ ಮತ್ತು ಫರ್ಲೋ ಮೂಲಕ ಒಟ್ಟು 400ಕ್ಕೂ ಹೆಚ್ಚು ದಿನಗಳನ್ನು ಜೈಲಿನಿಂದ ಹೊರಗೆ ಕಳೆದಿದ್ದಾರೆ.
ಮುಖ್ಯವಾಗಿ ಹರಿಯಾಣ ಅಥವಾ ದೆಹಲಿಯ ಚುನಾವಣೆಗಳ ಸಮಯದಲ್ಲಿಯೇ ಪರೋಲ್ ಸಿಗುವುದರ ವಿರುದ್ಧ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಹರಿಯಾಣದಲ್ಲಿ ಗುರ್ಮೀತ್ ಸಿಂಗ್ಗೆ ದೊಡ್ಡ ಮಟ್ಟದ ಅನುಯಾಯಿಗಳಿರುವುದರಿಂದ ಚುನಾವಣೆ ವೇಳೆಯೇ ಪರೋಲ್ ಸಿಗುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ಇನ್ನು ಅತ್ಯಾಚಾರದಂತಹ ಗಂಭೀರ ಪ್ರಕರಣದ ಅಪರಾಧಿಗೆ ಪದೇ ಪದೇ ಪರೋಲ್ ನೀಡುವುದನ್ನು ಪ್ರಶ್ನಿಸಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಹಿಂದೆಯೇ ಹೈಕೋರ್ಟ್ ಮುಂದಿನ ಬಾರಿ ಪರೋಲ್ ನೀಡುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು.





