ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಹರಿಯಾಣದ ಸಚಿವ ಅನಿಲ್ ವಿಜ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಉಪಾಸನಾ ಅವರ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಶುಕ್ರವಾರ ವರದಿಯಾಗಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸುವ ವಿಚಾರದಲ್ಲಿ ಅಧಿಕಾರ ವ್ಯಾಪ್ತಿಯ ಕುರಿತು ಈ ಮಾತಿನ ಚಕಮಕಿ ನಡೆಯಿತು.
ಇಂಧನ, ಸಾರಿಗೆ ಮತ್ತು ಕಾರ್ಮಿಕ ಖಾತೆ ಸಚಿವರಾದ ಅನಿಲ್ ವಿಜ್ ಅವರ ಅಧ್ಯಕ್ಷತೆಯಲ್ಲಿ ಕುಂದುಕೊರತೆ ನಿವಾರಣಾ ಸಭೆ ನಡೆಯುತ್ತಿತ್ತು. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರು, ಭೂ ಮಾರಾಟದ ವಿಚಾರವಾಗಿ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಒಬ್ಬರ ವಿರುದ್ಧ ಆರೋಪ ಮಾಡಿದ್ದರು. ವಿಚಾರಣೆ ವೇಳೆ ಮಧ್ಯಪ್ರವೇಶಿಸಿದ ಸಚಿವ ವಿಜ್, “ಪ್ರಕರಣದಲ್ಲಿ ಕ್ರಮ ಕೈಗೊಳ್ಳುವವರೆಗೆ ಎಎಸ್ಐ ತಮ್ಮ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ಅಮಾನತುಗೊಳಿಸಬೇಕು,” ಎಂದು ಎಸ್ಪಿ ಅವರಿಗೆ ಆದೇಶಿಸಿದರು.
ಸಚಿವರ ಆದೇಶಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಉಪಾಸನಾ, “ಸಂಬಂಧಪಟ್ಟ ಅಧಿಕಾರಿ ನೆರೆಯ ಜಿಲ್ಲೆಗೆ ಸೇರಿದವರಾಗಿದ್ದು, ಅವರು ನನ್ನ ಆಡಳಿತಾತ್ಮಕ ನಿಯಂತ್ರಣದ ವ್ಯಾಪ್ತಿಗೆ ಬರುವುದಿಲ್ಲ. ಅವರನ್ನು ಅಮಾನತು ಮಾಡುವ ಅಧಿಕಾರ ನನಗಿಲ್ಲ. ಈ ಪ್ರಕರಣದಲ್ಲಿ ಕುರುಕ್ಷೇತ್ರ ಎಸ್ಪಿ ಮಾತ್ರ ಅಮಾನತು ಆದೇಶ ಹೊರಡಿಸಲು ಸಾಧ್ಯ,” ಎಂದು ಸ್ಪಷ್ಟಪಡಿಸಿದರು.
ಆದರೆ, ತಮ್ಮ ಆದೇಶ ಪಾಲಿಸಲೇಬೇಕೆಂದು ಪಟ್ಟು ಹಿಡಿದ ಸಚಿವ ವಿಜ್, “ನಾನು ಆದೇಶ ನೀಡುತ್ತಿದ್ದೇನೆ, ಅವರನ್ನು ಅಮಾನತು ಮಾಡಲೇಬೇಕು. ಈ ಕುರಿತು ಅಗತ್ಯ ಕ್ರಮಕ್ಕಾಗಿ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆಯಿರಿ,” ಎಂದು ತಾಕೀತು ಮಾಡಿದರು. ಉತ್ತಕ್ಕೆ ಉತ್ತರ ನೀಡಿದ ಎಸ್ಪಿ ಅವರು, “ನಾನು ಪತ್ರ ಬರೆಯಬಲ್ಲೆ, ಆದರೆ ಅಮಾನತು ಮಾಡಲು ಸಾಧ್ಯವಿಲ್ಲ,” ಎಂದು ತಮ್ಮ ನಿಲುವಿಗೆ ಬದ್ಧರಾಗಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡಿಸಿಕೊಳ್ತೀರಲ್ಲ, ಆಗ ಜಾತಿ ಯಾಕೆ ಮುಖ್ಯ ಆಗುವುದಿಲ್ಲ?
ಈ ಹಂತದಲ್ಲಿ ಸಭೆಯ ವಾತಾವರಣ ಬಿಸಿಯಾಯಿತು. “ನೀವು ಪ್ರತಿಯೊಂದು ಕೆಲಸದಲ್ಲೂ ಹೀಗೆಯೇ ಮಾಡುತ್ತೀರಿ. ನಾನು ನಿಮಗೆ ಆದೇಶಿಸುತ್ತಿದ್ದೇನೆ, ನೀವು ಡಿಜಿಪಿಗೆ ಬರೆಯಿರಿ… ನೀವು ನನ್ನ ಆದೇಶವನ್ನು ಕಾರ್ಯಗತಗೊಳಿಸಲೇಬೇಕು. ನನ್ನ ಆದೇಶ ಇಡೀ ಹರಿಯಾಣದಲ್ಲಿ ನಡೆಯುತ್ತದೆ” ಎಂದು ಸಚಿವರು ಗದರಿದರು.
ವಿಡಿಯೋದಲ್ಲಿ ಸೆರೆಯಾದಂತೆ, ಸಚಿವರ ಈ ಮಾತಿಗೆ ಸಭೆಯಲ್ಲಿದ್ದ ಕೆಲವರು ಚಪ್ಪಾಳೆ ತಟ್ಟಿದರು. ದೂರುದಾರರೂ ಕೂಡ ಎಸ್ಪಿ ಅವರನ್ನು ಉದ್ದೇಶಿಸಿ, “ಮೇಡಂ, ಪ್ರತಿ ಬಾರಿಯೂ ನೀವು ಹೀಗೆಯೇ ಮಾಡುತ್ತೀರಿ” ಎಂದು ದನಿಗೂಡಿಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಕೈತಾಲ್ ಜಿಲ್ಲಾಧಿಕಾರಿ ಅಪರಾಜಿತಾ ಅವರು ಮಧ್ಯಪ್ರವೇಶಿಸಿ, ಎಸ್ಪಿ ಅವರು ಡಿಜಿಪಿಗೆ ಪತ್ರ ಬರೆಯಲು ಒಪ್ಪಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ಇದಕ್ಕೆ ಸಚಿವರು ಎಸ್ಪಿ ಕಡೆಗೆ ಬೆರಳು ಮಾಡಿ, “ಅವರನ್ನು ಅಮಾನತುಗೊಳಿಸಬೇಕೆಂದು ನೀವು ಡಿಜಿಪಿಗೆ ಬರೆಯಿರಿ… ನನ್ನ ಆದೇಶವನ್ನು ಯಾರು ಕೇಳುವುದಿಲ್ಲವೋ ನಾನೂ ನೋಡುತ್ತೇನೆ,” ಎಂದು ಎಚ್ಚರಿಸಿದರು.
ಕುಂದುಕೊರತೆ ಸಭೆಗಳಲ್ಲಿ ಸಚಿವ ವಿಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಮೂರು ತಿಂಗಳ ಹಿಂದೆಯೂ ವಂಚನೆ ಪ್ರಕರಣವೊಂದರಲ್ಲಿ ಶೂನ್ಯ ಎಫ್ಐಆರ್ ದಾಖಲಿಸುವ ವಿಚಾರದಲ್ಲಿ ಅಧಿಕಾರಿಯೊಬ್ಬರು ತಮ್ಮ ನಿರ್ದೇಶನವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ವಿಜ್ ಕಿಡಿಕಾರಿದ್ದರು. ದಶಕದ ಹಿಂದೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರೊಂದಿಗಿನ ಜಗಳದ ನಂತರ ಸಚಿವರು ಸಭೆಯಿಂದ ಅರ್ಧದಲ್ಲೇ ಹೊರನಡೆದ ಘಟನೆಯೂ ನಡೆದಿತ್ತು ಎಂದು ವರದಿಗಳು ತಿಳಿಸಿವೆ.





