ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸ್ಪಷ್ಟ ಉತ್ತರಗಳಿಲ್ಲ, ತೆರಿಗೆ ನೀತಿಗಳಲ್ಲೂ ಸ್ಪಷ್ಟತೆಯಿಲ್ಲ. ದೇಶದ ಆರ್ಥಿಕ ದಿಕ್ಕು ನಿರ್ಧರಿಸಬೇಕಾದ ಬಜೆಟ್, ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್, ಟ್ರೋಲ್ಗಳು ಮತ್ತು ವಿಡಂಬನೆಗಳ ಮಟ್ಟಕ್ಕೆ ಇಳಿದಿರುವುದು ದುರಂತ.
ಬಜೆಟ್ ಎಂದರೆ ಈಗಿನ ʼಟ್ರೆಂಡ್ʼನಂತೆ ಅರ್ಥೈಸುವುದಾರೆ, ಮಂಡನೆಯಾಗುವಾಗ ಆಡಳಿತ ಪಕ್ಷದವರು ಮಾತು ಮಾತಿಗೂ ಟೇಬಲ್ ಬಡಿದು ವಾಹ್ ವಾಹ್ ಎನ್ನುವುದು, ವಿರೋಧ ಪಕ್ಷಗಳು ಮೂಕ ಪ್ರೇಕ್ಷಕರಾಗಿ ಕೇಳಿ ಸುಮ್ಮನಾಗುವ ಒಂದು ಪ್ರದರ್ಶನ. ಇದು ಪ್ರತೀ ವರ್ಷ ಸದನದೋಳ್ ನಡೆಯಲೇಬೇಕಾದ ಸರ್ಕಸ್ಸು.
ಹಿಂದೆ ವರ್ಷ ವರ್ಷ ಬಜೆಟ್ ಆಗುವ ದಿನದಂದು ಜನರು ರೇಡಿಯೋ ಸುತ್ತ ಕಾದು ಕುಳಿತು ಗಂಭೀರವಾಗಿ ಆಲಿಸುತ್ತಿದ್ದರಂತೆ. ಅದು ಮುಂದಿನ ಮೂರ್ನಾಲ್ಕು ದಿನಗಳವರೆಗೆ, ಕೆಲವೊಮ್ಮೆ ವಾರಗಟ್ಟಲೆ ಹಳ್ಳಿಕಟ್ಟೆಗಳಲ್ಲೂ ಚರ್ಚೆಯಾಗುತ್ತಿತ್ತಂತೆ. ಆದರೀಗ ಬಜೆಟ್ ಲೆಕ್ಕಾಚಾರಕ್ಕಿಂತ ಮೀಮ್ಸ್ಗಳು ಹೆಚ್ಚು ಸದ್ದು ಮಾಡ್ತಿವೆ. ನಿನ್ನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್ನ್ನು ಯಶಸ್ವಿಯಾಗಿ ಮಂಡಿಸಿದ ಬೆನ್ನಲ್ಲೇ ಇಂಟರ್ನೆಟ್ ತುಂಬಾ ಪರಕ್ಕಿಂತ ವಿರೋಧ ಚರ್ಚೆ, ವ್ಯಂಗ್ಯ, ವಿಡಂಬನೆಗಳ ಫ್ಲಡ್ ಜೋರಾಗಿದೆ. ವಿಶೇಷವಾಗಿ ಮಧ್ಯಮವರ್ಗದ ಮೇಲೆ ಸೀದಾ ಬರೆ ಎಳೆಯಲಾಗಿದೆ ಎಂಬರ್ಥದ ವಿಡಂಬನೆಗಳು ಹೆಚ್ಚು ಗಮನ ಸೆಳೆದಿವೆ.

ಬರೆಹಗಾರ ನಾಗೇಗವ್ಡ ಅವರ ಎಫ್ಬಿ ವಾಲ್ನ ಪೋಸ್ಟ್ ಒಂದು ಹೀಗಿದೆ.. “ಬಜೆಟ್ ಅನ್ನೋದು ಹೆಂಗೆ ಗೊತ್ತಾ ಪ್ರೆಂಡ್ಸ್, ನಿಮ್ಮ ಹೆಂಡತಿಗೆ, ನೆಕ್ಸ್ಟ್ ಕಬ್ಬಿನ ದುಡ್ಡು ಬರಲಿ ಇರು ಚಿನ್ನ, ಐವತ್ತು ಗ್ರಾಂ ಮಾಂಗಲ್ಯ ಸರ ಮಾಡಿಸಿತಿನಿ ಅನ್ನೋದು. ಕಬ್ಬಿನ ದುಡ್ಡು ಬಂದ ಮೇಲೆ ಆರೇಳು ಗ್ರಾಂದು ಜೋಡಿ ಬಳೆ ಕೊಡಿಸುವ ತರ ಪ್ರೆಂಡ್ಸ್.
ಮೇಲಿನ ಪ್ಯಾರಾ ಅರ್ತ ಮಾಡಿಕೊಂಡು ಕೆಳಗಿನ ಬಜೆಟ್ ರಿಡಿಂಗ್ ಮಾಡಿ ಪ್ರೆಂಡ್ಸ್..
ನೋಡಿದರೇನ್ರಿ ನಮ್ಮ ರಾಜ್ಯಕ್ಕೆ ಹೈ ಸ್ಪೀಡ್ ಟ್ರೈನ್….. ಇಡೀ ದೇಶಕ್ಕೆ ಬಂಡವಾಳ ವೆಚ್ಚ ಎಸ್ಟು ಗೊತ್ತೇನ್ರೀ….
12, 21, 821 ಕೋಟಿ ರೂಪಾಯಿ ಕಣ್ರಿ (ಹನ್ನೆರಡು ಲಕ್ಶ ಇಪ್ಪತ್ತೊಂದು ಸಾವಿರ ಎಂಟನೂರ ಇಪ್ಪತ್ತೊಂದು ಕೋಟಿ)…. Capex ಹೆಚ್ಚಾಯಿತು ಹೆಚ್ಚಾಯಿತು ಅಂತ ಕನ್ನಡ ನ್ಯೂಸ್ ಚಾನಲ್ ನಲ್ಲಿ ನೋಡಿರುತ್ತಿರಿ….
ಇದೆಲ್ಲ ನಿಜನ, ಇವರುಗಳು ನಿಜವಾಗಿಯೂ ಇಸ್ಟೆಲ್ಲ ಕರ್ಚು ಮಾಡುತ್ತಾರ ಅಂತ ಗೊತ್ತಾಗಬೇಕು ಅಂದ್ರೆ ಕಳೆದ ವರುಶದ ಬಜೆಟ್ ನಲ್ಲಿ ಎಸ್ಟು ಅನೌನ್ಸ ಮಾಡಿ ಎಸ್ಟು ಕರ್ಚು ಮಾಡಿದರು ಅನ್ನುವ ಲೆಕ್ಕ ನೋಡಿದರೆ ಇವರ ನಿಜವಾದ ಬಂಡವಾಳ ಗೊತ್ತಾಗುತ್ತದೆ.
2025-26 ಬಜೆಟ್ ಲೆಕ್ಕಾಚಾರ ನೋಡೋಣ…
4,27,192 ಕೋಟಿ ರೂಪಾಯಿ ಬಂಡವಾಳ ಆಸ್ತಿ ಸೃಸ್ಟಿಗಾಗಿ ಅನುದಾನ ಅಂತ ಅನೌನ್ಸ ಮಾಡಿದ್ದು… ಕೊನೆಗೆ ಕೊಟ್ಟಿದ್ದು 3, 08, 151 ಕೋಟಿ ರೂಪಾಯಿ…
ಮಿಕ್ಕ 1, 91,041 ಕೋಟಿ ರೂಪಾಯಿ ಏಕೆ ಕರ್ಚು ಮಾಡಲಿಲ್ಲ, ಯಾರಿಗೂ ಗೊತ್ತಿಲ್ಲ. ಇನ್ನೂ Capex ಅಂತಾರಲ್ಲ… ಬಂಡವಾಳ ವೆಚ್ಚ… ಅನೌನ್ಸ ಮಾಡಿದ್ದು 11, 21,090 ಕೋಟಿ ರೂಪಾಯಿ, ಕೊನೆಗೆ ಕರ್ಚು ಮಾಡಿದ್ದು 10,95,755 ಕೋಟಿ ರೂಪಾಯಿ. ಮಿಕ್ಕ 25, 335 ಕೋಟಿ ರೂಪಾಯಿ ಏಕೆ ಬಂಡವಾಳ ವೆಚ್ಚ ಮಾಡಲಿಲ್ಲ, ಯಾರಿಗೂ ಗೊತ್ತಿಲ್ಲ. ಕಳೆದ ವರುಶದ ಬಜೆಟ್ ಲೆಕ್ಕಾಚಾರ ನೋಡಿದರೆ ಈ ಬಜೆಟ್ ನಲ್ಲಿ ಯಾವ ರೆಂಜ್ ಬಿಲ್ಡಪ್ಪ ತಗೊಂಡು ಸುಳ್ಳು ಹೇಳುತ್ತಾರೆ ಅನ್ನೋದು ನಮಗೆ ಅರ್ತ ಆಗುತ್ತೆ ಪ್ರೆಂಡ್ಸ್” ಎಂದು ಅವರು ಬರೆದುಕೊಂಡಿದ್ದಾರೆ.

ಆಪ್ತಸಮಾಲೋಚಕ ವಸಂತ್ ನಡಹಳ್ಳಿ ಅವರು ಬಜೆಟ್ ಕುರಿತು ಹೀಗಂದಿದ್ದಾರೆ.. “ಬಜೆಟ್ ಎಂದರೆ ಆಡಳಿತ ಪಕ್ಷಗಳು ಹೊಗಳುವ, ವಿರೋಧ ಪಕ್ಷಗಳು ತೆಗಳುವ ಮತ್ತು ತಜ್ಞರು ಯಾರಿಗೂ ಅರ್ಥವಾಗದಂತೆ ವಿಶ್ಲೇಷಿಸುವ ಒಂದು ವಾರ್ಷಿಕ ಪ್ರಹಸನ.
ಈ ಅಂಕಿಸಂಖ್ಯೆಗಳ (Statistics) ಕುರಿತು ಒಂದು ಹಳೆಯ ತಮಾಷೆ ಇದೆ. There are three levels of lies. One, simple lies, two, dammed lies and three, the highest level is Statistics.!
ಸರ್ಕಾರದ ಅಂಕಿಸಂಖ್ಯೆಗಳಂತೂ ದೊಡ್ಡ ಕಣ್ಣೊರೆಸುವ ತಂತ್ರ. Science without sense ಎನ್ನುವ ಹೆಸರಿನಲ್ಲಿ Statistics ನ ಪೊಳ್ಳುತನದ ಕುರಿತು ಒಂದು ಪುಸ್ತಕವೇ ಇದೆ.
ಯಾವುದೇ ಬಜೆಟ್ನ ನಂತರ ದಿನಬಳಕೆಯ ವಸ್ತುಗಳು ಜನರ ಕೈಗುಟುಕುತ್ತವೆಯೇ? ಗೊತ್ತಿಲ್ಲ. ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆಯೇ? ಗೊತ್ತಿಲ್ಲ. ಶಿಕ್ಷಣ ಆರೋಗ್ಯ ಎಲ್ಲರಿಗೂ ಸಮಾನವಾಗಿ ಸಿಗಬಲ್ಲದೇ? ಗೊತ್ತಿಲ್ಲ. ಸರ್ಕಾರೀ ಕಛೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗುವುದಿರಲಿ, ಹೆಚ್ಚಾಗುವುದಾದರೂ ನಿಲ್ಲುತ್ತದೆಯೇ? ಖಂಡಿತಾ ಇಲ್ಲ!
ಆದರೂ ಎಲ್ಲಾ ಸಂಪ್ರದಾಯಗಳಂತೆ ಬಜೆಟ್ ಪ್ರತಿವರ್ಷವೂ ನಡೆಯಲೇಬೇಕು. “ತಜ್ಞರ” ಹಣೆಪಟ್ಟಿ ಹೊತ್ತುಕೊಂಡವರಿಗೆ ಮಾತ್ರ. ನಾಲ್ಕು ದಿನ ವಿಶ್ಲೇಷಣೆಯ ಮೈತುಂಬಾ ಕೆಲಸ!
ಇದು ಯಾವುದೇ ರಾಜಕೀಯ ಪಕ್ಷವನ್ನು ಉದ್ದೇಶಿಸಿದ್ದಲ್ಲ. ಹಾಗಾಗಿ ಎಲ್ಲಾ ಪಕ್ಷಗಳ ಟ್ರೋಲಿಗರು ಸ್ವಲ್ಪ ದೀರ್ಘವಾಗಿ ಉಸಿರಾಡಿ ತಣ್ಣಗಾಗಿ?” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿ ಎಫ್ಬಿ, ಎಕ್ಸ್, ಇನ್ಸ್ಟಾ ಪೋಸ್ಟ್ಗಳಿಗೆ ಲೆಕ್ಕವಿಲ್ಲ.
ದಿನಸಿ ವಸ್ತುಗಳ ಬೆಲೆ ಏರಿಕೆ, ಇಂಧನ ಮತ್ತು ಗ್ಯಾಸ್ ದರದ ಏರಿಕೆಯೂ ಮುಂದುವರೆದಿದೆ. ಕೆಲವರಂತೂ ಬಜೆಟ್ನಲ್ಲಿ ನಿರುದ್ಯೋಗ, ಕೃಷಿ ಸಂಕಷ್ಟ, ಆರೋಗ್ಯ ಹಾಗೂ ಶಿಕ್ಷಣಕ್ಕೆ ʼಚೊಂಬುʼ ಎಂದೂ ಬರೆದುಬಿಟ್ಟಿದ್ದಾರೆ. ಮಧ್ಯಮ ವರ್ಗ ಮತ್ತು ಬಡವರ ಬದುಕಿನ ಸಂಕಷ್ಟಗಳಿಗೆ ಬಜೆಟ್ ಸ್ಪಂದಿಸಿಲ್ಲ ಎಂಬ ಆರೋಪಗಳು ಹೆಚ್ಚು ಹರಿದಾಡಿವೆ. ಇದೇ ವೇಳೆ, ಸರ್ಕಾರದ ಬೆಂಬಲಿಗರು ಬಜೆಟ್ ಅನ್ನು ʼಭಾರತದ ಭವಿಷ್ಯ ನಿರ್ಮಾಣದ ದಸ್ತಾವೇಜುʼ ಎಂದು ಹೇಳಿಕೊಂಡು ಸಮರ್ಥನೆಗಿಳಿದಿದ್ದಾರೆ. ಹೀಗೆ ಸಮರ್ಥನೆ ಮಾಡಿಕೊಂಡವರನ್ನೂ ನೆಟ್ಟಿಗರು ಟ್ರೋಲಿಸಿದ್ದಾರೆ.
Being_Sanskaari Memes ಹೆಸರಿನ ಎಕ್ಸ್ ಖಾತೆಯ ಪೋಸ್ಟ್ ಹೀಗಿದೆ. ಇದು ತಮಾಷೆಯಾಗಿದ್ದರೂ ಸದ್ಯದ ಪರಿಸ್ಥಿತಿಯ ಗಂಭೀರತೆಯನ್ನು ತೆರೆದಿಟ್ಟಿದೆ.

ಬಜೆಟ್ ಎಂದರೆ ಮುಖ್ಯವಾಗಿ ಎರಡು ವಿಷಯಗಳ ಸುತ್ತ ತಿರುಗುವ ಚಕ್ರ. ಜನಸಾಮಾನ್ಯನ ಬದುಕಿಗೆ ನೇರವಾಗಿ ತಾಕುವ ಬೆಲೆ ಏರಿಕೆ ಮತ್ತು ತೆರಿಗೆ ಎಂಬೆರಡು ಅಂಶಗಳೇ ಬಜೆಟ್ನ ನಿಜವಾದ ಅಳತೆಗೋಲು. ಹಿಂದಿನ ಬಜೆಟ್ ಗಳಲ್ಲಿ ಬೆಲೆ ಏರಿಕೆ ಅಂದರೆ ಹೆಚ್ಚಿನವಾಗಿ ಐಷಾರಾಮಿ ವಸ್ತುಗಳಿಗೆ ಸೀಮಿತವಾಗುತ್ತಿತ್ತು. ಅದರ ಭಾರವನ್ನು ಹೊರುವವರು ಮಧ್ಯಮ ವರ್ಗಕ್ಕಿಂತ ಮೇಲ್ಪಟ್ಟವರಾಗಿದ್ದರಿಂದ, ಸಮಾಜದಲ್ಲಿ ಒಂದು ಸಮಾಧಾನದ ಭಾವ ಇತ್ತು.
ಅದೇ ರೀತಿ, ತೆರಿಗೆ ಪರಿಷ್ಕರಣೆಗಳು ಮೇಲ್ವರ್ಗವನ್ನು ಹೆಚ್ಚು ತಟ್ಟಿದರೆ, ಅದರ ಲಾಭ ಬಡವರು ಮತ್ತು ದುರ್ಬಲ ವರ್ಗಗಳಿಗೆ ತಲುಪುತ್ತಿತ್ತು ಎಂಬ ನಂಬಿಕೆ ಇತ್ತು. ಬಜೆಟ್ ಒಂದು ಮಟ್ಟಿಗೆ ಪುನರ್ವಿತರಣೆಯ ಸಾಧನವಾಗಿತ್ತು. ಆದರೆ ಇಂದಿನ ಸ್ಥಿತಿ ಸಂಪೂರ್ಣ ಬದಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸ್ಪಷ್ಟ ಉತ್ತರಗಳಿಲ್ಲ, ತೆರಿಗೆ ನೀತಿಗಳಲ್ಲೂ ಸ್ಪಷ್ಟತೆಯಿಲ್ಲ. ದೇಶದ ಆರ್ಥಿಕ ದಿಕ್ಕು ನಿರ್ಧರಿಸಬೇಕಾದ ಬಜೆಟ್, ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್, ಟ್ರೋಲ್ಗಳು ಮತ್ತು ವಿಡಂಬನೆಗಳ ಮಟ್ಟಕ್ಕೆ ಇಳಿದಿರುವುದು ದುರಂತ. ಅಂಕಿ-ಅಂಶಗಳ ಭಾಷಣ ಮತ್ತು ಜನರ ಬದುಕಿನ ನಡುವಿನ ಅಂತರ ಹೆಚ್ಚಿದಾಗ, ಬಜೆಟ್ ಒಂದು ದಸ್ತಾವೇಜಾಗಿಯೇ ಉಳಿದು, ಜನರ ಬದುಕಿನ ಜತೆಗೆ ಸಂಬಂಧ ಕಡಿದುಕೊಳ್ಳುತ್ತದೆ.
ಒಟ್ಟಿನಲ್ಲಿ ಈ ಬಾರಿಯ ಬಜೆಟ್ ಎಂದಿನಂತೆ ಬಂದು ಹೋಯಿತಷ್ಟೆ. ಬಜೆಟ್ನ ಹಿಂದಿನ ದಿನವೇ ಅಡುಗೆ ಅನಿಲ ದುಬಾರಿಯಾಗಿದೆ, ಅದು ಭಾಷಣದಲ್ಲಿ ಕಾಣಿಸಲಿಲ್ಲ. ಎಂದಿನಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ, ಅದು ಅಂಕಿ-ಅಂಶಗಳಲ್ಲಾದರೂ ಇಣುಕಿತೇ? ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನರು ಲೆಕ್ಕ ಕೇಳುತ್ತಿದ್ದಾರೆ. ಆದರೆ,
ಸರ್ಕಾರ ಮಾತ್ರ ಲೆಕ್ಕದ ಬುಕ್ಕನ್ನ ಭುಜಕ್ಕೇರಿಸಿ ಬೆನ್ನು ತಿರುಗಿಸಿದೆ. ಈ ಬಜೆಟ್ ಜನರ ಬದುಕಿಗೆ ಪರಿಹಾರ ನೀಡದಿದ್ದರೂ,
ಮೀಮ್ಗಳಿಗೆ, ಟ್ರೋಲ್ಗಳಿಗೆ ಮಾತ್ರ ಭರ್ಜರಿ ಕಂಟೆಂಟ್ ಒದಗಿಸಿದೆ. ಜನರು ಟ್ರೋಲ್ ಮಾಡ್ತಿದ್ದಾರೆ ಅಂದರೆ ಅವರಿಗೆ ಮಾಡಲು ಕೆಲಸ ಇಲ್ಲ, ನಗುತ್ತಿದ್ದಾರೆಂದರೆ ಗಂಭೀರತೆ ಇಲ್ಲ, ಪ್ರಶ್ನೆ ಮಾಡ್ತಿದ್ದಾರೆಂದರೆ ಖಾಲಿ ಬಿದ್ದಿದ್ದಾರೆ ಎಂದು ಕೆಲ ತಜ್ಞರೆನಿಸಿಕೊಂಡವರು ಹೇಳಬಹುದು. ಆದರೆ ಅದರ ಹಿಂದೆ ಕೋಪ, ನಿರಾಸೆ, ಅಸಹಾಯಕತೆ ಇರುವುದಂತೂ ಸತ್ಯ.





