‘ದಿ ಕೇರಳ ಸ್ಟೋರಿ 2 – ಗೋಸ್ ಬಿಯಾಂಡ್’ ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆ ನಡೆಸಿದೆ. ಅರ್ಜಿಗೆ ಸಂಬಂಧಿಸಿದಂತೆ ಸಿನಿಮಾದ ನಿರ್ಮಾಪಕರು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ( ಸಿಬಿಎಫ್ಸಿ) ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಿನಿಮಾ ವಿರುದ್ಧ ಕಣ್ಣೂರು ಜಿಲ್ಲೆಯ ಕಣ್ಣವಂನ ಶ್ರೀದೇವ್ ನಂಬೂದಿರಿ ಎಂಬವರು ಫೆಬ್ರವರಿ 18 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ; ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಿಬಿಎಫ್ಸಿ ಹಾಗೂ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ‘ದಿ ಕೇರಳ ಸ್ಟೋರಿ 2 – ಗೋಸ್ ಬಿಯಾಂಡ್’ ಸಿನಿಮಾಗೆ 1952ರ ಸಿನಿಮಾಟೋಗ್ರಾಫ್ ಕಾಯ್ದೆಯ ಅಡಿಯಲ್ಲಿ ಶಾಸನಬದ್ಧ ಆದೇಶವನ್ನು ಪಾಲಿಸದೆ ಸಿಬಿಎಫ್ಸಿ ಪ್ರಮಾಣೀಕರಣ ನೀಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದೆ.
ಅರ್ಜಿಯ ಪ್ರಕಾರ, ಚಿತ್ರದ ಟೀಸರ್ ಮತ್ತು ಟ್ರೇಲರ್ನಲ್ಲಿ ಬಹು ರಾಜ್ಯಗಳ ಮಹಿಳೆಯರನ್ನು ಒಳಗೊಂಡ ನಿರೂಪಣೆಗಳನ್ನು ಚಿತ್ರಿಸಲಾಗಿದೆ. ಆದರೆ ವಿಷಯವನ್ನು ‘ಕೇರಳ ಕಥೆ’ ಎಂದು ಬ್ರಾಂಡ್ ಮಾಡಲಾಗಿದೆ. ಇದರಿಂದಾಗಿ ಭಯೋತ್ಪಾದನೆ, ಬಲವಂತದ ಮತಾಂತರ ಹಾಗೂ ಜನಸಂಖ್ಯಾ ಪಿತೂರಿಯ ಘಟನೆಗಳನ್ನು ಕೇರಳ ರಾಜ್ಯದೊಂದಿಗೆ ಸಂಯೋಜಿಸಲಾಗಿದೆ. ಇಂತಹ ಚಿತ್ರಣವು ಕೇರಳದ ಜನ ಸಮುದಾಯಗಳಿಗೆ ಕಳಂಕ ತರುವ, ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸುವ, ಕೋಮುದ್ವೇಷವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಾದಿಸಿದ್ದಾರೆ.
“2023ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾದ ಮೊದಲ ಭಾಗವು ಸುಳ್ಳು ಹೇಳಿಕೆಗಳಿಂದಾಗಿ ಗಂಭೀರ ವಿವಾದವನ್ನು ಸೃಷ್ಟಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ನ ವಿಚಾರಣೆಯ ಸಮಯದಲ್ಲಿ ಗಮನಿಸಲಾಗಿದೆ. ಈ ಹಿನ್ನೆಲೆಯ ಹೊರತಾಗಿಯೂ, 1952ರ ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 5B ಅಡಿಯಲ್ಲಿ ಕಡ್ಡಾಯಗೊಳಿಸಿದಂತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಹಾಗೂ ನೈತಿಕತೆಯ ಮೇಲೆ ಸಿನಿಮಾದ ಪ್ರಭಾವವನ್ನು ಸಮರ್ಪಕವಾಗಿ ಪರಿಶೀಲಿಸದೆಯೇ CBFC ಪ್ರಮಾಣೀಕರಣ ನೀಡಿದೆ” ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ದಿ ಕೇರಳ ಸ್ಟೋರಿ-2: ಕಾಮನ್ ಸೆನ್ಸ್ ಇಲ್ಲದ ಟ್ರೈಲರ್?
“ಟೀಸರ್ ಮತ್ತು ಟ್ರೇಲರ್ನಲ್ಲಿರುವ ಮುಕ್ತಾಯದ ಹೇಳಿಕೆಗಳು ಪ್ರತೀಕಾರಕ್ಕೆ ಕರೆ ನೀಡುವಂತಿವೆ. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ನಿಜವಾದ ಮತ್ತು ಸನ್ನಿಹಿತ ಆತಂಕವನ್ನು ಸೃಷ್ಟಿಸುತ್ತದೆ. ಆದ್ದರಿಂದ, ಸಂಭಾವ್ಯ ಹಾನಿಯನ್ನು ತಡೆಗಟ್ಟಲು ಮತ್ತು ಸಂವಿಧಾನದ 14, 19(2) ಮತ್ತು 21ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಿನಿಮಾದ ಪ್ರಮಾಣೀಕರಣ ನೀಡುವಲ್ಲಿ ಕಾನೂನಿನ ಪ್ರಕಾರ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ” ಎಂದು ಅರ್ಜಿದಾರರು ವಿವರಿಸಿದ್ದಾಎರ.
ಸಿಬಿಎಫ್ಸಿ ನೀಡಿದ ಪ್ರಮಾಣೀಕರಣವನ್ನು ರದ್ದುಗೊಳಿಸುವ ಮತ್ತು ಪ್ರಮಾಣೀಕರಣವನ್ನು ಮರುಪರಿಶೀಲಿಸುವಂತೆ ನಿರ್ದೇಶಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಅರ್ಜಿಯನ್ನು ಇತ್ಯರ್ಥವಾಗುವವರೆಗೆ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸುವಂತೆ ಮತ್ತು ಪ್ರಾದೇಶಿಕ ನಿಂದನೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದನ್ನು ತಡೆಯಲು ಶೀರ್ಷಿಕೆಯ ಮರುಪರಿಶೀಲನೆ ಮತ್ತು ಸಾಕಷ್ಟು ಹಕ್ಕು ನಿರಾಕರಣೆಗಳನ್ನು ಸೇರಿಸುವುದು ಸೇರಿದಂತೆ ಸೂಕ್ತ ಮಾರ್ಪಾಡುಗಳಿಗೆ ನಿರ್ದೇಶಿಸುವಂತೆಯೂ ಅವರು ಕೋರಿದ್ದಾರೆ.
ಸಿನಿಮಾ ಫೆಬ್ರವರಿ 27ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.




