ತಮ್ಮ ತನಿಖೆಗೆ ಅಡ್ಡಿಪಡಿಸಿ, ಕಡತಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋಲ್ಕತ್ತಾ ಹೈಕೋರ್ಟ್ ಮುಂದೂಡಿದೆ. ನ್ಯಾಯಾಲಯದ ಆವರಣದಲ್ಲಿ ಬೃಹತ್ ಜನಸಂದಣಿಯಿದ್ದು, ಗದ್ದಲ ಉಂಟಾಗಿದೆ ಎಂದು ಹೇಳಿದ್ದು, ವಿಚಾರಣೆಯನ್ನು ಮುಂದೂಡಿದೆ. ಅರ್ಜಿಯನ್ನು ಜನವರಿ 14ರಂದು ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯತೆ ಇದೆ.
ನ್ಯಾಯಾಲಯದ ಆವರಣದಲ್ಲಿ ಉಂಟಾಗಿದ್ದ ಜನಸಂದಣಿ ಮತ್ತು ಗದ್ದಲ ಪರಿಸ್ಥಿತಿ ಕುರಿತು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆವರಣವು ಕಕ್ಕಿರಿದಿದ್ದು, ಏನೂ ಕೇಳಿಸುತ್ತಿಲ್ಲವೆಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಮಮತಾ ಬ್ಯಾನರ್ಜಿ ಅವರು ಟಿಎಂಸಿಗೆ ರಾಜಕೀಯ ಸಲಹೆಗಳನ್ನು ನೀಡುವ ಐ-ಪ್ಯಾಕ್ ಸಂಸ್ಥೆಯ ಕಚೇರಿ ಮತ್ತು ಅದರ ಸಂಸ್ಥಾಪಕರ ಮನೆ ಮೇಲೆ ಇಡಿ ದಾಳಿ ನಡೆಸಿ, ಶೋಧ ಆರಂಭಿಸಿತ್ತು. ಈ ವೇಳೆ, ಸ್ಥಳಕ್ಕೆ ಧಾವಿಸಿದ್ದ ಮಮತಾ ಬ್ಯಾನರ್ಜಿ, ಇಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟಿಎಂಸಿಯ ಚುನಾವಣಾ ಕಾರ್ಯತಂತ್ರ ಮತ್ತು ಪಕ್ಷದ ಆತಂರಿಕ ದಾಖಲೆಗಳನ್ನು ಬಿಜೆಪಿ ಸಂಗ್ರಹಿಸಲು ಇಡಿಯನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾಗಿದ್ದ ಕೆಲವು ದಾಖಲೆಗಳನ್ನು ಮಮತಾ ಹಿಂಪಡೆದುಕೊಂಡಿದ್ದರು.
ಮಮತಾ ವಿರುದ್ಧ 28 ಪುಟಗಳ ದೂರು ಅರ್ಜಿಯನ್ನು ಇಡಿ ಹೈಕೋರ್ಟ್ಗೆ ಸಲ್ಲಿಸಿದೆ. ಅದರಲ್ಲಿ, “ಪಶ್ಚಿಮ ಬಂಗಾಳ ಪೊಲೀಸರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಶಾಮೀಲಾಗಿ ‘ಕಾನೂನಿನ ನಿರ್ಲಕ್ಷ್ಯ’ದೊಂದಿಗೆ ನಮ್ಮ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಮಮತಾ ವಿರುದ್ಧ ಎಫ್ಐಆರ್ ದಾಖಲಿಸಬೇಕು” ಎಂದು ಮನವಿ ಮಾಡಿತ್ತು.




