ಯಾವುದೇ ನಿರ್ದೇಶನ/ಆದೇಶವಿಲ್ಲದೆ ಅಂತರ್ಧರ್ಮೀಯ ಜೋಡಿಯನ್ನು ಕಾನೂನುಬಾಹಿರವಾಗಿ ಬಂಧಿಸಿದ್ದ ಉತ್ತರ ಪ್ರದೇಶ ಪೊಲೀಸರನ್ನು ಅಲಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಅಲಿಘರ್ನಲ್ಲಿ ಶೇನ್ ಅಲಿ ಮತ್ತು ರಶ್ಮಿ ಎಂಬವರನ್ನು ಅಕ್ಟೋಬರ್ 15ರಂದು ಅಕ್ರಾಬಾದ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಯುವತಿಯ ತಂದೆ ನೀಡಿದ ದೂರಿದ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ತಮ್ಮ ಬಂಧನವನ್ನು ಪ್ರಶ್ನಿಸಿ ಜೋಡಿಗಳು ನ್ಯಾಯಾಲಯದ ಮೊರೆಹೋಗಿದ್ದರು. ಶನಿವಾರದ ರಜಾದಿನದಂದು ವಿಶೇಷ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಲೀಲ್ ಕುಮಾರ್ ರೈ ಮತ್ತು ದಿವೇಶ್ ಚಂದ್ರ ಸಮಂತ್ ಅವರಿದ್ದ ಪೀಠವು, ‘ಜೋಡಿಗಳ ಬಂಧನವು ಕಾನೂನುಬಾಹಿರ’ ಎಂದು ಬಣ್ಣಿಸಿದೆ.
“ಯುವತಿಯು ವಯಸ್ಕಳಾಗಿದ್ದು (ಮೇಜರ್), ಆಕೆ ತನ್ನ ಸಂಗಾತಿಯೊಂದಿಗೆ ತಾನು ಬಯಸಿದ ಸ್ಥಳಕ್ಕೆ ಹೋಗಲು ಸ್ವತಂತ್ರಳು. ಅಲ್ಲದೆ, ಸಕ್ಷಮ ಪ್ರಾಧಿಕಾರದ ನಿರ್ದೇಶನವಿಲ್ಲದೆ ಆಕೆಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಕೆಯ ಬಂಧನವು ಭಾರತೀಯ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ.
“ಉತ್ತರ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಇದೆ ಎಂಬ ಕಾರಣಕ್ಕೆ ಯುವಕನನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಬೇಕು ಎಂಬ ವಾದವು ಸ್ವೀಕಾರಾರ್ಹವಲ್ಲ. ಆತನನ್ನು ಬಿಡುಗಡೆ ಮಾಡಬೇಕು. ಯುವತಿಯನ್ನು ‘ಒನ್ ಸ್ಟಾಪ್ ಸೆಂಟರ್’ನಲ್ಲಿ ಸುರಕ್ಷಿತವಾಗಿ ಇರಿಸಬೇಕು” ಎಂದು ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.
ಈ ಲೇಖನ ಓದಿದ್ದೀರಾ?: ಗವಾಯಿ ಬೌದ್ಧತತ್ವವೂ ಬಿಜೆಪಿಗರ ಮನುವಾದವೂ
“ಒಬ್ಬ ವ್ಯಕ್ತಿಯನ್ನು ಪೊಲೀಸರು ಅಥವಾ ಇತರ ರಾಜ್ಯ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಮಾತ್ರವೇ ಬಂಧಿಸಬಹುದು. ಕಾನೂನಿನ ಅಧಿಕಾರವಿಲ್ಲದೆ ಸಾಮಾಜಿಕ ಒತ್ತಡದ ಕಾರಣಕ್ಕಾಗಿ ಬಂಧಿಸುವುದು ಕಾನೂನುಬಾಹಿರ. ಕಾನೂನಿನಿಂದ ನಿಯಂತ್ರಿಸಲ್ಪಡುವ ಪ್ರಜಾಪ್ರಭುತ್ವ ದೇಶದಲ್ಲಿ, ರಾಜ್ಯ ಸರ್ಕಾರ ಮತ್ತು ಅದರ ಕಾನೂನು ಜಾರಿ ಯಂತ್ರವು ತಮ್ಮ ಅಧಿಕಾರವನ್ನು ನಾಗರಿಕರ ಸ್ವಾತಂತ್ರ್ಯವನ್ನು ರಕ್ಷಿಸಲು ಬಳಸಬೇಕೇ ಹೊರತು, ದಂಡಿಸಲು ಅಥವಾ ಸಾಮಾಜಿಕ ಒತ್ತಡದಿಂದ ಸಾಮಾನ್ಯರಿಗೆ ಕಿರುಕುಳ ನೀಡಬಾರದು. ಯುವಕ ಮತ್ತು ಯುವತಿಯ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ವಿಫಲರಾದ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮಕ್ಕೆ ಕೈಗೊಳ್ಳಬೇಕು” ಎಂದು ನ್ಯಾಯಾಲಯ ಸೂಚಿಸಿದೆ.
ಅಂತರ್ಧರ್ಮೀಯ ಜೋಡಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯಾಗ್ರಾಜ್ ಪೊಲೀಸ್ ಆಯುಕ್ತರು, ಅಲಿಗಢ ಎಸ್ಎಸ್ಪಿ ಹಾಗೂ ಬರೇಲಿ ಎಸ್ಎಸ್ಪಿ ಕ್ರಮ ಕೈಗೊಳ್ಳಬೇಕು. ಜೋಡಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ವಿಚಾರಣೆಯನ್ನು ನವೆಂಬರ್ 28ಕ್ಕೆ ನಿಗದಿ ಮಾಡಿದ್ದು, ಅಂದು ಅಲಿಗಢ ಎಸ್ಎಸ್ಪಿ ಅವರು ತನಿಖಾ ವರದಿಯೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಸೂಚಿಸಿದೆ.




