ಪಹಲ್ಗಾಮ್ ದಾಳಿಯ ವಿರುದ್ದದ ಪ್ರತಿಕ್ರಿಯೆಯಾಗಿ ದೇವಾಲಯದಲ್ಲಿ ಕೆಲಸ ಮಾಡುವ ಮುಸ್ಲಿಮರನ್ನು ಹೊರ ಹಾಕುವಂತೆ (ಬಹಿಷ್ಕಾರ) ಹಿಂದುತ್ವವಾದಿ ಗುಂಪುಗಳು ಉತ್ತರ ಪ್ರದೇಶದ ವೃಂದಾವನದಲ್ಲಿರುವ ಪ್ರಸಿದ್ಧ ಬಂಕೆ ಬಿಹಾರಿ (ರಾಧಾ-ಕೃಷ್ಣ) ದೇವಾಲಯದ ಮೇಲೆ ಒತ್ತಡ ಹಾಕುತ್ತಿವೆ. ಆದರೆ, ಹಿಂದುತ್ವವಾದಿಗಳ ಒತ್ತಡಕ್ಕೆ ಮಣಿಯದ ದೇವಾಲಯವು ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದಿದೆ.
ಪಹಲ್ಗಾಮ್ ದಾಳಿಯ ಬಳಿಕ, ದೇಶದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಮತ್ತು ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಇದರ ಭಾಗವೆಂಬಂತೆ, ದೇವಾಲಯಕ್ಕೆ ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಎಂಬ ಸಂಘಟನೆಯ ಅಧ್ಯಕ್ಷ ದಿನೇಶ್ ಶರ್ಮಾ ಪತ್ರ ಬರೆದಿದ್ದರು. ಆದರೆ, ಅವರ ಪತ್ರವನ್ನು ದೇವಾಲಯದ ಆಡಳಿತ ಮಂಡಳಿ ತಿರಸ್ಕರಿಸಿದೆ.
ಬಂಕೆ ಬಿಹಾರಿ ದೇವಾಲಯದ ಅರ್ಚಕ, ಆಡಳಿತ ಸಮಿತಿಯ ಸದಸ್ಯ ಜ್ಞಾನೇಂದ್ರ ಕಿಶೋರ್ ಗೋಸ್ವಾಮಿ ಅವರು ಇಂತಹ ಬಹಿಷ್ಕಾರದ ಕ್ರಮಗಳು ಉಪಯೋಗಕ್ಕೆ ಬಾರದ ನಡೆಗಳು. ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಮುಸ್ಲಿಮರು ದೇವಾಲಯದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಅವರನ್ನು ದೇವಲಾಯದಿಂದ ಹೊರಗಿಡುವ ಮಾತೇ ಇಲ್ಲ” ಎಂದು ಹೇಳಿದ್ದಾರೆ.
“ಬಹಿಷ್ಕಾರದ ಕ್ರಮವು ಪ್ರಾಯೋಗಿಕವಲ್ಲ. ಮುಸ್ಲಿಮರು, ವಿಶೇಷವಾಗಿ ಮುಸ್ಲಿಂ ಕುಶಲಕರ್ಮಿಗಳು ಮತ್ತು ನೇಕಾರರು ದೇವಾಲಯಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರು ಹತ್ತಾರು ವರ್ಷಗಳಿಂದ ಬಂಕೆ ಬಿಹಾರಿ ವಿಗ್ರಹಕ್ಕೆ ಉಡುಪುಗಳನ್ನು ನೇಯ್ಗೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ ಹಲವರು ಬಂಕೆ ಬಿಹಾರಿಯ ಮೇಲೆ ಬಲವಾದ ನಂಬಿಕೆ ಹೊಂದಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನೂ ಸಲ್ಲಿಸುತ್ತಾರೆ” ಎಂದು ಗೋಸ್ವಾಮಿ ವಿವರಿಸಿರುವುದಾಗಿ ‘TOI’ ವರದಿ ಮಾಡಿದೆ.
“ದೇವಾಲಯದಲ್ಲಿ ದೇವತೆಗಳಿಗೆ ಕಿರೀಟಗಳು, ಬಟ್ಟೆಗಳು ಮತ್ತು ಹೂಮಾಲೆಗಳನ್ನು ಮುಸ್ಲಿಮರು ತಯಾರಿಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯದ ಸಂಗೀತಗಾರರು ಸಾಂಪ್ರದಾಯಿಕ ವಾದ್ಯವಾದ ‘ನಫಿರಿ’ಯನ್ನು ನುಡಿಸುತ್ತಾರೆ. ದೇವಾಲಯದೊಂದಿಗೆ ಮುಸ್ಲಿಮರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರನ್ನು ದೇವಾಲಯದಿಂದ ಹೊರಗಿಡಲಾಗದು” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಹತ್ಯೆಗೆ ಮುನ್ನ ಹೆಸರು ಕೇಳಿದ್ದೇಕೆ? ಪ್ರವಾಸಿಗರನ್ನೇ ಕೊಂದ ಮರ್ಮವೇನು
“ಪಹಲ್ಗಾಮ್ ದಾಳಿ ನಡೆಸಿದವರು ಮತ್ತು ಕೃತ್ಯದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರನ್ನು ಶಿಕ್ಷಿಸಬೇಕು ಎಂದು ದೇವಾಲಯವು ಸರ್ಕಾರವನ್ನು ಒತ್ತಾಯಿಸಿದೆ. ಆದರೆ, ವೃಂದಾವನದಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಶಾಂತಿ ಮತ್ತು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ” ಎಂದು ಅರ್ಚಕರು ಹೇಳಿದ್ದಾರೆ.
ಈ ಹಿಂದೆ, ಮಾರ್ಚ್ನಲ್ಲಿಯೂ ದೇವಾಲಯಕ್ಕೆ ಮುಸ್ಲಿಂ ನೇಕಾರರು ತಯಾರಿಸಿ ಕೊಡುವ ಬಟ್ಟೆಗಳನ್ನು ಖರೀದಿಸದಂತೆ ಹಿಂದುತ್ವವಾದಿಗಳು ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪವನ್ನೂ ದೇವಾಲಯದ ಆಡಳಿತ ತಿರಸ್ಕರಿಸಿತ್ತು.
ಕಳೆದ ವಾರ, ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ಕೆಲವು ಭಯೋತ್ಪಾದಕರು ಸಂತ್ರಸ್ತರನ್ನು ಕೊಲ್ಲುವುದಕ್ಕೂ ಮೊದಲು, ‘ನೀವು ಹಿಂದುಗಳೇ‘ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯು ಕೋಮು ಧ್ರುವೀಕರಣ ಮತ್ತು ಕೋಮು ಉದ್ವಿಗ್ನತೆಗೆ ಕಾರಣವಾಗಿದೆ.




