ಹೆಣ್ಣುಮಕ್ಕಳ ಆಯ್ಕೆ ಮತ್ತು ಪಿತೃಪ್ರಭುತ್ವದ ದಬ್ಬಾಳಿಕೆಯ ಕುರಿತಾದ ಚರ್ಚೆಯನ್ನು ಇಂತಹ ಘಟನೆಗಳು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿವೆ. ಕುಟುಂಬವು ತಾವು ಆಯ್ಕೆ ಮಾಡಿದವರನ್ನೇ ವಿವಾಹವಾಗಬೇಕೆಂದು ಹೆಣ್ಣುಮಕ್ಕಳ ಮೇಲೆ ಏಕಪಕ್ಷೀಯವಾಗಿ ಒತ್ತಡ ಹೇರುವುದು, ಹೆಣ್ಣುಮಕ್ಕಳ ಆಯ್ಕೆ ಮತ್ತು ಅಭಿಪ್ರಾಯಕ್ಕೆ ಅವಕಾಶ ಕೊಡದೇ ಇರುವುದರಿಂದ ಇಂತಹ ಕೃತ್ಯಗಳು ಹೆಚ್ಚುತ್ತಿವೆ ಎಂಬುದೂ ಸ್ಪಷ್ಟ. ಆದ್ದರಿಂದ, ಇಂತಹ ಕೊಲೆಗಳಲ್ಲಿ ಕೇವಲ ಹೆಣ್ಣುಮಕ್ಕಳು ಮಾತ್ರವೇ ಆರೋಪಿಗಳು/ಅಪರಾಧಿಗಳಲ್ಲ. ಪಿತೃಪ್ರಭುತ್ವ ವ್ಯವಸ್ಥೆಯೂ ಅಪರಾಧಿ ಎಂದೇ ಹೇಳಲಾಗುತ್ತದೆ.
ಹನಿಮೂನ್ಗೆಂದು ತೆರಳಿದ್ದ ಸಮಯದಲ್ಲಿ ಯುವತಿಯೊಬ್ಬರು ತನ್ನ ಪತಿಯನ್ನು ಕೊಂದು ‘ಹಿಂಡ್ ಅಂಡ್ ರನ್’ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ರಾಜಸ್ಥಾನ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣವು ಕಳೆದ ವರ್ಷ ಮೇಘಾಲಯದಲ್ಲಿ ಸೋನಮ್ ರಘುವಂಶಿ ಎಂಬವರು ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ನಲ್ಲಿ ಕೊಂದಿದ್ದ ಮಾದರಿಯಲ್ಲೇ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ರಾಜಸ್ಥಾನದ ಗಂಗಾನಗರ ಪ್ರದೇಶದ ಆಶಿಶ್ ಮತ್ತು ಅಂಜು ಅವರು ವಿವಾಹವಾಗಿದ್ದರು. ಜನವರಿ 30ರಂದು ದಂಪತಿಗಳು ಹನಿಮೂನ್ಗಾಗಿ ತೆರಳಿದ್ದರು. ಈ ವೇಳೆ, ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು, ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದ ಸ್ಥಿತಿಯಲ್ಲಿ ಮತ್ತು ಅಂಜು ಅವರು ಚಿನ್ನಾಭರಣಗಳನ್ನು ಕಳೆದುಕೊಂಡು ಪ್ರಜ್ಞಾಹೀನಳಾಗಿ ಬಿದ್ದಿದ್ದರು. ಘಟನೆಯನ್ನು ‘ಹಿಟ್ ಅಂಡ್ ರನ್’ ಪ್ರಕರಣವೆಂದು ಆರಂಭದಲ್ಲಿ ಭಾವಿಸಲಾಗಿತ್ತು.
ಆದಾಗ್ಯೂ, ಪ್ರಕರಣ ದಾಖಲಿಸಿಕೊಂಡ ಗಂಗಾನಗರ ಪೊಲೀಸರು, ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ್ದು, ಅದು ಅಪಘಾತವಲ್ಲ, ಕೊಲೆ ಎಂದು ಪತ್ತೆಹಚ್ಚಿಸಿದ್ದಾರೆ. ಅಂಜು ಅವರು ತನ್ನ ಪ್ರೇಮಿ ಸಂಜು ಮತ್ತು ಇತರ ಇಬ್ಬರೊಂದಿಗೆ ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಅಂಜು ಮತ್ತು ಆಶಿಶ್ ಅವರು ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ, ಈ ವಿವಾಹದಿಂದ ಅಂಜು ಅತೃಪ್ತರಾಗಿದ್ದರು. ಅವರು ತನ್ನ ಮನೆಯ ಸಮೀಪವೇ ವಾಸವಾಗಿದ್ದ ಸಂಜು ಎಂಬಾತನನ್ನು ಪ್ರೀತಿಸುತ್ತಿದ್ದರು. ಆದ್ದರಿಂದ, ಆಕೆ ಆಶಿಶ್ ಮನೆ ತೊರೆದು ತನ್ನ ಊರಿಗೆ ವಾಪಸ್ ಹೋಗಿದ್ದರು. ಆ ವೇಳೆ, ಅಂಜು ಮತ್ತು ಸಂಜು ಜೊತೆಗೂಡಿ, ಆಶಿಶ್ ಕೊಲೆಗೆ ಯೋಜಿಸಿದ್ದರು ಎಂದು ಹೇಳಲಾಗಿದೆ.
ಯೋಜನೆಯಂತೆ ಆಶಿಶ್ ಮನೆಗೆ ಮರಳಿದ ಅಂಜು, ತನ್ನ ಪತಿಯೊಂದಿಗೆ ಹನಿಮೂನ್ ಪ್ರವಾಸಕ್ಕೆ ತೆರಳಿದ್ದರು. ರಾತ್ರಿ, ಊಟದ ಬಳಿಕ ವಾಕಿಂಗ್ಗೆಂದು ಆಶಿಶ್ನನ್ನು ಕರೆದೊಯ್ದಿದ್ದಾರೆ. ಈ ವೇಳೆ, ಸಂಜು ಮತ್ತು ಆತನ ಸಹಚರರಾದ ರಾಕಿ ಮತ್ತು ಸಿದ್ಧಾರ್ಥ್ ಪೊದೆಯಲ್ಲಿ ಅಡಗಿ ಕುಳಿತ್ತಿದ್ದರು. ಆಶಿಶ್ ಬರುತ್ತಿದ್ದಂತೆಯೇ ಆತನ ಮೇಲೆ ಮೂವರು ತೀವ್ರವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂಡಿದ್ದಾರೆ. ಬಳಿಕ, ರಸ್ತೆ ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.

ಪ್ರಕರಣದ ಕುರಿತು ವಿವರಿಸಿರುವ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್, “ಜನವರಿ 30ರ ರಾತ್ರಿ ಸುಮಾರು 9 ಗಂಟೆಗೆ ಅಪಘಾತ ಘಟನೆಯ ಕುರಿತು ಮಾಹಿತಿ ದೊರೆಯಿತು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಆಶಿಶ್ ಮತ್ತು ಅಂಜು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಶಿಶ್ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು” ಎಂದು ತಿಳಿಸಿದ್ದಾರೆ.
“ನಾವು ಘಟನಾ ಸ್ಥಳವನ್ನು ಪರಿಶೀಲಿಸಿದ್ದೇವೆ. ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ತಂಡವನ್ನು ಸಹ ಒಳಗೊಂಡಿದ್ದೇವು. ಆಶಿಶ್ ದೇಹದ ಮೇಲಿನ ಗಾಯಗಳು ಮತ್ತು ತನಿಖೆಯು ಘಟನೆಯು ಅಪಘಾತವಲ್ಲ, ಕೊಲೆ ಎಂಬುದು ಸ್ಪಷ್ಟವಾಯಿತು. ತನಿಖೆ ವೇಳೆ, ಅಂಜು ಮತ್ತು ಆಕೆಯ ಸ್ನೇಹಿತರು ಆಶಿಶ್ನನ್ನು ಕೊಂದಿದ್ದಾರೆ. ಅಪಘಾತವೆಂದು ಬಿಂಬಿಸಲು ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗಳಿಗೆ ಕೊಟ್ಟು, ತನ್ನ ಮೇಲೂ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆಯೆಂದು ಬಿಂಬಿಸಲು ಪ್ರಜ್ಞಾಹೀನಳಂತೆ ನಟಿಸಿದ್ದರು” ಎಂದು ವಿವರಿಸಿದ್ದಾರೆ.
ಆದಾಗ್ಯೂ, ಈ ಕೊಲೆಯು ಮೇಘಾಲಯದಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಹುಟ್ಟುಹಾಕಿದ್ದ ಹೆಣ್ಣುಮಕ್ಕಳ ಆಯ್ಕೆ ಮತ್ತು ಪಿತೃಪ್ರಭುತ್ವದ ದಬ್ಬಾಳಿಕೆಯ ಕುರಿತಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕುಟುಂಬವು ತಾವು ಆಯ್ಕೆ ಮಾಡಿದವರನ್ನೇ ವಿವಾಹವಾಗಬೇಕೆಂದು ಹೆಣ್ಣುಮಕ್ಕಳ ಮೇಲೆ ಏಕಪಕ್ಷೀಯವಾಗಿ ಒತ್ತಡ ಹೇರುವುದು, ಹೆಣ್ಣುಮಕ್ಕಳ ಆಯ್ಕೆ ಮತ್ತು ಅಭಿಪ್ರಾಯಕ್ಕೆ ಅವಕಾಶ ಕೊಡದೇ ಇರುವುದರಿಂದ ಇಂತಹ ಕೃತ್ಯಗಳು ಹೆಚ್ಚುತ್ತಿವೆ ಎಂಬುದೂ ಸ್ಪಷ್ಟ. ಆದ್ದರಿಂದ, ಇಂತಹ ಕೊಲೆಗಳಲ್ಲಿ ಕೇವಲ ಹೆಣ್ಣುಮಕ್ಕಳು ಮಾತ್ರವೇ ಆರೋಪಿಗಳು/ಅಪರಾಧಿಗಳಲ್ಲ. ಪಿತೃಪ್ರಭುತ್ವ ವ್ಯವಸ್ಥೆಯೂ ಅಪರಾಧಿ ಎಂದೇ ಹೇಳಲಾಗುತ್ತದೆ.





