ಎರಡು ವಿಭಿನ್ನ ಕೋಮುವಿನ ಯುವಕ-ಯುವತಿ ಪರಸ್ಪರ ಪ್ರೀತಿಸಿದ್ದಕ್ಕಾಗಿ, ಅವರನ್ನು ಯುವತಿಯ ಕುಟುಂಬಸ್ಥರು ಬರ್ಬರವಾಗಿ ಕೊಲೆಗೈದಿರುವ ಮರ್ಯಾದೆಗೇಡು ಹತ್ಯೆ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಘಟನೆ ನಡೆದಿದ್ದು, ಯುವತಿಯ ಸಹೋದರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಅರ್ಮಾನ್ (24) ಮತ್ತು ಕಾಜಲ್ ಸೈನಿ (18) ಇಬ್ಬರೂ ಮೊರಾದಾಬಾದ್ನ ಉಮ್ರಿ ಸಬ್ಜಿಪುರ ಗ್ರಾಮದ ನಿವಾಸಿಗಳು. ಇವರಿಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಇಬ್ಬರೂ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಇದೀಗ, ಅವರ ಮೃತದೇಹಗಳು ಬುಧವಾರ ಸಂಜೆ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದ ಬಳಿ ಪತ್ತೆಯಾಗಿವೆ ಎಂದು ಪಕ್ಬಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮುಂದುವರೆದ ತಮಿಳುನಾಡು ರಾಜ್ಯಪಾಲರ ಮೊಂಡಾಟ: ಸುಪ್ರೀಂ ತಪರಾಕಿಗೂ ಬೆಲೆ ಇಲ್ಲವೇ?
ಭಾನುವಾರ, ಕಾಜಲ್ ಅವರನ್ನು ಭೇಟಿ ಮಾಡಲು ಅರ್ಮಾನ್ ತೆರಳಿದ್ದರು. ಅವರನ್ನು ಕಾಜಲ್ ಅವರ ಸಂಬಂಧಿಕರು ಗಮನಿಸಿದ್ದಾರೆ. ಕೋಪಗೊಂಡ ಕಾಜಲ್ ಕುಟುಂಬಸ್ಥರು ಪ್ರೇಮಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಬಳಿಕ, ಗ್ರಾಮದ ಸಮೀಪವಿರುವ ಗಗನ್ ನದಿಯ ಬಳಿ ಮೃತದೇಹಗಳನ್ನು ಹೂತುಹಾಕಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಭಾನುವಾರದಿಂದ ಅರ್ಮಾನ್ ಕಾಣೆಯಾಗಿದ್ದರಿಂದ, ಆತನ ಕುಟುಂಬಸ್ಥರು ತಮ್ಮ ಮಗ ನಾಪತ್ತೆಯಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದರು. ವಿಚಾರಣೆಯ ವೇಳೆ, ಯುವತಿಯ ಸಹೋದರರು ಅರ್ಮಾನ್ ಮತ್ತು ಕಾಜಲ್ರನ್ನು ಕೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ನದಿ ಮತ್ತು ದೇವಸ್ಥಾನದ ಬಳಿ ಶೋಧ ನಡೆಸಲಾಗಿದ್ದು, ಇಬ್ಬರ ಮೃತದೇಹಗಳೂ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಬಳಿಕ, ಯುವತಿಯ ಸಹೋದರರಾದ ರಿಂಕು ಸೈನಿ ಮತ್ತು ಸತೀಶ್ ಸೈನಿ ಅವರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




