ಪ್ರಬಲ ಜಾತಿಯ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕಾಗಿ ದಲಿತ ಯುವಕ ಕವಿನ್ ಸೆಲ್ವಗಣೇಶ್ (೨೩) ಎಂಬವರನ್ನು ಹತ್ಯೆಗೈದಿದ್ದ ‘ಮರ್ಯಾದೆಗೇಡು ಹತ್ಯೆ’ ಪ್ರಕರಣದಲ್ಲಿ ಪ್ರಮುಖ ಆರೋಪಿ ಸುರ್ಜಿತ್ ಹಾಗೂ ಆತನ ತಂದೆ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಸವರಣ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ದಲಿತ ಯುವಕ ಕವಿನ್ ಸೆಲ್ವಗಣೇಶ್ ಮತ್ತು ಆರೋಪಿ ಪಿಎಸ್ಐ ಮಗಳು ಸುಭಾಷಿಣಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಯನ್ನು ಸುಭಾಷಿಣಿ ಸಹೋದರ, ಪ್ರಮುಖ ಆರೋಪಿ ಸುರ್ಜಿತ್ ವಿರೋಧಿಸಿದ್ದರು ಎಂದು ವರದಿಯಾಗಿದೆ.
ಮೇ 30ರಂದು ಕವಿನ್ ಅವರನ್ನು ಸುಭಾಷಿಣಿ ಕೆಲಸ ಮಾಡುತ್ತಿದ್ದ ಸಿಧಾ ಕೇಂದ್ರದ ಬಳಿ ಸುರ್ಜಿತ್ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ಇದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ಇದಾದ ಕೆಲವೇ ಸಮಯದಲ್ಲಿ, ತೀವ್ರ ಗಾಯಗಳಾಗಿದ್ದ ಕವಿನ್ ಮೃತದೇಹವು ಪತ್ತೆಯಾಗಿತ್ತು. ಸುರ್ಜಿತ್ನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಕವಿನ್ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ‘ಮರ್ಯಾದೆಗೇಡು ಹತ್ಯೆ’ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಕೊಲೆ, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿ ಸುರ್ಜಿತ್ನನ್ನು ಬಂಧಿಸಿದ್ದರು. ಆದರೆ, ಕೃತ್ಯದಲ್ಲಿ ಸಬ್ಇನ್ಸ್ಪೆಕ್ಟರ್ ಸರವಣನ್ ಕೂಡ ಭಾಗಿಯಾಗಿದ್ದಾರೆ. ಅವರನ್ನೂ ಬಂಧಿಸಬೇಕೆಂದು ಮೃತ ಕವಿನ್ ಕುಟುಂಬ ಒತ್ತಾಯಿಸಿತ್ತು. ಕವಿನ್ ಮೃತದೇಹವನ್ನೂ ಪಡೆಯದೆ ಪ್ರತಿಭಟನೆ ನಡೆಸಿತ್ತು.
ಐದು ದಿನಗಳ ನಿರಂತರ ಪ್ರತಿಭಟನೆಯ ಬಳಿಕ, ಪಿಎಸ್ಐ ಸರವಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಂಧನ ಬಳಿಕ, ನ್ಯಾಯ ದೊರೆಯುವ ಭರವಸೆ ಮೇಲೆ ಕುಟುಂಬವು ಕವಿನ್ ಮೃತದೇಹವನ್ನು ಪಡೆದುಕೊಂಡಿದ್ದು, ಅಂತ್ಯಕ್ರಿಯೆ ನೆರವೇರಿಸಿದೆ.
ಈ ಲೇಖನ ಓದಿದ್ದೀರಾ?: ಮಹಿಳಾ ಉದ್ಯೋಗ ಹೆಚ್ಚಿಸಿದ ‘ಶಕ್ತಿ ಯೋಜನೆ’; ಟೀಕಾಕಾರರಿಗೆ ಸಶಕ್ತ ಉತ್ತರ
“ನಾವು ನಿಜವಾಗಿಯೂ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ, ನಮ್ಮ ಪ್ರೀತಿಯ ಬಗ್ಗೆ ತಕ್ಷಣವೇ ನಮ್ಮ ಪೋಷಕರಿಗೆ ತಿಳಿಸಬಾರದೆಂದು ನಿರ್ಧರಿಸಿದ್ದೆವು. ಮೇ 30ರಂದು ನನ್ನ ಅಣ್ಣ ಸುರ್ಜಿತ್ ಈ ವಿಷಯವನ್ನು ನನ್ನ ತಂದೆಗೆ ತಿಳಿಸಿದ್ದ. ಇದಾದ, ಕೆಲವೇ ಸಮಯದಲ್ಲಿ ಕವಿನ್ ಶವವಾಗಿ ಪತ್ತೆಯಾಗಿದ್ದಾರೆ” ಎಂದು ಸುಭಾಷಿಣಿ ತಿಳಿಸಿದ್ದಾರೆ.
ಈ ಘಟನೆ ತಮಿಳುನಾಡಿನಲ್ಲಿ ಜಾತಿವಾದದ ವಿರುದ್ಧ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣವನ್ನು ಕಮಲ್ ಹಾಸನ್ ಸೇರಿದಂತೆ ಹಲವು ರಾಜಕೀಯ ನಾಯಕರು ಖಂಡಿಸಿದ್ದಾರೆ.




