ಪ್ರಧಾನಿ ನರೇಂದ್ರ ಮೋದಿಯ ಭ್ರಷ್ಟಾಚಾರ ವಿರೋಧಿ ಹೇಳಿಕೆಗಳು ಪೊಳ್ಳು ಮಾತುಗಳಾಗಿದ್ದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷ ನಾಯಕರಾದ ಹೇಮಂತ್ ಸೊರೇನ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದರ ವಿರುದ್ಧ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಿಟಿಐ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಜೈರಾಮ್ ರಮೇಶ್, ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ಸಂಯುಕ್ತವಾಗಿ 272 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇಂಡಿಯಾ ಒಕ್ಕೂಟ ತ್ಯಜಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊರತಾಗಿಯೂ ಟಿಎಂಸಿಯ ಮಮತಾ ಬ್ಯಾನರ್ಜಿ ತಾವು ನಿಜವಾಗಿಯೂ ಮಮತಾ ಬ್ಯಾನರ್ಜಿ ಎಂಬುದನ್ನು ತೋರಿಸಿದ್ದಾರೆ ಎಂದು ಜೈರಾಮ್ ರಮೇಶ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್ನಲ್ಲಿ ಅಪ್ಪ-ಮಗನ ಆಟ
“ನಾಲ್ಕು ಸಾವಿರ ಕೋಟಿಯ ಚುನಾವಣಾ ಬಾಂಡ್ಗಳು 4 ಲಕ್ಷ ಕೋಟಿ ರೂ. ಒಪ್ಪಂದಗಳಿಗೆ ಸಂಬಂಧ ಹೊಂದಿವೆ. ಚುನಾವಣಾ ಬಾಂಡ್ಗಳು ಹಾಗೂ ಗುತ್ತಿಗೆಗಳು ಪರಸ್ಪರ ಸರ್ಕಾರ ಹಾಗೂ ಕಂಪನಿಗಳ ನಡುವೆ ಪರಸ್ಪರ ಸಂಬಂಧ ಹೊಂದಿವೆ. ಪ್ರದಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆಂದು ಹೇಮಂತ್ ಸೊರೇನ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಹುಸಿ ವಾದವಾಗಿದೆ. ಚುನಾವಣಾ ಬಾಂಡ್ಗಳ ಇತಿಹಾಸ ಗಮನಿಸಿದರೆ ಸಂಪೂರ್ಣವಾಗಿ ಕೊಟ್ಟು ತೆಗೆದುಕೊಳ್ಳುವಿಕೆ ವ್ಯವಹಾರ ನಡೆದಿದೆ” ಎಂದು ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟ ಬಿಟ್ಟು ಹೋದ ನಂತರ ಒಕ್ಕೂಟವು ಛಿದ್ರವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇಂಡಿಯಾ ಒಕ್ಕೂಟ ಲೋಕಸಭಾ ಚುನಾವಣೆಯಲ್ಲಿ 272 ಸಂಖ್ಯೆಗಳನ್ನು ದಾಟುತ್ತದೆ. ಇದನ್ನು ನಾನು ಖಚಿತವಾಗಿ ಹೇಳುತ್ತೇನೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಒಕ್ಕೂಟ ಛಿದ್ರವಾಗಿಲ್ಲ ಎನ್ಸಿಪಿ, ಶಿವಸೇನಾ, ಡಿಎಂಕೆ ಹಾಗೂ ಜೆಎಂಎಂ ನಡುವೆ ಸೀಟು ಹಂಚಿಕೆಯ ಒಪ್ಪಂದಗಳಾಗಿವೆ. ಸಿಪಿಐ, ಸಿಪಿಎಂ ನಡುವೆ ಅಂತಿಮ ಮಾತುಕತೆಯಾಗಲಿದೆ. ನಾವು ಅಸ್ಸಾಂನಲ್ಲಿ 11 ಪಕ್ಷಗಳೊಂದಿಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಗಳೊಂದಿಗೆ ಮೈತ್ರಿ ಹೊಂದಿದ್ದೇವೆ. ಮಮತಾ ಬ್ಯಾನರ್ಜಿ ಸೀಟು ಒಪ್ಪಂದ ಮಾಡಿಕೊಳ್ಳದಿದ್ದರೂ ಇಂಡಿಯಾ ಒಕ್ಕೂಟದೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದರು.
ರಾಹುಲ್ ಹಾಗೂ ಪ್ರಿಯಾಂಕಾ ಅವರು ಅಮೇಥಿ ಹಾಗೂ ರಾಯ್ಬರೇಲಿಯಲ್ಲಿ ಸ್ಪರ್ಧಿಸುತ್ತಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ರಮೇಶ್, ಕಾಂಗ್ರೆಸ್ ಕಾರ್ಯಾಕಾರಿ ಮಂಡಳಿ ಹೇಳಿದರೆ ಇಬ್ಬರು ಸ್ಪರ್ಧಿಸುತ್ತಾರೆ. ರಾಹುಲ್ ಅವರು ಪಕ್ಷದ ಒಬ್ಬ ನಿಷ್ಠಾವಂತ ಸೇನಾನಿ. ಅವರದು ಭಿನ್ನ ರೀತಿಯ ರಾಜಕೀಯ. ಅವರು ಪಕ್ಷವನ್ನು ಬಲಪಡಿಸಲು ಹಾಗೂ ನವೀಕರಣಗೊಳಿಸಿಲು ಬಯಸುತ್ತಾರೆ. ಸಂಘಟನೆಯಲ್ಲಿ ಹೊಸ ಚೈತನ್ಯ ತುಂಬುವುದರೊಂದಿಗೆ ಅಸಾಧಾರಣ ಯಶಸ್ಸು ಗಳಿಸುತ್ತಾರೆ ಎಂದು ಜೈರಾಮ್ ರಮೇಶ್ ತಿಳಿಸಿದರು.





