ತಮ್ಮನ್ನು ಪಿತೂರಿ ಮಾಡಿ ಲೋಕಸಭೆಯಿಂದ ಹೊರಹಾಕಲಾಗಿದೆಯೇ ಹೊರತು, ಜನರ ಇಚ್ಛೆಯಿಂದಲ್ಲ. ತಾವು ಜೀವಂತವಾಗಿದ್ದರೆ, ಮತ್ತೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ, ಲೋಕಸಭೆಗೆ ಮರಳುತ್ತೇನೆ ಎಂದು ಬಿಜೆಪಿ ಮಾಜಿ ಸಂಸದ, ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಹೇಳಿಕೊಂಡಿದ್ದಾರೆ.
ಕುಸ್ತಿ ಫೆಡರೇಷನ್ನ ಅಧ್ಯಕ್ಷನಾಗಿದ್ದ ಬ್ರಿಜ್ ಭೂಷಣ್ ಸಿಂಗ್, ತರಬೇತಿ ಮತ್ತು ಪಂದ್ಯಾವಳಿ ನಡೆಯುತ್ತಿದ್ದ ಸಮಯದಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳಾ ಕುಸ್ತಿಪಟುಗಳು ಆರೋಪಿಸಿ, ಪ್ರತಿಭಟನೆ ನಡೆಸಿದ್ದರು. ಆತನ ವಿರುದ್ಧ ಪ್ರಕರಣ ದಾಖಲಾದ ಬಳಿಕ, ಆತನನ್ನು ಪಕ್ಷದಿಂದ ಬಿಜೆಪಿ ಉಚ್ಛಾಟಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಿದೆ.
ಇದೀಗ, ತಮ್ಮ ವಿರುದ್ಧದ ಆರೋಪ ಮತ್ತು ಉಚ್ಛಾಟನೆ ಕುರಿತು ಮಾತನಾಡಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಿಂಗ್, “ಸಂಸತ್ತಿನಲ್ಲಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಮೊಟಕುಗೊಳಿಸಲಾಗಿದೆ. ಕೈಸರ್ಗಂಜ್ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರೂ ತಮ್ಮನ್ನು ಅವಮಾನಿಸಲಾಗಿದೆ. ಬಲವಂತವಾಗಿ ಹೊರಹಾಕಲಾಗಿದೆ” ಎಂದು ಹೇಳಿದ್ದಾರೆ.
“ನಾನು ಜೀವಂತವಾಗಿದ್ದರೆ, ಖಂಡಿತವಾಗಿಯೂ ಮತ್ತೊಮ್ಮೆ ಲೋಕಸಭೆಗೆ ಹೋಗುತ್ತೇನೆ. ನಾನು ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತೇನೆ. ಪಕ್ಷ ಟಿಕೆಟ್ ನೀಡದಿದ್ದರೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಶರದ್ ಪವಾರ್ – ಅದಾನಿ ಸ್ನೇಹವೂ, ಪೊಲಿಟಿಕಲ್-ಕಾರ್ಪೊರೇಟ್ ಸಂಬಂಧವೂ!
“ನಾನು ಸಾರ್ವಜನಿಕ ಪ್ರತಿನಿಧಿಯಾಗಿದ್ದರೂ, ಅಯೋಧ್ಯೆಯಲ್ಲಿ ರಾಮ ಮಂದಿರದ ಎರಡನೇ ವಾರ್ಷಿಕೋತ್ಸವಕ್ಕೆ ಆಹ್ವಾನಿಸದೇ ಇರುವುದು ನೋವುಂಟುಮಾಡಿದೆ. ರಾಮ ಜನ್ಮಭೂಮಿ ಚಳವಳಿಯ ಮೂಲ ಕರಸೇವಕರನ್ನು ನಿರ್ಲಕ್ಷಿಸಲಾಗಿದ್ದು, ಯಾವುದೇ ಪಾತ್ರವಿಲ್ಲದ ಇತರರನ್ನು ಆಹ್ವಾನಿಸಲಾಗಿದೆ. ನಂತರ ಬಂದ ಆಹ್ವಾನವನ್ನು ಸ್ವಾಭಿಮಾನದ ಕಾರಣಕ್ಕಾಗಿ ನಿರಕಾರಿಸಿದ್ದೇನೆ” ಎಂದು ಸಿಂಗ್ ಹೇಳಿದ್ದಾರೆ.
2024ರ ಮೇ ತಿಂಗಳಿನಲ್ಲಿ ದೆಹಲಿ ನ್ಯಾಯಾಲಯವು ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಮಹಿಳೆಯರ ಗೌರವಕ್ಕೆ ಧಕ್ಕೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತು. 2024ರ ಆಗಸ್ಟ್ನಲ್ಲಿ ತಮ್ಮ ವಿರುದ್ಧದ ಎಫ್ಐಆರ್, ಚಾರ್ಜ್ಶೀಟ್ ಮತ್ತು ವಿಚಾರಣಾ ನ್ಯಾಯಾಲಯದ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.




