ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎನ್ಡಿಎ ಮೈತ್ರಿಕೂಟ ಸೇರಿದರೆ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಲಭಿಸಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ವೇಳೆ ವಿಜಯನ್ ಅವರು ಎನ್ಡಿಎ ಸೇರಿದರೆ ಅದೊಂದು ಕ್ರಾಂತಿಕಾರಿ ನಡೆಯಾಗಲಿದ್ದು, ಕೇರಳಕ್ಕೆ ಖಂಡಿತವಾಗಿಯೂ ಹೆಚ್ಚಿನ ಹಣ ಹರಿದು ಬರಲಿದೆ’ ಎಂದು ತಿಳಿಸಿದರು.
’ಹೀಗೆ ಬಂದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಕ್ಕೆ ದೊಡ್ಡ ಕೊಡುಗೆ (ಪ್ಯಾಕೇಜ್) ನೀಡಲಿದ್ದಾರೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರು ದುರಹಂಕಾರ ತೊರೆಯಲಿ- ಆಯಾ ರಾಜ್ಯದ ಜನಾದೇಶವನ್ನು ಗೌರವಿಸಲಿ
ವಿಜಯನ್ ಅವರು ಎನ್ಡಿಎ ಸೇರಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹಾದಿ ಸುಗಮವಾಗಲಿದ್ದು, ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬಹುದು ಎಂದು ಅಠಾವಳೆ ತಿಳಿಸಿದರು.
ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ಅಧ್ಯಕ್ಷರೂ ಆಗಿರುವ ಅಠಾವಳೆ, ಕೇವಲ ವಿಜಯನ್ ಅಷ್ಟೇ ಅಲ್ಲ, ಸಿಪಿಐಎಂ ಮತ್ತು ಸಿಪಿಐ ಪಕ್ಷಗಳೂ ಎನ್ಡಿಎ ಸೇರಬೇಕು ಎಂದು ಆಹ್ವಾನ ನೀಡಿದರು.
‘ಸಮಾಜವಾದಿ ಹಿನ್ನೆಲೆಯ ನಾಯಕರೇ ಎನ್ಡಿಎ ಸೇರಿರುವಾಗ, ಕಮ್ಯುನಿಸ್ಟ್ ನಾಯಕರು ಏಕೆ ಸೇರಬಾರದು?’ ಎಂದು ಅವರು ಪ್ರಶ್ನಿಸಿದರು.





