ನ್ಯಾಯಾಧೀಶೆಯರನ್ನು ಸೇವೆಯಿಂದ ವಜಾಗೊಳಿಸಿದ್ದಕ್ಕಾಗಿ ಮತ್ತು ಅವರನ್ನು ಮರುನೇಮಕಗೊಳಿಸಲು ನಿರಾಕರಿಸಿದ್ದಕ್ಕಾಗಿ ಮಂಗಳವಾರ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡಿದೆ. “ಪುರುಷರಿಗೂ ಮುಟ್ಟಾಗುವಂತಿದ್ದರೆ (ಋತುಸ್ರಾವ) ಅರ್ಥವಾಗುತ್ತಿತ್ತು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠದ ನೇತೃತ್ವದ ವಹಿಸಿದ್ದ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು, “ಪುರುಷರಿಗೂ ಮುಟ್ಟಾಗುವಂತಿದ್ದರೆ ಮಾತ್ರ ಅವರಿಗೆ ಅರ್ಥವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. ಮಧ್ಯಪ್ರದೇಶದ ಹೈಕೋರ್ಟ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದೆ.
ಇದನ್ನು ಓದಿದ್ದೀರಾ? ಮುಟ್ಟಿನ ರಜೆ | ಮಹಿಳಾ ಸಮಸ್ಯೆಗಳ ಕುರಿತ ವಿ’ಸ್ಮೃತಿ’ಗೆ ಕೊನೆಯೆಲ್ಲಿ?
“ವಿಶೇಷವಾಗಿ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದರೆ, ಅವರು ನಿಧಾನವಾಗಿ ಕೆಲಸ ಮಾಡುತ್ತಾರೆ ಎಂಬ ಕಾರಣ ನೀಡಿ ಅವರನ್ನು ಮನೆಗೆ ಕಳುಹಿಸಬೇಡಿ. ಪುರುಷ ನ್ಯಾಯಾಧೀಶರಿಗೂ, ನ್ಯಾಯಾಂಗದ ಅಧಿಕಾರಿಗಳಿಗೂ ಇದೇ ಮಾನದಂಡವನ್ನು ವಿಧಿಸಿ. ಆಗ ನೋಡೋಣ ಏನಾಗುತ್ತದೆ ಎಂದು. ಏನಾಗುವುದೆಂದು ನಮಗೆ ತಿಳಿದಿದೆ. ಜಿಲ್ಲಾ ನ್ಯಾಯಾಲಯಕ್ಕೆ ನೀವು ಗುರಿಯನ್ನು ನಿಗದಿಪಡಿಸಲು ಹೇಗೆ ಸಾಧ್ಯ” ಎಂದು ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿದೆ.
ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 12ರಂದು ನಡೆಸಲಿದೆ. ಈ ವರ್ಷದ ಜನವರಿಯಲ್ಲಿ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ಶಾಲಾ ಶಿಕ್ಷಕ ಹಾಜಿಮಲಂಗ ಗಿಣಿಯಾರ ಬಂಧನ
ಮಧ್ಯಪ್ರದೇಶ ಹೈಕೋರ್ಟ್ ಆದೇಶದಂತೆ 2023ರ ಜೂನ್ ತಿಂಗಳಲ್ಲಿ ಮಧ್ಯಪ್ರದೇಶ ಸರ್ಕಾರವು ಆರು ನ್ಯಾಯಾಧೀಶೆಯರನ್ನು ವಜಾಗೊಳಿಸಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿರುವಾಗ ಪ್ರಕರಣದ ವಿಲೇವಾರಿ ದರವು ಅಳತೆಗೋಲು ಆಗುವುದಿಲ್ಲ ಎಂದು ಹೇಳಿದೆ.
2024ರ ಜುಲೈ 23ರಂದು ನ್ಯಾಯಾಧೀಶೆಯರನ್ನು ವಜಾಗೊಳಿಸುವ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಪೀಠವು ಮಧ್ಯಪ್ರದೇಶ ಹೈಕೋರ್ಟ್ಗೆ ತಿಳಿಸಿದೆ. ಆದರೆ ಹೈಕೋರ್ಟ್ ಆದೇಶವನ್ನು ಮಧ್ಯಪ್ರದೇಶ ಸರ್ಕಾರದ ರಾಜ್ಯ ಕಾನೂನು ಇಲಾಖೆಯು ಅಂಗೀಕರಿಸಿದ್ದು ಆರು ಮಹಿಳಾ ನ್ಯಾಯಾಧೀಶೆಯರನ್ನು ವಜಾಗೊಳಿಸಿದೆ. ಅರ್ಹತಾ ಪರೀಕ್ಷಣೆ ಅವಧಿಯಲ್ಲಿ ನ್ಯಾಯಾಧೀಶೆಯರ ಕಾರ್ಯಕ್ಷಮತೆ ತೃಪ್ತಿಕರವಲ್ಲ ಎಂಬ ಕಾರಣವನ್ನು ನೀಡಿ ವಜಾಗೊಳಿಸಲಾಗಿದೆ.





