'ಸವರ್ಣೀಯರ ಮೇಲಿನ ಅನ್ಯಾಯ ಮತ್ತು ರಕ್ತಪಾತಗಳಿಗೆ ಅಂಬೇಡ್ಕರ್ ಕಾರಣ' ಎಂದು ಆರೋಪಿಸಿರುವ ಮಿಶ್ರಾ, 'ಅಂಬೇಡ್ಕರ್ ಸಂವಿಧಾನವನ್ನೇ ಬರೆದಿಲ್ಲ. ಸಂವಿಧಾನವನ್ನು ಬರೆದದ್ದು ಬಿ.ಎನ್. ರಾವ್' ಎಂದಿದ್ದಾರೆ
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯ ನಂತರ ಅದೇ ದಿನದಂದು ಮಧ್ಯ ಪ್ರದೇಶದ ಗ್ವಾಲಿಯರ್ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಎಂಬಾತ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಮಿಶ್ರಾ ಬಾಯಿಗೆ ಬಂದಂತೆ ಮಾತನಾಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ಅಂಬೇಡ್ಕರ್ ಅವರನ್ನು ನಿಂದಿಸಿರುವ ಮಿಶ್ರಾ, ”ಅಂಬೇಡ್ಕರ್ ಒಬ್ಬ ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟಿಷ್ ಏಜೆಂಟ್” ಎಂದು ವಿಷಕಾರಿಕೊಂಡಿದ್ದಾರೆ.
ಮುಂದುವರಿದು, ”ಸವರ್ಣೀಯರ ಮೇಲಿನ ಅನ್ಯಾಯ ಮತ್ತು ರಕ್ತಪಾತಗಳಿಗೆ ಅಂಬೇಡ್ಕರ್ ಕಾರಣ” ಎಂದು ಆರೋಪಿಸಿರುವ ಮಿಶ್ರಾ, ”ಅಂಬೇಡ್ಕರ್ ಸಂವಿಧಾನವನ್ನೇ ಬರೆದಿಲ್ಲ. ಸಂವಿಧಾನವನ್ನು ಬರೆದದ್ದು ಬಿ.ಎನ್. ರಾವ್” ಎಂದಿದ್ದಾರೆ.
”ಹೈಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಬಿಡುವುದಿಲ್ಲ” ಎಂದು ಧಮ್ಕಿ ಹಾಕಿದ್ದಾರೆ.
ಈ ವಿವಾದಾತ್ಮಕ ಹೇಳಿಕೆಯಿಂದಾಗಿ ಅನಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೂ ಮೇಲ್ಜಾತಿ ಅಹಂಕಾರ ಪ್ರದರ್ಶಿಸಿರುವ ಮಿಶ್ರಾ, ”ನಾನು ಹೆದರಲ್ಲ, ನೂರು ಕೇಸುಗಳು ಬಂದರೂ ನನ್ನ ಮಾತುಗಳಿಗೆ ಬೆಲೆ ಕೊಡುತ್ತೇನೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್ಎಸ್ಎಸ್ಗೆ ನೂರು, ನ್ಯಾಯಮೂರ್ತಿಗಳ ಮೇಲೆ ಶೂ ತೂರು
ಗ್ವಾಲಿಯರ್ ಹೈಕೋರ್ಟ್ನಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ವಿವಾದ ಕಳೆದ ಹಲವು ತಿಂಗಳುಗಳಿಂದ ಎರಡು ಗುಂಪುಗಳ ವಕೀಲರ ನಡುವೆ ಘರ್ಷಣೆಗೆ ಕಾರಣವಾಗಿದೆ. ಫೆಬ್ರುವರಿಯಲ್ಲಿ ಸಲ್ಲಿಸಿದ ಅರ್ಜಿಗೆ ಹೈಕೋರ್ಟ್ ಸಮಿತಿ ಅನುಮೋದನೆ ನೀಡಿ, ಸಾರ್ವಜನಿಕ ಇಲಾಖೆ ಮೂಲಕ ಪ್ರತಿಮೆಗೆ 2 ಲಕ್ಷ ರೂ. ಪಾವತಿಸಲಾಗಿತ್ತು. ರಿಜಿಸ್ಟ್ರಾರ್ ಯುವಲ್ ರಘುವಂಶಿ ಅವರು ಏ. 21ರಂದು ಪ್ರತಿಮೆ ಸ್ಥಾಪನೆ ಪೂರ್ಣಗೊಳಿಸುವಂತೆ ಆದೇಶ ನೀಡಿದ್ದರು. ಆದರೆ ಮೇ 17ರಂದು ನಿಗದಿಯಾಗಿದ್ದ ಸ್ಥಾಪನೆಗೆ ಅನಿಲ್ ಮಿಶ್ರಾ ನೇತೃತ್ವದ ಗುಂಪು ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದರು. ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಅಂಬೇಡ್ಕರ್ ವಿರುದ್ಧ ಅಸಹನೆ ಹೊರಹಾಕಿದರು.
ಪ್ರತಿಮೆ ಬೆಂಬಲಿಸುವ ವಕೀಲ ವಿಶ್ವಜಿತ್ ರತೋನಿಯಾ ಅವರ ಗುಂಪು, ”ನ್ಯಾಯದ ದೇಗುಲದಲ್ಲಿ ಅಂಬೇಡ್ಕರ್ ಪ್ರತಿಮೆ ಅಗತ್ಯ” ಎಂದು ಒತ್ತಾಯಿಸಿದ್ದಾರೆ. ”ಇದು ಮಿಶ್ರಾ ಅವರ ಖಾಸಗಿ ಆಸ್ತಿಯಲ್ಲ. ಅನುಮತಿ ನೀಡಿದರೆ ರಾಮನ ಪ್ರತಿಮೆ ಸ್ಥಾಪಿಸುತ್ತೇನೆ ಎಂದು ಹೇಳಿದ್ದಾರೆ. ಇವೆಲ್ಲ ಘಟನೆಗಳು ಅಂಬೇಡ್ಕರ್ ವಿರೋಧಿ ಹಾಗೂ ಸಂವಿಧಾನ ವಿರೋಧಿ ಕೃತ್ಯಗಳು” ಎಂದು ಆಕ್ರೋಶ ವ್ಯಕ್ತವಾಗಿದೆ.
ಚಿಂತಕ ಶಿವಸುಂದರ್ ಅವರು ಈ ಘಟನೆಗಳನ್ನು ಖಂಡಿಸಿದ್ದು, ”ಇದು ಬಿಜೆಪಿ ಬೆಂಬಲಿತ ಸನಾತನಿ ಉಗ್ರರಿಂದ ಅಂಬೇಡ್ಕರ್, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಮಧ್ಯಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿರುವುದರಿಂದ ರಾಕೇಶ್ ಕಿಶೋರ್ ಮತ್ತು ಅನಿಲ್ ಮಿಶ್ರಾ ಅವರಿಗೆ ಏನೂ ಆಗದು” ಎಂದು ಆತಂಕ ವ್ಯಕ್ತಪಡಿಸಿರುವ ಅವರು, ”ಈ ಘಟನೆಯ ವಿರುದ್ಧ ಸಮಾಜವೇ ಒಂದಾಗಿ ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಬೇಕು” ಎಂದು ಕರೆ ನೀಡಿದ್ದಾರೆ.





