ಅಕ್ಟೋಬರ್ ತಿಂಗಳು – ದಸರಾ, ದೀಪಾವಳಿ ಸಂಭ್ರಮಿಸುವ ಮಾಸ. ಜನರು ಹಬ್ಬ, ಔತಣ, ಜಾತ್ರೆ, ಅಲಂಕಾರಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ದಿನಗಳೂ ಕೂಡ. ಆಧುನಿಕ ಜಗತ್ತು ಎಂದು ಹೇಳಲಾಗುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ವೈಯಕ್ತಿಕ ಮತ್ತು ಗೃಹ ಅಲಂಕಾರ ಮಾತ್ರವಲ್ಲದೆ, ಆಹಾರಕ್ಕೂ ಅಲಂಕಾರ/ಹೊಳಪಿನ ಆದ್ಯತೆ ದೊರೆಯುತ್ತಿದೆ. ಕೆಲವರು ಚಿನ್ನವನ್ನೇ ತಿಂದು, ತೇಗಿ, ಶೌಚದಲ್ಲಿ ಹೊರಹಾಕುವ ಪರಿಪಾಠವೂ ನಡೆಯುತ್ತಿದೆ.
ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಲಡ್ಡೂಗಳಿಂದ ಹಿಡಿದು ತೆಳುವಾದ ಚಕ್ಕೆಗಳಂತಹ ‘ಡೆಲಿಕೇಟ್ ಫ್ಲೇಕ್ಸ್’ಗಳವರೆಗೆ ಎಲ್ಲವೂ ಚಿನ್ನವನ್ನು ಒಳಗೊಳ್ಳುತ್ತಿವೆ. ಖಾದ್ಯ ಚಿನ್ನವು (ಎಡಿಬಲ್ ಗೋಲ್ಡ್) ಹಬ್ಬದ ಆಹಾರ ಮೆನುಗಳನ್ನು ಆಗ್ರಮಿಸಿಕೊಂಡಿದೆ. ಆಹಾರಗಳು ಚಿನ್ನದ ಲೇಪನವನ್ನು ಒಳಗೊಳ್ಳುತ್ತಿವೆ. ಐಷಾರಾಮಿ ತಿನಿಸುಗಳಾಗಿ ಗಮನ ಸೆಳೆಯುತ್ತಿವೆ. ಸಾಂಸ್ಕೃತಿಕ ಸೊಬಗಿಗೆ ಐಷಾರಾಮಿ ಮುಖವಾಡ ಹಾಕುತ್ತಿವೆ. ಶ್ರೀಮಂತರ ತಟ್ಟೆ ಸೇರುತ್ತಿವೆ.
ಖಾದ್ಯ ಚಿನ್ನವನ್ನು ಆಹಾರದಲ್ಲಿ ಸೇವಿಸುವ ಭೋಗವು ಭಾರತದಲ್ಲೂ ಹೆಚ್ಚುತ್ತಿದೆ. ಭಾರತೀಯ ಸಿಹಿತಿಂಡಿಗಳ ಮೇಲೆ ಚಿನ್ನದ ಎಲೆಗಳನ್ನು ಸಿಂಪಡಿಸಲಾಗುತ್ತಿದೆ. ಫ್ರಾಸ್ ಕೇಕ್ಗಳಲ್ಲಿ ಚಿನ್ನದ ಪುಡಿಗಳನ್ನು ಹಾಕಲಾಗುತ್ತಿದೆ. ಜ್ಯೂಸ್ಗಳಲ್ಲೂ ಫಲೂಡದಂತೆ ಚಿನ್ನವು ಮಿಶ್ರಣಗೊಳ್ಳುತ್ತಿದೆ. ಐಸ್ಕ್ರೀಮ್ಗಳ ಮೇಲೂ ಚಿನ್ನದ ಹೊಳಪು ಇರುತ್ತದೆ. ಅಷ್ಟೇ ಯಾಕೆ? ಬಿರಿಯಾನಿಯಿಂದ ಫ್ಯಾನ್ಸಿ ಬ್ರೆಡ್ ರೋಲ್ಗಳವರೆಗೆ, ಸಿಹಿಯಿಂದ ಖಾರದ ಭಕ್ಷ್ಯಗಳವರೆಗೆ ಎಲ್ಲದರಲ್ಲೂ ಖಾದ್ಯ ಚಿನ್ನವನ್ನು ಬಳಸಲಾಗುತ್ತಿದೆ. ಆಹಾರಗಳು ಹೊಳೆಯುತ್ತಿವೆ. ಅವುಗಳನ್ನು ದೊಡ್ಡ ಕುಳಗಳು ತಿಂದು ತೇಗುತ್ತಿವೆ. ಶೌಚದಲ್ಲಿ ಹೊರಹಾಕುತ್ತಿವೆ.
“ನಮ್ಮ ಹಬ್ಬದ ಊಟದಲ್ಲಿ ಚಿನ್ನವನ್ನು ಬಳಸುವುದು ರುಚಿಯನ್ನೂ ಮೀರಿದ ಸಂಭ್ರಮವಾಗಿದೆ. ಇದು ಆರೋಗ್ಯ, ಆಚರಣೆ ಹಾಗೂ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ. ನಾವು ಈಗ ಪ್ರಜ್ಞಾಪೂರ್ವಕವಾಗಿ ಖಾದ್ಯ ಚಿನ್ನವನ್ನು ಬಳಸುತ್ತೇವೆ. ಚಿನ್ನವು ನಮ್ಮ ಪರಂಪರೆಯ ಭಾಗವಾಗಿದೆ. ಆಹಾರದಲ್ಲಿ ಶಾಂತ ಐಷಾರಾಮಿ ಸಾಂಕೇತವಾಗಿದೆ” ಎಂದು ಬಾಣಸಿಗ ಮೀನಾಕ್ಷಿ ಕುಮಾರ್ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅದೇನೇ ಇರಲಿ, ಆಹಾರದಲ್ಲಿ ಚಿನ್ನ ಬಳಕೆಯು ಭಾರತದಲ್ಲಿ ವರ್ಗ ತಾರತಮ್ಯವನ್ನು ಸ್ಪಷ್ಟವಾಗಿ ಎತ್ತಿ ತೋರುತ್ತದೆ. ಒಂದೆಡೆ, ಒಂದು ಗ್ರಾಂ ಚಿನ್ನವಿರಲಿ, ಆಹಾರ ಪದಾರ್ಥವನ್ನೂ ಖರೀದಿಸಲಾಗದ ಪರಿಸ್ಥಿತಿಯಲ್ಲಿ ಬಹುಸಂಖ್ಯಾತ ಭಾರತೀಯರಿದ್ದಾರೆ. ಈ ಬೃಹತ್ ಜನಸಂಖ್ಯೆಗೆ ಚಿನ್ನ ಎಂಬುದು ಕಾದ ಕೆಂಡಂತೆ, ಅದನ್ನು ಎಂದಿಗೂ ಮುಟ್ಟಲಾಗುವುದಿಲ್ಲ. ಮತ್ತೊಂದೆಡೆ, ಒಂದೊತ್ತಿನ ಆಹಾರದಲ್ಲಿ ಚಿನ್ನವನ್ನು ತಿಂದು ಹೊರಹಾಕುವವರೂ ಇದ್ದಾರೆ. ಈ ವರ್ಗಕ್ಕೆ ಚಿನ್ನವು ‘ಟಿಶ್ಯೂ ಪೇಪರ್’ನಂತೆ, ಬಳಸಿ-ಎಸೆಯುವುದಷ್ಟೇ!
ಈ ಲೇಖನ ಓದಿದ್ದೀರಾ?: 1% ಕುಬೇರರ ಬಳಿಯಿದೆ ಭಾರತದ 60% ಸಂಪತ್ತು: ಬರ್ನ್ಸ್ಟೈನ್ ವರದಿ
ಭಾರತದಲ್ಲಿ ದೇಶದ ಒಟ್ಟು 140 ಕೋಟಿ ಜನಸಂಖ್ಯೆಯಲ್ಲಿ 38 ಕೋಟಿ ಕಡುಬಡವರಿದ್ದಾರೆ. 81 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಸರ್ಕಾರದಿಂದ ದೊರೆಯುವ ಪಡಿತರ ಆಹಾರಗಳನ್ನು ಅವಲಂಬಿಸಿ ಬದುಕು ದೂಡುತ್ತಿದ್ದಾರೆ. ಮಾತ್ರವಲ್ಲ, ದೇಶದ ಒಟ್ಟು ಸಂಪತ್ತಿನಲ್ಲಿ 60% ಸಂಪತ್ತು ಅಂಬಾನಿ, ಅದಾನಿಗಳಂತಹ 1% ಶ್ರೀಮಂತರ ಕೈಯಲ್ಲಿದೆ. 80% ಸಂಪತ್ತು 10% ಶ್ರೀಮಂತರ ಬಳಿಯಿದೆ. ದೇಶದ 90% ಜನರ ಬಳಿ ಅತೀ ಕಡಿಮೆ (10%) ಸಂಪತ್ತು ಹಂಚಿಕೆಯಾಗಿದೆ.
ಆ ಕಾರಣದಿಂದಲೇ ಒಂದೆಡೆ ಚಿನ್ನವನ್ನು ತಿನ್ನುವವರು, ಮತ್ತೊಂದೆಡೆ ಅನ್ನವನ್ನೇ ಚಿನ್ನವೆಂಬಂತೆ ಕಾಣುವವರು ಜೀವಿಸುತ್ತಿದ್ದಾರೆ. ಈ ವೈರುದ್ಯಗಳು ಅಸಮಾನ ಭಾರತವನ್ನು ಸೂಚಿಸುತ್ತವೆ.
ಈ ಶ್ರೀಮಂತರು ತಿನ್ನುವುದು ‘ಅಂತರರಾಷ್ಟ್ರೀಯ ಆಹಾರ ಸುರಕ್ಷತಾ ಮಾನದಂಡ’ಗಳ ಅಡಿಯಲ್ಲಿ E175 ಎಂದು ಅನುಮೋದಿಸಲಾದ ‘24-ಕ್ಯಾರೆಟ್ ಖಾದ್ಯ ಚಿನ್ನ’ವನ್ನು. ಇದು ಯಾವುದೇ ರೀತಿಯ ಹಾನಿ ಉಂಟುಮಾಡದೆ, ಸರಾಗವಾಗಿ ಜೀರ್ಣವಾಗುತ್ತದೆ. ಶೌಚದ ಮೂಲಕ ಹೊರಹೋಗುತ್ತದೆ. ಒಂದು ವೇಳೆ, ಇತರ ಲೋಹಗಳನ್ನು ಹೊಂದಿರುವ ಅಶುದ್ಧ ಚಿನ್ನವನ್ನು ಆಹಾರದಲ್ಲಿ ಬಳಸಿದರೆ, ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.




