ಮಲಯಾಳಂ ಸಿನಿಮಾ ತಾರೆಯಾಗಿ ಗುರುತಿಸಿಕೊಂಡು ರಾಜಕೀಯಕ್ಕೆ ಕಾಲಿಟ್ಟ ಕೇಂದ್ರ ಸಚಿವ ಸುರೇಶ್ ಗೋಪಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ನಟನಾ ಜಗತ್ತಿಗೆ ಮರಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. “ನನ್ನ ಆದಾಯ ಪೂರ್ತಿ ನಿಂತುಹೋಗಿದೆ, ಹೆಚ್ಚು ಸಂಪಾದನೆ ಮಾಡಬೇಕು” ಎಂದು ಹೇಳಿ, ರಾಜಕೀಯದ ಕಟ್ಟುಕಥೆಗಳ ನಡುವೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಸುರೇಶ್ ಗೋಪಿ, “ನಾನು ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ಹೆಚ್ಚು ದುಡ್ಡು ಗಳಿಸಬೇಕು; ಈಗ ನನ್ನ ಆದಾಯ ಸಂಪೂರ್ಣ ನಿಂತಿದೆ” ಎಂದು ಹೇಳಿದರು. ಅಲ್ಲದೆ, ತಮ್ಮ ಪಕ್ಷದಲ್ಲಿ ತಾವು ಕಿರಿಯ ಸದಸ್ಯರೆಂದು ಹೇಳಿ, ರಾಜ್ಯಸಭಾ ಸಂಸದ ಸಿ. ಸದಾನಂದನ್ ಮಾಸ್ಟರ್ ಅವರನ್ನು ತಮ್ಮ ಸ್ಥಾನಕ್ಕೆ ನೇಮಿಸುವಂತೆ ಸಲಹೆ ನೀಡಿದ್ದಾರೆ. “ನಾನು ಎಂದೂ ಸಚಿವನಾಗಬೇಕೆಂದು ಪ್ರಾರ್ಥಿಸಿರಲಿಲ್ಲ. ಚುನಾವಣೆಗೆ ಒಂದು ದಿನ ಮುಂಚೆಯೇ ಪತ್ರಕರ್ತರಿಗೆ ಹೇಳಿದ್ದೆ, ನಾನು ಸಚಿವನಾಗುವುದಿಲ್ಲ, ಸಿನಿಮಾ ಮುಂದುವರಿಸುತ್ತೇನೆ ಎಂದು” ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗವಾಯಿ ಬೌದ್ಧತತ್ವವೂ ಬಿಜೆಪಿಗರ ಮನುವಾದವೂ
ಸುರೇಶ್ ಗೋಪಿ ಅವರು 2008ರ ಅಕ್ಟೋಬರ್ನಲ್ಲಿ ಬಿಜೆಪಿಗೆ ಸೇರಿದರು. ಬಿಜೆಪಿಯಿಂದ ಸಂಸದರಾದ ಅವರು ಪ್ರಸ್ತುತ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವರ್ಷದ ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನೂರಿನ ಬಿಜೆಪಿ ಹಿರಿಯ ನಾಯಕ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.
ಸುರೇಶ್ ಗೋಪಿ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಸಿನಿಮಾ ಜಗತ್ತಿನ ಆಕರ್ಷಣೆ ಮತ್ತು ರಾಜಕೀಯದ ಜವಾಬ್ದಾರಿಗಳ ನಡುವಿನ ಸಂಘರ್ಷವನ್ನು ಇದು ಬಿಚ್ಚಿಟ್ಟಿದೆ.





