ಇತ್ತೀಚೆಗೆ, ಜಾರ್ಖಂಡ್ನಲ್ಲಿ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕನನ್ನು ಹತ್ಯೆಯಾಗಿದೆ. ಅಲ್ಲದೆ, ಜಾರ್ಖಂಡ್ ಸೇರಿದಂತೆ ಹಲವೆಡೆ ಬಂಗಾಳದ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶಿ ಪ್ರಜೆಗಳೆಂದು ಶಂಕಿಸಿ ದೌರ್ಜನ್ಯ/ಹತ್ಯೆಗಳು ನಡೆಯುತ್ತಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳದ ಕಾರ್ಮಿಕರ ಮೇಲೆ ದಾಳಿ, ಹಲ್ಲೆ, ಹತ್ಯೆಗಳು ಹೆಚ್ಚಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ವಲಸೆ ಕಾರ್ಮಿಕರ ಹತ್ಯೆಗಳನ್ನು ಖಂಡಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಶನಿವಾರವೂ, ಮುರ್ಷಿದಾಬಾದ್ ಜಿಲ್ಲೆಯ ಜನರು ಬೃಹತ್ ಪ್ರತಿಭಟನೆ ನಡೆಸಿದ್ದು, ರೈಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು, ಮುರ್ಷಿದಾಬಾದ್ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.
ಜಾರ್ಖಂಡ್ನ ಬಿಶ್ರಾಮಪುರ ಪ್ರದೇಶದಲ್ಲಿ ಬಂಗಾಳ ಮೂಲದ ವ್ಯಾಪಾರಿ ಅಲ್ಲಾವುದ್ದೀನ್ ಶೇಖ್ ಅವರನ್ನು ಬಾಂಗ್ಲಾದೇಶಿಗನೆಂದು ಶಂಕಿಸಿ ಗುಂಪೊಂದು ಭೀಕರವಾಗಿ ಥಳಿಸಿ ಹತ್ಯೆಗೈದಿದೆ. ಅವರ ಹತ್ಯೆಯ ಸುದ್ದಿ ಮುರ್ಷಿದಾಬಾದ್ ಜನರಿಗೆ ತಿಳಿದ ಬಳಿಕ, ಬೃಹತ್ ಪ್ರತಿಭಟನೆಗಳು ಆರಂಭಗೊಂಡಿವೆ.
ದೊಣ್ಣೆಗಳನ್ನು ಹಿಡಿದ ಪ್ರತಿಭಟನೆ ನಡೆಸಿರುವ ಪ್ರತಿಭಟನಾಕಾರರು, ರಸ್ತೆ ಬದಿಯ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಕೆಲವು ಅಂಗಡಿಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
2025ರ ಆಗಸ್ಟ್ನಲ್ಲಿ ಹರಿಯಾಣದಲ್ಲಿ ಮುಸ್ಲಿಂ ವಲಸೆ ಕಾರ್ಮಿರೊಬ್ಬರನ್ನು ಗುಂಪೊಂದು ಹತ್ಯೆಗೈದಿತ್ತು. ಡಿಸೆಂಬರ್ನಲ್ಲಿ ಒಡಿಶಾದ ಸಂಬಲ್ಪುರದಲ್ಲಿ ಬಂಗಾಳ ಮೂಲದ ವಲಸೆ ಕಾರ್ಮಿಕ ಜಯೆಲ್ ಶೇಖ್ ಅವರನ್ನು ಗುಂಪೊಂದು ಭೀಕರವಾಗಿ ಥಳಿಸಿ ಕೊಂದಿತ್ತು. ಕಳೆದ ವಾರ ಜಾರ್ಖಂಡ್ನಲ್ಲಿ ಬಂಗಾಳದ ಮೂಲದ ರಿತು ಶೇಖ್ ಎಂಬವರ ಹತ್ಯೆಯಾಗಿದೆ.




