ಇರಾನ್ನ ಮಾಜಿ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಗುರುವಾರ ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.
ಇರಾನ್ ರಾಯಭಾರ ಕಚೇರಿಯಲ್ಲಿ ತೆರೆಯಲಾಗಿದ್ದ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ ಮಿಶ್ರಿ, ಖಮೇನಿ ಅವರ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಮತ್ತು ಜನತೆಗೆ ಭಾರತದ ಪರವಾಗಿ ಸಂತಾಪ ಸೂಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಇದನ್ನು ಓದಿದ್ದೀರಾ? ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!
ಇಸ್ಲಾಮಿಕ್ ಗಣರಾಜ್ಯ ಇರಾನ್ ನ 86 ವರ್ಷದ ಮಾಜಿ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು 1989ರಿಂದ ದೇಶದ ಪರಮೋಚ್ಚ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೈನಿಕ ಕಾರ್ಯಾಚರಣೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಖಮೇನಿ ಅವರ ನಿಧನದ ಕುರಿತು ಭಾರತ ಸರ್ಕಾರದ ಮೊದಲ ಅಧಿಕೃತ ಪ್ರತಿಕ್ರಿಯೆಯ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿಯ ಈ ಭೇಟಿ ನಡೆದಿದೆ.





