ಭಾರತವು ಸದ್ಯ 50 ದಿನಗಳ ಬಳಕೆಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಇಂಧನ ಸಂಗ್ರಹವನ್ನು ಹೊಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ, ಎಲ್ಪಿಜಿ ಮತ್ತು ಎಲ್ಎನ್ಜಿ ಆಮದು ಮಾಡಿಕೊಳ್ಳಲು ಅಧಿಕಾರಿಗಳು ಪರ್ಯಾಯ ರಾಷ್ಟ್ರಗಳತ್ತ ಮುಖ ಮಾಡಿದ್ದಾರೆ. ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆಯಿಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಹಾರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸೋಮವಾರ ಹೇಳಿದೆ. ಈ ಪ್ರಮುಖ ಜಲಮಾರ್ಗದ ಮೂಲಕ ಸಾಗಲು ಯತ್ನಿಸುವ ಯಾವುದೇ ಹಡಗಿಗೆ ಬೆಂಕಿ ಹಚ್ಚಲಾಗುವುದು ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಎಚ್ಚರಿಕೆ ನೀಡಿವೆ. ಒಂದು ಕಡೆ ಇರಾನ್ ಹಾಗೂ ಮತ್ತೊಂದೆಡೆ ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಈ ಬೆಳವಣಿಗೆಗಳು ಸೂಚಿಸುತ್ತಿವೆ.
ಅಮೆರಿಕ ಮತ್ತು ಇಸ್ರೇಲ್ ಸೋಮವಾರ ಇರಾನ್ ವಿರುದ್ಧ ತಮ್ಮ ವಾಯು ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ಇಸ್ರೇಲ್ ಲೆಬನಾನ್ನಲ್ಲೂ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ಗಲ್ಫ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಚಲಿಸುತ್ತಿದ್ದ ಟ್ಯಾಂಕರ್ಗಳನ್ನು ಗುರಿಯಾಗಿಸಿದೆ.
ಈ ಕಿರಿದಾದ ಮಾರ್ಗದ ಮೂಲಕ ಹಡಗುಗಳ ಸಂಚಾರವು ಹೆಚ್ಚು ಅಪಾಯಕಾರಿಯಾಗಿರುವುದರಿಂದ, ಹಲವಾರು ಟ್ಯಾಂಕರ್ಗಳು ಮತ್ತು ಕಂಟೇನರ್ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುವುದನ್ನು ಕೈಬಿಟ್ಟಿವೆ. ವಿಮಾ ಕಂಪನಿಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಹಡಗುಗಳ ವಿಮಾ ರಕ್ಷಣೆಯನ್ನು ರದ್ದುಗೊಳಿಸಿವೆ. ಇದರ ಪರಿಣಾಮವಾಗಿ, ವಿಶ್ವದ ಪ್ರಮುಖ ತೈಲ ಉತ್ಪಾದಕ ಪ್ರದೇಶವಾದ ಮಧ್ಯಪ್ರಾಚ್ಯದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದಲ್ಲಿ ಜಾಗತಿಕ ತೈಲ ಬೆಲೆಗಳು ಸತತ ಮೂರನೇ ದಿನವೂ ಏರಿಕೆ ಕಂಡಿವೆ.
ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ $79.44(7300 ರೂ.) ರಂತೆ ವಹಿವಾಟು ನಡೆಸುತ್ತಿದ್ದು, ಶೇ 2.2 ರಷ್ಟು ಏರಿಕೆಯಾಗಿದೆ. ಸೋಮವಾರ ಇದು 2025ರ ಜನವರಿಯ ಬಳಿಕ ಗರಿಷ್ಠ ಮಟ್ಟವಾದ $82.37(7,585 ರೂ. ) ಕ್ಕೆ ಜಿಗಿದಿತ್ತು. ಹಾಗೆಯೇ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ $72.40(6,665 ರೂ. ) ಕ್ಕೆ ತಲುಪಿದೆ. ಹೆಚ್ಚುತ್ತಿರುವ ಅಪಾಯಗಳನ್ನು ಅಂದಾಜಿಸಿರುವ ಕಂಪನಿಗಳು, ತೈಲ ಮತ್ತು ಅನಿಲ ಹಡಗು ಸಾಗಣೆ ವೆಚ್ಚಗಳನ್ನು ಸಹ ತೀವ್ರವಾಗಿ ಹೆಚ್ಚಿಸಿವೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಭಾರತದ ಇಂಧನ ಪೂರೈಕೆಯು ಸುರಕ್ಷಿತವಾಗಿದೆ ಮತ್ತು ಅದರ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ. ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಿಂದ ಉಂಟಾಗುವ ಅಲ್ಪಾವಧಿಯ ಅಡೆತಡೆಗಳನ್ನು ನಿಭಾಯಿಸಲು ಭಾರತವು ಸಮರ್ಪಕವಾಗಿ ಸಿದ್ಧವಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ, ನಾಲ್ಕನೇ ಅತಿದೊಡ್ಡ ಸಂಸ್ಕರಣಾಕಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಐದನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿರುವ ಭಾರತವು, ಕಚ್ಚಾ ತೈಲದ ಜೊತೆಗೆ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಸಾಕಷ್ಟು ಸಂಗ್ರಹವನ್ನು ಕಾಯ್ದುಕೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ಕಚ್ಚಾ ತೈಲ ಮೂಲಗಳ ಕಾರ್ಯತಂತ್ರವನ್ನು ಗಣನೀಯವಾಗಿ ವೈವಿಧ್ಯಮಯಗೊಳಿಸಿದ್ದು, ಇಂಧನ ಪೂರೈಕೆಗಳು ಇದೀಗ ಪರ್ಯಾಯ ಮಾರ್ಗಗಳ ಮೂಲಕ ನಡೆಯುತ್ತಿವೆ. ಇದರಿಂದಾಗಿ ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಯಾಗಿದೆ.
ದೇಶಾದ್ಯಂತ ಇಂಧನ ಪೂರೈಕೆ ಮತ್ತು ದಾಸ್ತಾನು ಮಟ್ಟವನ್ನು ನಿರಂತರವಾಗಿ ಟ್ರ್ಯಾಕ್ ಮಾಡಲು ಸಚಿವಾಲಯವು ದಿನವಿಡಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಪ್ರಸ್ತುತ ದಾಸ್ತಾನು ಪರಿಸ್ಥಿತಿ ಸಮರ್ಪಕ ಹಾಗೂ ಆರಾಮದಾಯಕವಾಗಿದೆ ಎಂದು ಸರ್ಕಾರ ತಿಳಿಸಿದ್ದು, ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಮೊದಲ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದೆ.
ಸದ್ಯಕ್ಕೆ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯನ್ನು ಕಾಣುವ ಸಾಧ್ಯತೆಯಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಹಾರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿ ಹೇಗೆ ತಿರುವು ಪಡೆಯಲಿದೆ ಎಂಬುದರ ಮೇಲೆ ಮುಂದಿನ ನಿರ್ಧಾರಗಳು ಅವಲಂಬಿತವಾಗಿವೆ.





