ತೀವ್ರ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ನೆರವಿನ ಹಸ್ತ ಚಾಚಿರುವ ಭಾರತ, ಕೊಳವೆ ಮಾರ್ಗದ ಮೂಲಕ 5,000 ಟನ್ ಡೀಸೆಲ್ ಪೂರೈಸಲು ಮುಂದಾಗಿದೆ. ಪರ್ವತಿಪುರ ಗಡಿಯ ಮೂಲಕ ಮಂಗಳವಾರದಿಂದ ಡೀಸೆಲ್ ಪೂರೈಕೆ ಆರಂಭವಾಗಲಿದೆ ಎಂದು ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ಅಧ್ಯಕ್ಷ ಮುಹಮ್ಮದ್ ರೆಜಾನೂರ್ ರಹಮಾನ್ ಖಚಿತಪಡಿಸಿದ್ದಾರೆ.
”ಭಾರತದೊಂದಿಗಿನ ನಮ್ಮ ಒಪ್ಪಂದದ ಪ್ರಕಾರ, ಕೊಳವೆ ಮಾರ್ಗದ ಮೂಲಕ ವಾರ್ಷಿಕವಾಗಿ 1.8 ಲಕ್ಷ ಟನ್ ಡೀಸೆಲ್ ಪೂರೈಕೆಯಾಗಬೇಕಿದೆ. ಪ್ರಸ್ತುತ ಆಗಮಿಸುತ್ತಿರುವ 5,000 ಟನ್ ಡೀಸೆಲ್ ಇದೇ ಒಪ್ಪಂದದ ಒಂದು ಭಾಗವಾಗಿದೆ” ಎಂದು ರಹಮಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಒಪ್ಪಂದದ ಅನ್ವಯ ಆರು ತಿಂಗಳೊಳಗೆ ಕನಿಷ್ಠ 90,000 ಟನ್ ಡೀಸೆಲ್ ಆಮದು ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಆರು ತಿಂಗಳ ಸಂಪೂರ್ಣ ಕೋಟಾದ ಡೀಸೆಲ್ ಅನ್ನು ತರಿಸಿಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ಗೆ 120 ಡಾಲರ್ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ರಷ್ಯಾದ ತೈಲದ ನೆರವಿನಿಂದ ಭಾರತವು ಈ ಬಿಕ್ಕಟ್ಟನ್ನು ನಿಭಾಯಿಸಬಲ್ಲದೇ ಎಂಬ ದೊಡ್ಡ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದುರಾಗಿದೆ.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು
ಬಾಂಗ್ಲಾದೇಶದಲ್ಲಿ ಇಂಧನದ ಅಕ್ರಮ ದಾಸ್ತಾನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. “ಕೆಲವು ಭ್ರಷ್ಟ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಉದ್ದೇಶದಿಂದ ಇಂಧನವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ” ಎಂದು ಇಂಧನ ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದು, ದಾಸ್ತಾನು ಪರಿಶೀಲನೆ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ.
ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಬಾಂಗ್ಲಾದೇಶ ಸರ್ಕಾರವು ವಾಹನಗಳ ವರ್ಗಕ್ಕೆ ಅನುಗುಣವಾಗಿ ಇಂಧನ ಪೂರೈಕೆಗೆ ಮಿತಿ ವಿಧಿಸಿದೆ. ಆದಾಗ್ಯೂ, ಕೆಲವು ಪೆಟ್ರೋಲ್ ಬಂಕ್ಗಳು ನಿಗದಿತ ಕೋಟಾಕ್ಕಿಂತ ಹೆಚ್ಚು ಇಂಧನ ಮಾರಾಟ ಮಾಡುತ್ತಿರುವುದು, ಲಾಭಕೋರತನಕ್ಕಾಗಿ ಅಕ್ರಮವಾಗಿ ದಾಸ್ತಾನು ಮಾಡುತ್ತಿರುವುದು ಹಾಗೂ ಕಾಳಸಂತೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇದನ್ನು ತಡೆಗಟ್ಟಲು ‘ಮೊಬೈಲ್ ನ್ಯಾಯಾಲಯ’ಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿದೆ. ಢಾಕಾದಲ್ಲಿ ನಡೆದ ಇತ್ತೀಚಿನ ಕಾರ್ಯಾಚರಣೆಯಲ್ಲಿ, ತೇಜ್ಗಾಂವ್ನ ಸಿಟಿ ಫಿಲ್ಲಿಂಗ್ ಸ್ಟೇಷನ್ನಲ್ಲಿ (ಎಂಪಿಎಲ್) ಇಂಧನ ಖಾಲಿಯಾಗಿರುವುದು ಕಂಡುಬಂದಿದ್ದು, ಹೊಸ ಇಂಧನ ಬಂದ ನಂತರವಷ್ಟೇ ಕಾರ್ಯಾಚರಣೆ ಪುನರಾರಂಭಗೊಳ್ಳಲಿದೆ. ಅದೇ ಪ್ರದೇಶದ ಕ್ಲೀನ್ ಫ್ಯುಯೆಲ್ ಬಂಕ್ (ಪಿಒಪಿಎಲ್ಸಿ) ಸರ್ಕಾರದ ನಿಯಮಗಳ ಪ್ರಕಾರವೇ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವುದು ದೃಢಪಟ್ಟಿದೆ.





