‘ಮಿಷನ್ ಏಡ್ಸ್ ಸುರಕ್ಷಾ’ ಅಡಿಯಲ್ಲಿ, ಭಾರತವನ್ನು 2027ರ ಡಿಸೆಂಬರ್ 1ರೊಳಗೆ (ವಿಶ್ವ ಏಡ್ಸ್ ದಿನ) ಎಚ್ಐವಿ ಮುಕ್ತ ರಾಷ್ಟ್ರವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಮಹಾನಿರ್ದೇಶಕ ಡಾ. ರಾಕೇಶ್ ಗುಪ್ತಾ ಹೇಳಿದ್ದಾರೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸುರಕ್ಷಾ ಸಂಕಲ್ಪ ಕಾರ್ಯಗಾರ’ದಲ್ಲಿ ಅವರು ಮಾತನಾಡಿದ್ದಾರೆ. “ಭಾರತದಲ್ಲಿ ಎಚ್ಐವಿ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಗುರಿ ಹೊಂದಲಾಗಿದೆ. 2027ರ ಡಿಸೆಂಬರ್ 1ರೊಳಗೆ ದೇಶವನ್ನು ಎಚ್ಐವಿ ಮುಕ್ತವಾಗಿಸಲು ಕೇಂದ್ರ ಸರ್ಕಾರವು ‘ಮಿಷನ್ ಏಡ್ಸ್ ಸುರಕ್ಷಾ’ ಮೂಲಕ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ, ಜಾಗತಿಕ ಗುರಿಗಳಾದ 95-95-99 ಸಾಧಿಸುವ ಗುರಿ ಹೊಂದಿದೆ. ಹೆಚ್ಚಿನ ಎಚ್ಐವಿ ಪ್ರಭಾವ ಮತ್ತು ಸೋಂಕಿನ ಪ್ರಮಾಣವಿರುವ 219 ಆದ್ಯತೆಯ ಜಿಲ್ಲೆಗಳನ್ನು ದೇಶಾದ್ಯಂತ ಗುರುತಿಸಲಾಗಿದೆ. ಸೋಂಕಿನ ಪ್ರಮಾಣ, ಪ್ರಸ್ತುತತೆ, ರೋಗದ ಹೊರೆ ಮತ್ತು ಹೆಚ್ಚಿನ ಅಪಾಯದ ಗುಂಪುಗಳ ಆಧಾರದ ಮೇಲೆ ಗುರುತಿಸಲಾಗಿದೆ” ಎಂದು ಹೇಳಿದ್ದಾರೆ.
“ಕರ್ನಾಟಕದ ಎಚ್ಐವಿ ಸ್ಥಿತಿಗತಿ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದೆ. ರಾಜ್ಯದಲ್ಲಿ ಎಚ್ಐವಿ ಪ್ರಸ್ತುತತೆ 0.44% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಯಾದ 0.2% ಗಿಂತ ಹೆಚ್ಚಿದೆ. ರಾಜ್ಯದಲ್ಲಿ ಸುಮಾರು 2.91 ಲಕ್ಷ ಜನರು ಎಚ್ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ವಾರ್ಷಿಕ ಸುಮಾರು 4,700 ಹೊಸ ಎಚ್ಐವಿ ಪ್ರಕರಣಗಳು ಪತ್ತೆಯಾಗುತ್ತಿವೆ” ಎಂದು ಮಾಹಿತಿ ನೀಡಿದ್ದಾರೆ.
“ರಾಜ್ಯದ 31 ಜಿಲ್ಲೆಗಳಲ್ಲಿ ಈ ಮಿಷನ್ ಜಾರಿಯಲ್ಲಿದ್ದರೂ, 27 ಜಿಲ್ಲೆಗಳನ್ನು ಹೆಚ್ಚಿನ ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಅಲ್ಲಿ ಹೆಚ್ಚಿನ ಗಮನಹರಿಸಲಾಗುತ್ತಿದೆ. ಕಾರವಾರ, ಉಡುಪಿ, ಕೊಪ್ಪಳ, ಮಂಡ್ಯ ಮೊದಲ ’95’ ಗುರಿಯನ್ನು ಸಾಧಿಸಿದ್ದರೆ, ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಗಳು ಎರಡನೇ ’95’ ಗುರಿಯನ್ನು ಸಾಧಿಸಿವೆ” ಎಂದು ತಿಳಿಸಿದ್ದಾರೆ.
“ಗರ್ಭಿಣಿ ಮಹಿಳೆಯರ ಶಿಶುಗಳಿಗೆ ಸೋಂಕು ತಗುಲದಂತೆ ತಡೆಯಲು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಅಗತ್ಯವಾದ ವೈದ್ಯಕೀಯ ಕಿಟ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಲಭ್ಯವಾಗುವಂತೆ ಮಾಡಲು ಯೋಜಿಸಲಾಗಿದೆ. ದೇಶದಲ್ಲಿ ಕೇವಲ ಎರಡು ಜಿಲ್ಲೆಗಳು ಮಾತ್ರ ಮೂರು ಗುರಿಗಳನ್ನು ಸಾಧಿಸಿವೆ. ಆದರೆ, ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳು ಶೀಘ್ರದಲ್ಲೇ ಈ ಸಾಧನೆ ಮಾಡಲಿವೆ ಎಂಬುದು ಸಂತಸದ ವಿಚಾರ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!
“ಕರ್ನಾಟಕದ ಬೇರು ಮಟ್ಟದ ಸಂಘಟಿತ ಪ್ರಯತ್ನ ಮತ್ತು ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಗುರಿ ಸಾಧಿಸುವ ವಿಶ್ವಾಸವಿದೆ. ಈ ಕಾರ್ಯಗಾರವು ಜಿಲ್ಲಾ ತಂಡಗಳಿಗೆ ತಮ್ಮ ಸವಾಲು ಮತ್ತು ಕಾರ್ಯತಂತ್ರಗಳನ್ನು ರೂಪಿಸಲು ಉತ್ತಮ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳನ್ನು ‘ಸುರಕ್ಷಿತ್+’ ವಲಯಗಳನ್ನಾಗಿ ಪರಿವರ್ತಿಸುವುದು ಈ ಮಿಷನ್ನ ಗುರಿಯಾಗಿದೆ” ಎಂದಿದ್ದಾರೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ್ ಗುಪ್ತಾ ಮಾತನಾಡಿ, “ರಾಜ್ಯದಲ್ಲಿ ಎಚ್ಐವಿ ನಿಯಂತ್ರಣ ಕಾರ್ಯಕ್ರಮಗಳಿಗೆ ಹೊಸ ರೂಪ ನೀಡಲಾಗಿದೆ. ಮುಂದಿನ 6 ತಿಂಗಳೊಳಗೆ ಮಹತ್ವದ ಫಲಿತಾಂಶ ಸಾಧಿಸಲು ಗುರಿ ಸಾಧನೆ ಮಾಡುವ ಉದ್ದೇಶ ಹೊಂದಲಾಗಿದೆ” ಎಂದು ಹೇಳಿದ್ದಾರೆ.
“ಸಂಯೋಜಿತ ಸೇವೆಗಳು, ಕೌನ್ಸೆಲಿಂಗ್ ಮತ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ನಡೆಸುವ ಬದಲು, ಅವುಗಳನ್ನು ಪರಸ್ಪರ ಸಂಯೋಜಿಸುವ ಅಗತ್ಯವಿದೆ. ಇದರಿಂದ ರೋಗಿಗಳಿಗೆ ತಡೆರಹಿತ ಸೇವೆ ದೊರಕುತ್ತದೆ. ರಾಜ್ಯದ ಜಿಲ್ಲೆಗಳನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಕಡಿಮೆ ಕಾರ್ಯಕ್ಷಮತೆ ಹೊಂದಿರುವ ‘ಟಯರ್-3’ ಜಿಲ್ಲೆಗಳತ್ತ ವಿಶೇಷ ಗಮನ ಹರಿಸಲಾಗುವುದು. ದತ್ತಾಂಶ ಹೊಂದಾಣಿಕೆ ಅಥವಾ ರಚನಾತ್ಮಕ ಸಮಸ್ಯೆಗಳಿದ್ದರೆ ಅವುಗಳನ್ನು ಶೀಘ್ರವಾಗಿ ಸರಿಪಡಿಸಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಕೆಎಸ್ಎಪಿಎಸ್ನ ರಾಜ್ಯ ನಿರ್ದೇಶಕ ಪದ್ಮ ಬಸವಂತಪ್ಪ, ವಿವಿಧ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಮಿಳುನಾಡು ಮತ್ತು ನಾಗಪುರದ ಪ್ರತಿನಿಧಿಗಳು ಉಪಸ್ಥಿತರಿದ್ದರು.




