ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಜಾಗತಿಕ ಪೂರೈಕೆ ಸರಪಳಿಯ ಏರುಪೇರುರಾಗಿದೆ. ಭಾರತದ ಇಂಧನ ಮತ್ತು ಬೇಳೆಕಾಳುಗಳ ಆಮದು ಸೇರಿದಂತೆ ಹಲವಾರು ಸರಕುಗಳ ಆಮದಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಅವ್ಯವಸ್ಥೆಯಿಂದ ಹೊರಬರಲು ಭಾರತವು ಹೆಣಗಾಡುತ್ತಿದೆ. ಬೇಳೆಕಾಳುಗಳ ಆಮದಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ಭಾರತ, ಮ್ಯಾನ್ಮಾರ್ನಿಂದ ಬೇಳೆಕಾಳುಗಳ ಆಮದನ್ನು ಮುಂದುವರೆಸಲು ಚಿಂತನೆ ನಡೆಸಿದೆ. ಅದಕ್ಕಾಗಿ, ಈ ಆರ್ಥಿಕ ವರ್ಷದಲ್ಲಿ ಅಂತ್ಯಗೊಳ್ಳಲಿರುವ ‘ಬೇಳೆಕಾಳು ಆಮದು ಒಪ್ಪಂದವನ್ನು 2025-26ರ ನಂತರವೂ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಲು ಭಾರತ ನಿರ್ಧರಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ವಾಣಿಜ್ಯ ಸಚಿವಾಲಯವು ಈ ಬಗ್ಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದೆ. ಮ್ಯಾನ್ಮಾರ್ ಜೊತೆಗಿನ ಅಸ್ತಿತ್ವದಲ್ಲಿರುವ ‘ತಿಳುವಳಿಕಾ ಒಪ್ಪಂದ’ವನ್ನು (MoU) ಮುಂದಿನ 5 ವರ್ಷಗಳ ಕಾಲ ಮುಂದುವರಿಸಬಹುದು ಎಂದು ತಿಳಿಸಿದೆ. ಇದರೊಂದಿಗೆ, ಈ ಹಿಂದೆ ಒಪ್ಪಿಕೊಂಡಿದ್ದ ಒಂದು ಲಕ್ಷ ಟನ್ ತೊಗರಿ ಬೇಳೆಯ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಲಕ್ಷ ಟನ್ ಬೇಳೆಕಾಳುಗಳನ್ನು ಭಾರತಕ್ಕೆ ರಫ್ತು ಮಾಡುವಂತೆ ಮ್ಯಾನ್ಮಾರ್ಗೆ ಕೇಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
2021ರ ಜೂನ್ನಲ್ಲಿ, ಭಾರತ ಮತ್ತು ಮ್ಯಾನ್ಮಾರ್ ಉದ್ದು ಮತ್ತು ತೊಗರಿ ಬೇಳೆಗಳ ವ್ಯಾಪಾರವನ್ನು ಉತ್ತೇಜಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದವು. ಮ್ಯಾನ್ಮಾರ್ನ ವಾಣಿಜ್ಯ ಸಚಿವಾಲಯ ಮತ್ತು ಭಾರತದ ಗ್ರಾಹಕ ವ್ಯವಹಾರಗಳ ಸಚಿವಾಲಯದ ನಡುವೆ ಈ ಒಪ್ಪಂದ ನಡೆದಿತ್ತು. ಈ ಒಪ್ಪಂದದಂತೆ, 2021-22 ರಿಂದ 2025-26 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಖಾಸಗಿ ವ್ಯಾಪಾರದ ಮೂಲಕ ವಾರ್ಷಿಕವಾಗಿ 2.5 ಲಕ್ಷ ಮೆಟ್ರಿಕ್ ಟನ್ ಉದ್ದು ಮತ್ತು 1 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.
ಈ ಒಪ್ಪಂದವು ಈ ವರ್ಷದ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಅಗತ್ಯ ವಸ್ತುಗಳ ಬೆಲೆ ಮತ್ತು ಲಭ್ಯತೆಯನ್ನು ಪರಿಶೀಲಿಸಿದ ನಂತರ, ಒಪ್ಪಂದವನ್ನು ವಿಸ್ತರಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, 2025-26ರ ಅವಧಿಯಲ್ಲಿ ದೇಶೀಯವಾಗಿ ತೊಗರಿ ಮತ್ತು ಉದ್ದಿನ ಉತ್ಪಾದನೆ ಕಡಿಮೆಯಾಗುವ ಮುನ್ಸೂಚನೆಗಳೂ ಇರುವುದರಿಂದ ಈ ನಿರ್ಧಾರ ಮಹತ್ವ ಪಡೆದಿದೆ.
ಈ ಲೇಖನ ಓದಿದ್ದೀರಾ?: ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ
ಭಾರತದ ವಾರ್ಷಿಕ ಬೇಳೆಕಾಳುಗಳ ಬೇಡಿಕೆ 28-29 ಮಿಲಿಯನ್ ಟನ್ಗಳಷ್ಟಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಉತ್ಪಾದನೆಯು ಸುಮಾರು 24-25 ಮಿಲಿಯನ್ ಟನ್ಗಳಿಗೆ ಸೀಮಿತವಾಗಿದೆ. ಹೀಗಾಗಿ ಬೇಡಿಕೆಯನ್ನು ಪೂರೈಸಲು ದೇಶವು ಆಮದಿನ ಮೇಲೆ ಅವಲಂಬಿತವಾಗಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, 2024-25ರಲ್ಲಿ 3.64 ಮಿಲಿಯನ್ ಟನ್ಗಳಷ್ಟಿದ್ದ ತೊಗರಿ ಉತ್ಪಾದನೆಯು 2025-26ರಲ್ಲಿ 3.45 ಮಿಲಿಯನ್ ಟನ್ಗಳಿಗೆ ಕುಸಿಯುವ ಸಾಧ್ಯತೆ ಇದೆ. ಹಾಗೆಯೇ ಉದ್ದಿನ ಉತ್ಪಾದನೆಯೂ ಕಳೆದ ವರ್ಷದ 2.24 ಮಿಲಿಯನ್ ಟನ್ಗಳಿಗೆ ಹೋಲಿಸಿದರೆ ಈ ಬಾರಿ 1.74 ಮಿಲಿಯನ್ ಟನ್ಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ.
ಇತ್ತೀಚಿನ ವರ್ಷಗಳಲ್ಲಿ ಮ್ಯಾನ್ಮಾರ್ ಭಾರತಕ್ಕೆ ಬೇಳೆಕಾಳುಗಳನ್ನು ಪೂರೈಸುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ.




