ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ವಾಯು ಮಾಲಿನ್ಯವಾಗಿದೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ಪ್ರತಿ ವರ್ಷವೂ ಪರಿಸ್ಥಿತಿ ಭೀಕರವಾಗಿ ಹದಗೆಡುತ್ತಲೇ ಇರುತ್ತದೆ ಎಂದು ಯುಕೆ ಮೂಲದ ಭಾರತೀಯ ಶ್ವಾಸಕೋಶಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ತ್ವರಿತ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.
ವಾಯು ಮಾಲಿನ್ಯದಿಂದ ಎದುರಾಗುವ ಕಾಯಿಲೆಗಳು ಸುನಾಮಿಯಂತೆ ಹೆಚ್ಚಾಗುತ್ತಿದೆ. ರೋಗನಿರ್ಣಯ ಮಾಡದೆ, ಚಿಕಿತ್ಸೆ ದೊರೆಯದೆ ಹಲವರು ಬಳಲುತ್ತಿದ್ದಾರೆ. ವಾಯು ಮಾಲಿನ್ಯವು ಭಾರತೀದ ಆರೋಗ್ಯ ವ್ಯವಸ್ಥೆ ಮತ್ತು ನಾಗರಿಕರ ಮೇಲೆ ಭಾರೀ, ಶಾಶ್ವತವಾದ ಹಾನಿಯನ್ನುಂಟುಮಾಡುತ್ತದೆ ಎಂದು ವೈದ್ಯರು ಪ್ರತಿಪಾದಿಸಿದ್ದಾರೆ.
ಡಿಸೆಂಬರ್ನಲ್ಲಿ, ದೆಹಲಿ ಆಸ್ಪತ್ರೆಗಳಲ್ಲಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ಸಂಖ್ಯೆ 20ರಿಂದ 30%ರಷ್ಟು ಹೆಚ್ಚಾಗಿದೆ. ದೆಹಲಿಯ ವಾಯು ಮಾಲಿನ್ಯಕ್ಕೆ ವಾಹನಗಳು 40% ಕೊಡುಗೆ ನೀಡುತ್ತಿವೆ. ಪಳೆಯುಳಿಕೆ ಇಂಧನಗಳ ಬಳಕೆಯು ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಲು ಕಾರಣವಾಗಿದೆ. ಇದನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ವಾಯು ಮಾಲಿನ್ಯದ ಕುರಿತು ಚರ್ಚೆಗಳು ನಡೆಯಲೇ ಇಲ್ಲ. ಭಾರತೀಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯನ್ನು ಬದಿಗೊತ್ತಿ, ಅಧಿವೇಶನ ಮುಗಿದೇ ಹೋಯಿತು. ಈ ಬಗ್ಗೆ, ವಿಪಕ್ಷಗಳು, ಪರಿಸರ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವಾಯು ಮಾಲಿನ್ಯವನ್ನು ನಿಯಂತ್ರಿಸುವತ್ತ ಭಾರತ ಸರ್ಕಾರವು ತುರ್ತು ಗಮನ ಹರಿಸಬೇಕಿತ್ತು. ಆದರೆ, ಈಗಾಗಲೇ ಬಹಳ ತಡವಾಗಿದೆ. ಉತ್ತರ ಭಾರತದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಈಗಾಗಲೇ ಹಾನಿಯುಂಟು ಮಾಡಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದು ಲಿವರ್ಪೂಲ್ನ ಸಲಹೆಗಾರ ಶ್ವಾಸಕೋಶಶಾಸ್ತ್ರಜ್ಞ ಮತ್ತು ಭಾರತದ ‘ಕೋವಿಡ್-19 ಸಲಹಾ ಸಮಿತಿ’ಯ ಮಾಜಿ ಸದಸ್ಯ ಮನೀಶ್ ಗೌತಮ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ವಾಯು ಮಾಲಿನ್ಯದ ಚರ್ಚೆಯೇ ಇಲ್ಲದೆ ಮುಗಿಯಿತು ಸಂಸತ್ ಅಧಿವೇಶನ!
“ಮಾಲಿನ್ಯ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕ್ರಮಗಳು ನಿರ್ಣಾಯಕವಾಗಿದ್ದರೂ, ಸದ್ಯದ ಪರಿಸ್ಥಿತಿಗೆ ಅದಷ್ಟೇ ಸಾಕಾಗುವುದಿಲ್ಲ. ಭಾರತವು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಸ್ತರಿಸಬೇಕು. ಸರ್ಕಾರದ ಕ್ರಮಗಳು ಆರಂಭಿಕ ರೋಗನಿರ್ಣಯ ಮತ್ತು ರಚನಾತ್ಮಕ ಚಿಕಿತ್ಸಾ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುಕೊಡಬೇಕು” ಎಂದು ಅವರು ಹೇಳಿದ್ದಾರೆ.
ಲಂಡನ್ನ ಸೇಂಟ್ ಜಾರ್ಜ್ ವಿಶ್ವವಿದ್ಯಾಲಯ ಆಸ್ಪತ್ರೆಯ ಹೃದ್ರೋಗತಜ್ಞ ರಾಜಯ್ ನಾರಾಯಣ್ ಅವರ ಪ್ರಕಾರ, ವಾಯುಮಾಲಿನ್ಯವು ಹೃದಯರಕ್ತನಾಳ, ಉಸಿರಾಟ, ನರವಿಜ್ಞಾನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದಕ್ಕೆ, ಹಲವಾರು ವೈಜ್ಞಾನಿಕ ಪುರಾವೆಗಳು ಇವೆ. ಸಮಸ್ಯೆಯನ್ನು ಪರಿಹರಿಸುವಲ್ಲಿ ಯಾವುದೇ ವಿಳಂಬವು ಆರೋಗ್ಯ ಮತ್ತು ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.
ಅಲ್ಪಾವಧಿಯ ಕ್ರಮಗಳು ತಕ್ಷಣದ ಸೋಂಕಿಗೆ ಒಳಗಾಗುವಿಕೆಯನ್ನು ಕಡಿಮೆ ಮಾಡಬಹುದಾದರೂ, ಶುದ್ಧ ಗಾಳಿಗೆ ಆದ್ಯತೆ ನೀಡುವ, ದುರ್ಬಲ ಜನಸಂಖ್ಯೆಯನ್ನು ರಕ್ಷಿಸುವ ಹಾಗೂ ಎಲ್ಲ ಕ್ಷೇತ್ರಗಳನ್ನು ಒಳಗೊಂಡು ವೈಜ್ಞಾನಿಕ ನೀತಿಗಳನ್ನು ರೂಪಿಸುವುದರಲ್ಲಿ ನಿಜವಾದ ಪರಿಹಾರವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.




