ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ‘ಅಮೆರಿಕ ಜೊತೆ ಸುದೀರ್ಘ ಯುದ್ಧಕ್ಕೆ ಸಿದ್ಧವಾಗಿದ್ದೇವೆ. ಜಾಗತಿಕ ಆರ್ಥಿಕ ಸಂಕಷ್ಟದಿಂದ ಮಾತ್ರ ಸಂಘರ್ಷ ಅಂತ್ಯಗೊಳ್ಳುತ್ತದೆ’ ಎಂದು ಇರಾನ್ ಹೇಳಿದೆ. ಈ ಪರಿಸ್ಥಿತಿಯಿಂದಾಗಿ, ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದ್ದ ಸುಮಾರು 2,000 ಹ್ಯುಂಡೈ ಕಾರುಗಳು ಮಾರ್ಗಮಧ್ಯದಿಂದ ಮರಳಿ ಭಾರತಕ್ಕೆ ಬರುವ ಸಾಧ್ಯತೆ ಇದೆ. ಈ ಕಾರುಗಳು ಚೆನ್ನೈ ಬಂದರಿಗೆ ಬರಲಿವೆ ಎಂದು ವರದಿಯಾಗಿದೆ.
ಈ ವಾಹನಗಳನ್ನು ಪಶ್ಚಿಮ ಏಷ್ಯಾಗೆ ಕಳುಹಿಸುವ ಉದ್ದೇಶದಿಂಧ ಶ್ರೀಲಂಕಾದ ಹಂಬಂತೋಟ ಬಂದರಿನ ಮೂಲಕ ಸಾಗಿಸಲಾಗಿತ್ತು. ಆದರೆ, ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದ ಮಾರ್ಗಗಳಲ್ಲಿನ ಸಂಚಾರವು ಸ್ಥಗಿತಗೊಂಡಿವೆ. ಆದ್ದರಿಂದ, ಕಾರುಗಳನ್ನು ಹೊತ್ತ ಹಡಗಿನ ಪ್ರಯಾಣ ಮತ್ತು ಸರಕು ಸಾಗಣೆಯ ಬಗ್ಗೆ ಮರುಪರಿಶೀಲನೆ ನಡೆಸಬೇಕಾಗಿದೆ ಎಂದು ಚೆನ್ನೈ ಬಂದರು ಅಧಿಕಾರಿಯೊಬ್ಬರು ಹೇಳಿರುವುದಾಗಿ ‘TNIE’ ವರದಿ ಮಾಡಿದೆ.
ಬಂದರು ಮೂಲಗಳ ಪ್ರಕಾರ, ಗಲ್ಫ್ ಮಾರ್ಗಗಳಿಂದ ಸುಮಾರು 4,000 ಕಂಟೇನರ್ಗಳನ್ನು ಮರಳಿ ಬೇರೆಡೆಗೆ ತಿರುಗಿಸಲಾಗಿದೆ. ಇದರಲ್ಲಿ ಚೆನ್ನೈನಿಂದ ಹೊರಟಿದ್ದ 1,800 ಕಂಟೇನರ್ಗಳು ಸೇರಿವೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವು ಪ್ರಮುಖ ಸಮುದ್ರ ಮಾರ್ಗಗಳಿಗೆ ಅಡ್ಡಿಪಡಿಸಿದೆ. ಪಶ್ಚಿಮ ಏಷ್ಯಾ ಮತ್ತು ಯುರೋಪ್ ಮಾರುಕಟ್ಟೆಗಳಿಗೆ ರಫ್ತಾಗಬೇಕಿದ್ದ ಸರಕುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿವೆ. ಇದರಿಂದಾಗಿ ಭಾರತೀಯ ರಫ್ತುದಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 28ರಂದು ಸಂಘರ್ಷ ಪ್ರಾರಂಭವಾದಾಗಿನಿಂದ, ತಮಿಳುನಾಡಿನ ಬಂದರುಗಳಿಂದ ಹಡಗುಗಳ ಸಂಚಾರ ನಿಧಾನವಾಗಿದೆ. ತೂತುಕುಡಿಯ ವಿ.ಒ. ಚಿದಂಬರನಾರ್ (VOC) ಬಂದರು ಭಾರಿ ಹೊಡೆತ ಅನುಭವಿಸಿದೆ. ಈ ಬಂದರಿನಿಂದ ರಫ್ತಾಗಬೇಕಿದ್ದ ಸಿದ್ಧ ಉಡುಪುಗಳು, ಗೃಹೋಪಯೋಗಿ ಜವಳಿ, ಆಹಾರ, ಮೊಟ್ಟೆ, ಕಾಸ್ಟಿಂಗ್ ಸೇರಿದಂತೆ ಇತರ ಕಂಟೇನರ್ ಸರಕುಗಳ ಸಾಗಣೆಯು ಬಿಕ್ಕಟ್ಟಿನಲ್ಲಿ ಸಿಲುಕಿದೆ.
ಫೆಬ್ರವರಿ 28ರಂದು VOC ಬಂದರಿನಿಂದ ಸುಮಾರು 250 ಕಂಟೇನರ್ಗಳನ್ನು ಹೊತ್ತು ಹೊರಟಿದ್ದ ‘ಜಾಂಗ್ ಗು ತೈ ಯುವಾನ್’ (Zhong Gu Tai Yuan) ಹಡಗು ಮಧ್ಯ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಈಗ ಅದು ಮುಂಬೈನ ನವಶೇವಾ ಬಂದರಿಗೆ ಮರಳಿದ್ದು, ಅದಲ್ಲಿ ಕಂಟೇನರ್ಗಳನ್ನು ಇಳಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಜವಳಿ ಮತ್ತು ಸಿದ್ಧ ಉಡುಪುಗಳಿಂದ ತುಂಬಿದ ಕಂಟೇನರ್ಗಳು ತೂತುಕುಡಿಯ ಹೊರವಲಯದಲ್ಲಿರುವ ವಿವಿಧ ಕಂಟೇನರ್ ಫ್ರೈಟ್ ಸ್ಟೇಷನ್ಗಳು (CFSs), ಗೋದಾಮುಗಳು, ತಿರುಪುರ್, ಕರೂರ್, ನಾಮಕ್ಕಲ್ ಹಾಗೂ ಕೊಯಮತ್ತೂರಿನ ಉತ್ಪಾದನಾ ಕೇಂದ್ರಗಳಲ್ಲಿ ಸಿಲುಕಿಕೊಂಡಿವೆ ಎಂದು ರಫ್ತುದಾರರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್ಗೆ ತೈಲ, ಇರಾನ್ಗೆ ನೀರಿನ ಅಭಾವ, ಅಮೆರಿಕ್ಕೆ ಅನಗತ್ಯ ವೆಚ್ಚ: ಯುದ್ಧದ ಭೀಕರ ಪರಿಣಾಮಗಳು
ಒಂದು ವೇಳೆ ಹಡಗುಗಳು ಸರಕುಗಳನ್ನು ತಾತ್ಕಾಲಿಕವಾಗಿ ಇಳಿಸಲು ನಿರ್ಧರಿಸಿದರೆ, ಅವುಗಳನ್ನು ಸಂಗ್ರಹಿಸಲು VOC ಬಂದರು ಅಧಿಕಾರಿಗಳು ಟರ್ಮಿನಲ್ ಪ್ರದೇಶದ ಹೊರಗೆ 19,000 ಚದರ ಮೀಟರ್ ಭೂಮಿಯನ್ನು ಗುರುತಿಸಿದ್ದಾರೆ. ಚೆನ್ನೈ ಬಂದರು ಇದೇ ಉದ್ದೇಶಕ್ಕಾಗಿ 20,000 ಚದರ ಮೀಟರ್ ಯಾರ್ಡ್ ಸ್ಥಳವನ್ನು ಮೀಸಲಿಟ್ಟಿದೆ.
“ಪರಿಸ್ಥಿತಿಯನ್ನು ಅವಲೋಕಿಸಲು ಸೋಮವಾರ ರಫ್ತುದಾರರೊಂದಿಗೆ ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಲಾಗಿದೆ” ಎಂದು ಚೆನ್ನೈ ಬಂದರು ಪ್ರಾಧಿಕಾರದ ಅಧ್ಯಕ್ಷ ಎಸ್. ವಿಶ್ವನಾಥನ್ ತಿಳಿಸಿದ್ದಾರೆ.
“ಒಂದು ವೇಳೆ ಸರಕುಗಳು ಬೇಗನೆ ಹಾಳಾಗುವ ವಸ್ತುಗಳಾಗಿದ್ದರೆ, ಅವುಗಳನ್ನು ದೇಶೀಯ ಬಳಕೆಗಾಗಿ ಮರಳಿ ತರಬಹುದು. ಅಂತಹ ಪರಿಸ್ಥಿತಿ ಚೆನ್ನೈ ಬಂದರಿನಲ್ಲಿ ಇದುವರೆಗೆ ಎದುರಾಗಿಲ್ಲದಿದ್ದರೂ, ಪಶ್ಚಿಮದ ಬಂದರುಗಳು ಈ ಹಿಂದೆ ಇಂತಹ ಸರಕುಗಳನ್ನು ದೇಶೀಯ ಮಾರುಕಟ್ಟೆಗಳಿಗೆ ತಿರುಗಿಸಿವೆ” ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ತಪ್ಪಿಸಲು ಹಡಗುಗಳಿಗೆ ಪರ್ಯಾಯ ಮಾರ್ಗಗಳ ಆಯ್ಕೆಗಳನ್ನು ಸಹ ಅಧಿಕಾರಿಗಳು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.




