ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆ ಎದುರಾಗಿದೆ ಎಂದು ಬೆಂಗಳೂರು, ಚೆನ್ನೈ ಹಾಗೂ ಮುಂಬೈನ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ, ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸುವಂತೆ ತೈಲ ಸಂಸ್ಕರಣಾಗಾರಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮತ್ತು ಮಧ್ಯಪ್ರಾಚ್ಯದ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಉಂಟಾದ ಅಡಚಣೆಯಿಂದಾಗಿ ಕಳೆದ ಶನಿವಾರವಷ್ಟೇ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಗೃಹಬಳಕೆಯ ಅಡುಗೆ ಅನಿಲದ ದರವನ್ನು 60 ರೂ. ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರವನ್ನು 115 ರೂ. ಏರಿಕೆ ಮಾಡಲಾಗಿತ್ತು. ಇದೀಗ, ಎಲ್ಪಿಜಿ ಕೊರತೆ ಎದುರಾಗಿದೆ.
ಬೆಂಗಳೂರು ಹೋಟೆಲ್ಗಳ ಸಂಘದ ಪ್ರಕಾರ, ಎಲ್ಪಿಜಿ ಕೊರತೆಯು ಮಾರ್ಚ್ 10ರಿಂದ ನಗರಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು.
“ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಮಂಗಳವಾರದಿಂದ ಕೆಲವು ಹೋಟೆಲ್ಗಳನ್ನು ಮುಚ್ಚಲಾಗುತ್ತಿದೆ. ಹೋಟೆಲ್ ಉದ್ಯಮವು ಅತ್ಯಗತ್ಯ ಸೇವೆಯಾಗಿರುವುದರಿಂದ, ದಿನನಿತ್ಯದ ಊಟಕ್ಕಾಗಿ ಹೋಟೆಲ್ಗಳನ್ನು ಅವಲಂಬಿಸಿರುವ ಸಾಮಾನ್ಯ ಜನರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ತೊಂದರೆಯಾಗಲಿದೆ” ಎಂದು ಸಂಘ ಹೇಳಿದೆ.
“ತೈಲ ಕಂಪನಿಗಳು 70 ದಿನಗಳ ಕಾಲ ತಡೆರಹಿತ ಗ್ಯಾಸ್ ಪೂರೈಕೆಯ ಭರವಸೆ ನೀಡಿದ್ದವು. ಆದರೆ, ಈಗ ಇದ್ದಕ್ಕಿದ್ದಂತೆ ಪೂರೈಕೆ ಸ್ಥಗಿತಗೊಳಿಸಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಗ್ಯಾಸ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ನಮ್ಮ ಹೋಟೆಲ್ ಉದ್ಯಮವು ಸಂಕಷ್ಟ ಎದುರಿಸಲಿದೆ,” ಎಂದು ಸಂಘ ತಿಳಿಸಿದೆ.
“ಸಂಬಂಧಪಟ್ಟ ಕೇಂದ್ರ ಸಚಿವರು ಈ ವಿಷಯದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವಾಣಿಜ್ಯ ಗ್ಯಾಸ್ ಪೂರೈಕೆಯನ್ನು ಪುನರಾರಂಭಿಸಿ ಹೋಟೆಲ್ ಉದ್ಯಮಕ್ಕೆ ಸಹಕರಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಜನರಿಗೆ ಸೇವೆ ಸಲ್ಲಿಸಲು ಕೊನೆಯ ಹನಿ ಇರುವವರೆಗೂ ನಾವು ಕಾರ್ಯನಿರ್ವಹಿಸುತ್ತೇವೆ” ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಇನ್ನು, ಚೆನ್ನೈನಲ್ಲಿಯೂ ಹೋಟೆಲ್ ಸಂಘವು ಇದೇ ಪರಿಸ್ಥಿತಿಯನ್ನು ವಿವರಿಸಿದೆ. ಅಲ್ಲದೆ, ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
“ಆಹಾರೋದ್ಯಮವು ಅನೇಕ ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ಪೂರೈಸಲು 24×7 ಕೆಲಸ ಮಾಡುತ್ತದೆ. ವಾಣಿಜ್ಯ ಎಲ್ಪಿಜಿ ಪೂರೈಕೆಗೆ ಅಡ್ಡಿಯಾದರೆ ಐಟಿ ಪಾರ್ಕ್ಗಳು, ಕಾಲೇಜು ಹಾಸ್ಟೆಲ್ಗಳ ವಿದ್ಯಾರ್ಥಿಗಳು, ರೈಲು ಹಾಗೂ ವ್ಯಾಪಾರ ಪ್ರಯಾಣಿಕರೆಲ್ಲರೂ ತೊಂದರೆಗೆ ಒಳಗಾಗುತ್ತಾರೆ,” ಎಂದು ಸಂಘದ ಅಧ್ಯಕ್ಷ ಎಂ. ರವಿ ಹೇಳಿದ್ದಾರೆ.
ಹೋಟೆಲ್ ಉದ್ಯಮಗಳ ಆತಂಕಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು, ಹೆಚ್ಚಿನ ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ತೈಲ ಸಂಸ್ಕರಣಾಗಾರಗಳಿಗೆ ಆದೇಶ ನೀಡಿದೆ. ಅಲ್ಲದೆ, ಬುಕ್ಕಿಂಗ್ ಅವಧಿಯಲ್ಲಿ 25 ದಿನಗಳ ಅಂತರವಿರಬೇಕು ಎಂದು ಸೂಚಿಸಿದೆ.
ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳುವಂತೆ; “ಭಾರತವು ಸುರಕ್ಷಿತ ಸ್ಥಿತಿಯಲ್ಲಿದೆ. ಆತಂಕ ಪಡುವ ಅಗತ್ಯವಿಲ್ಲ. ನಮ್ಮ ನಾಗರಿಕರ ಇಂಧನ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸಲಾಗುತ್ತಿದೆ” ಎಂದು ಹೇಳಿದ್ದಾರೆ.




