ಮಧ್ಯಪ್ರಾಚ್ಯದಲ್ಲಿನ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧ ಇಡೀ ಜಗತ್ತು ತತ್ತರಿಸುವಂತೆ ಮಾಡಿದೆ. ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಮತ್ತು ಎಲ್ಪಿಜಿ ಕೊರತೆ ಎದುರಾಗಿದೆ. ಭಾರತದಲ್ಲಿ ಈಗಾಗಲೇ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್ಗಳಲ್ಲಿ ಎಲ್ಪಿಜಿಗಾಗಿ ಹಾಹಾಕಾರ ಎದುರಾಗಿದೆ. ಗೃಹ ಬಳಕೆಯ ಸಿಲಿಂಡರ್ಗಳೂ ದೊರೆಯದ ಪರಿಸ್ಥಿತಿ ಎದುರಾಗುತ್ತಿದೆ. ಎಲ್ಪಿಜಿ ಕೊರತೆಯು ಆತಂಕ, ಪ್ರತಿಭಟನೆಗಳಿಗೆ ಕಾರಣವೂ ಆಗಿದೆ.
ಈ ನಡುವೆ, ಈ ಹಿಂದೆ ಪ್ರಧಾನಿ ಮೋದಿ ಅವರು ಪ್ರತಿಪಾದಿಸಿದ್ದ ‘ಗಟಾರಾ ಗ್ಯಾಸ್ ಥಿಯರಿ’ ಮತ್ತೆ ಚರ್ಚೆಯಲ್ಲಿದ್ದು, ಮುನ್ನೆಲೆ ಬಂದಿದೆ. ಲೋಕಸಭಾ ಕಲಾಪದ ಸಮಯದಲ್ಲಿ, ಮಾಜಿ ಬಿಜೆಪಿಗ, ಹಾಲಿ ಟಿಎಂಸಿ ಸಂಸದ ಕೀರ್ತಿ ಆಜಾದ್ ಅವರು ಮೋದಿ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ, ತೀಕ್ಷ್ಣವಾದ ವ್ಯಂಗ್ಯ ಮಾಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಗಟಾರ್ ಗ್ಯಾಸ್ ಬಗ್ಗೆ ಹೇಳಿದ್ದರು. ಅದರ ಮೇಲೆ ಸರಿಯಾಗಿ ರಿಸರ್ಚ್ ಮಾಡಿ, ಬಜೆಟ್ನಲ್ಲಿ ಹಣ ಹಾಕಿದ್ದರೆ ಇಂದು ದೇಶದಲ್ಲಿ ಗ್ಯಾಸ್ ಕೊರತೆ ಇರಲಿಲ್ಲ. ಗಟಾರ್ ಗ್ಯಾಸ್ನಿಂದಲೇ ಎಲ್ಲ ಅಗತ್ಯತೆ ಪೂರೈಸಬಹುದಿತ್ತು!” ಎಂದು ಅಣಕಿಸಿದ್ದಾರೆ.
ಅಂದಹಾಗೆ, 2018ರಲ್ಲಿ ತಮ್ಮ ಸ್ವಂತ ಊರಾದ ಗುಜರಾತ್ನ ವಡ್ನಗರ್ನಲ್ಲಿ ಭಾಷಣ ಮಾಡಿದ್ದ ಮೋದಿ, “ಗಟಾರ್ ಅಥವಾ ಕೊಳಚೆ ನೀರಿನಿಂದ ಗ್ಯಾಸ್ ಉತ್ಪಾದಿಸಬಹುದು. ಒಬ್ಬ ಚಹಾ ವ್ಯಾಪಾರಿ ಗಟಾರ್ನಿಂದ ಬರುವ ಗ್ಯಾಸ್ ಬಳಸಿ ಚಹಾ ಮಾಡುತ್ತಿದ್ದ. ಇದು ಬಯೋಗ್ಯಾಸ್ನ ಶಕ್ತಿ ತೋರಿಸುತ್ತದೆ. ಗಟಾರಾ ಗ್ಯಾಸ್ನಿಂದ ಚಹಾ ಮಾಡಬಹುದು. ಇದು ಗ್ರೀನ್ ಎನರ್ಜಿಯ ಭಾಗವಾಗಿದೆ” ಎಂದು ಹೇಳಿದ್ದರು.
ಮೋದಿ ಅವರ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಮತ್ತು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ‘ಗಟಾರ್ ಗ್ಯಾಸ್ ಥಿಯರಿ’ ಎಂದು ಭಾರೀ ಟ್ರೋಲ್ ಮಾಡಿದ್ದರು.
ಈ ಲೇಖನ ಓದಿದ್ದೀರಾ?: ಮೋದಿ ಇಸ್ರೇಲ್ ದೋಸ್ತಿ; ಎಫೆಕ್ಟ್ ಮಾತ್ರ ಭಾರತಕ್ಕೆ!
ಇದೀಗ, ಆ ಗಟಾರಾ ಗ್ಯಾಸ್ ಹೇಳಿಕೆಯನ್ನು ಉಲ್ಲೇಖಿಸಿರುವ ಕೀರ್ತಿ ಆಜಾದ್, ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ. ಮಾರ್ಚ್ 5ರಂದು ಕೂಡ ಟ್ವೀಟ್ ಮಾಡಿದ್ದ ಕೀರ್ತಿ ಆಜಾದ್, “ಇಡೀ ಜಗತ್ತು ಅನಿಲ ಕೊರತೆಯನ್ನು ಅನುಭವಿಸಬಹುದು. ಆದರೆ ಭಾರತ ಸ್ವಾವಲಂಬಿಯಾಗಬೇಕು. ಗಟಾರಾ ಗ್ಯಾಸ್ ಸಂಶೋಧಕರಿಗೆ ಧನ್ಯವಾದಗಳು. ಅವರು ಗಲ್ಗೋಟಿಯಾ ವಿಶ್ವವಿದ್ಯಾಲಯದ ವಿಜ್ಞಾನಿ” ಎಂದು ಟೀಕಿಸಿದ್ದರು.
ಸದ್ಯ, ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಕೊರತೆ ತೀವ್ರವಾಗಿದೆ. ರಷ್ಯಾ ಕೂಡ ಈ ಹಿಂದಿನಂತೆ ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಪೂರೈಕೆ ಮಾಡುವುದಿಲ್ಲ, ಮಾರುಕಟ್ಟೆ ಬೆಲೆಯಲ್ಲಿಯೇ ಮಾರಾಟ ಮಾಡುತ್ತೇವೆ ಎಂದು ಹೇಳಿದೆ. ಇಂಧನ ಬೆಲೆಗಳು ಏರಿಕೆಯಾಗಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳು ಸರ್ಕಾರದ ಊರ್ಜಾ ನೀತಿಯನ್ನು ಟೀಕಿಸುತ್ತಿವೆ.




